Asianet Suvarna News Asianet Suvarna News

ಗ್ರಾಮಸ್ಥರಿಗೆ ಗಾಡ್ ಪ್ರಾಬ್ಲಂ! ಊರಿನ ಹಿತ ಕಾಪಾಡ್ಬೇಕಾದ ದೈವಕ್ಕೆ ಇಲ್ಲಿ ಶಾಪ!

ವೀರನಾರಾಯಣ ದೇವಾಲಯವನ್ನ ಪುರಾತತ್ವ ಇಲಾಖೆ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿರೋದ್ರಿಂದ ದೇವಾಲಯದ 300 ಮೀಟರ್ ವ್ಯಾಪ್ತಿಯಲ್ಲಿ ಕಟ್ಟಡದ ಕೆಲಸ ನಿಷೇಧವಾಗಿರೋದು ಗ್ರಾಮಸ್ಥರಿಗೆ ನುಂಗಲಾರದ ಬಿಸಿತುಪ್ಪವಾಗಿದೆ.

First Published Apr 10, 2022, 4:34 PM IST | Last Updated Apr 10, 2022, 6:58 PM IST

ಚಿಕ್ಕಮಗಳೂರು (ಏ. 10): ತಾಲೂಕಿನ ಬೆಳವಾಡಿ ಗ್ರಾಮದಲ್ಲಿರೋ ಹೊಯ್ಸಳರ ಕಾಲದ ತ್ರಿಕೂಟಾಚಲ ಶೈಲಿಯ ವೀರನಾರಾಯಣಸ್ವಾಮಿ ದೇವಾಲಯ ಬೇಲೂರು-ಹಳೇಬೀಡಿಗಿಂತ ಹಳೆಯದ್ದಾಗಿದ್ದು, ಜೈನ ಕೇಂದ್ರವೂ ಆಗಿತ್ತು. 

ಮೈಸೂರಿನ ಅರಸರು ಈ ಗ್ರಾಮವನ್ನ ಶೃಂಗೇರಿ ಮಠಕ್ಕೆ ಜಹಾಗೀರು ನೀಡಿದ್ರು. ಆದ್ರೀಗ, ಈ ದೇವಾಲಯವನ್ನ ಪುರಾತತ್ವ ಇಲಾಖೆ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿರೋದ್ರಿಂದ ವೀರನಾರಾಯಣನೇ ಈ ಬೆಳವಾಡಿಗೆ ಶಾಪವಾಗಿದ್ದಾನೆ. ರಾಷ್ಟ್ರೀಯ ಸ್ಮಾರಕವಾಗಿರೋದ್ರಿಂದ ದೇವಾಲಯದ 300 ಮೀಟರ್ ವ್ಯಾಪ್ತಿಯಲ್ಲಿ ಕಟ್ಟಡದ ಕೆಲಸ ನಿಷೇಧವಾಗಿರೋದು ಗ್ರಾಮಸ್ಥರಿಗೆ ನುಂಗಲಾರದ ಬಿಸಿತುಪ್ಪವಾಗಿದೆ. ದೇವಾಲಯದ ಸುತ್ತಲೂ ಅನಾದಿ ಕಾಲದಿಂದಲೂ ಬದುಕ್ತಿರೋ ಜನರು ಒಂದು ಭದ್ರ ಸೂರನ್ನ ನಿರ್ಮಿಸಿಕೊಳ್ಳಲಾಗ್ತಿಲ್ಲ. ಬಿದ್ದೋಗಿರೋ ಮನೆಯನ್ನೂ ದುರಸ್ತಿ ಮಾಡುವಂತಿಲ್ಲ. ನಮಗೆ ಸ್ಥಳಾಂತರ ಮಾಡಿ ಅಂದ್ರು ಸರ್ಕಾರ ಮಾಡ್ತಿಲ್ಲ. ಇದರಿಂದ ಬೇಸತ್ತಿರೋ ಜನ ದಿನಂಪ್ರತಿ ದೇವರಿಗೆ ಶಾಪ ಹಾಕೊಂಡ್ ಬದುಕ್ತಿದ್ದಾರೆ. 

ಗಣೇಶನಿಗೆ ಗುಡಿ ಕಟ್ಟಿಸಿದ ಮುಸ್ಲಿಂ ಭಕ್ತ: ಚಾಮರಾಜನಗರದಲ್ಲೊಬ್ಬ ಆಧುನಿಕ ಬಪ್ಪಬ್ಯಾರಿ..!

ಉಗ್ರನರಸಿಂಹ, ವೀರನಾರಾಯಣ ಮೂರ್ತಿ, ಶಿಲಾ ಬಾಲಿಕೆಯರ ಬೆಡುಗು-ಬಿನ್ನಾಣದ ಕಲಾಕುಸುರಿ ನೋಡುಗರನ್ನ ಬೆರಗುಗೊಳಿಸಲಿದೆ. ಆದ್ರೀಗ, ಪುರಾತತ್ವ ಇಲಾಖೆಯ ಅಧೀನದಲ್ಲಿರೋ ಈ ದೇವಾಲಯ 100 ಮೀಟರ್ ವ್ಯಾಪ್ತಿಯಲ್ಲಿ ಮನೆ ನಿರ್ಮಿಸುವಂತಿಲ್ಲ. ಇದರಿಂದ ಮುನ್ನೂರಕ್ಕೂ ಅಧಿಕ ಮನೆಗಳು ಅವನತಿಯ ಹಂತ ತಲುಪಿವೆ. ಹೊಸದಿರ್ಲಿ, ಹಳೆಯದ್ದನ್ನೂ ದುರಸ್ತಿ ಮಾಡಲು ಪಂಚಾಯಿತಿ ಅನುಮತಿ ನೀಡ್ತಿಲ್ಲ. ಸ್ಥಳಿಯರಿಗೆ ಶಾಪಗ್ರಸ್ಥವಾಗಿರೋ ಕಾನೂನನ್ನ ಸಡಿಲಿಸಬೇಕೆಂಬ ಹೋರಾಟಕ್ಕೂ ಬೆಲೆ ಸಿಕ್ಕಿಲ್ಲ. ಸ್ಥಳಿಯ ಜನಪ್ರತಿನಿಧಿಗಳು ಅಸಹಾಯಕರಾಗಿದ್ದಾರೆ. 300 ಮೀಟರ್ ವ್ಯಾಪ್ತಿಯ ಜನರನ್ನ ಸ್ಥಳಾಂತರಿಸಿ, ಪುನರ್ವಸತಿ ಕಲ್ಪಿಸಬೇಕೆಂಬ ಕೂಗಿಗೂ ಮನ್ನಣೆ ಇಲ್ಲ.

ಸರ್ಕಾರ ಹಾಗೂ ಅಧಿಕಾರಿಗಳು ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸೋದಕ್ಕೆ ಮುಂದಾಗಿದ್ರೆ ಎಲ್ಲರ ಬದುಕು ಹಸನಾಗ್ತಿತ್ತು. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಮಾಯಕರು ಬಲಿಯಾಗಿದ್ದಾರೆ ಅಂದ್ರು ತಪ್ಪಿಲ್ಲ. ಇನ್ನಾದ್ರು ಸರ್ಕಾರ ಹಾಗೂ ಅಧಿಕಾರಿಗಳು ಇತ್ತ ಗಮನ ಹರಿಸಿ ದಿನಂಪ್ರತಿ ಭಯದಲ್ಲೇ ಬದುಕ್ತಿರೋ ಜನರಿಗೆ ನೆಮ್ಮದಿಯ ಬದುಕು ಕಟ್ಟಿಕೊಡಲಿ ಅನ್ನೋದು ನಮ್ಮ ಆಶಯ