ಕೇಂದ್ರದಿಂದ ಇನ್ನಷ್ಟು ನೆರೆ ಪರಿಹಾರಕ್ಕೆ ಯತ್ನ: ಸಿಎಂ ಬಿಎಸ್ವೈ
577 ಕೋಟಿ ಮೊದಲ ಕಂತು ಅಷ್ಟೇ| ಇನ್ನಷ್ಟು ಪರಿಹಾರ ಸಿಗುವ ವಿಶ್ವಾಸವಿದೆ| ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆ ಸಂಬಂಧ ಚರ್ಚಿಸಲು ಕುಮಾರಸ್ವಾಮಿ ಭೇಟಿ ಮಾಡಿದ್ದರು. ಇದನ್ನು ಬಿಟ್ಟು ಬೇರೆ ವಿಷಯ ಚರ್ಚಿಸಿಲ್ಲ. ಅವರನ್ನು ಭೇಟಿಯಾಗಿರುವುದಕ್ಕೆ ಹೆಚ್ಚಿನ ವ್ಯಾಖ್ಯಾನ ಮಾಡುವುದು ಸರಿಯಲ್ಲ ಎಂದ ಸಿಎಂ|
ಬೆಂಗಳೂರು(ನ.15): ಕೇಂದ್ರ ಸರ್ಕಾರವು ರಾಜ್ಯಕ್ಕೆ ನೆರೆ ಪರಿಹಾರವಾಗಿ 577 ಕೋಟಿ ರು. ಬಿಡುಗಡೆ ಮಾಡಿದೆ. ಇದು ಮೊದಲ ಕಂತು ಅಷ್ಟೇ. ಕೇಂದ್ರದಿಂದ ಇನ್ನಷ್ಟು ನೆರವು ದೊರೆಯುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶನಿವಾರ ಹೇಳಿದ್ದಾರೆ.
ಕೇಂದ್ರ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿರುವ 577 ಕೋಟಿ ರು. ಹಣ ಮೊದಲ ಕಂತು. ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಇನ್ನಷ್ಟುನೀಡುವ ವಿಶ್ವಾಸವಿದೆ. ಅಲ್ಲದೆ, ಕೇಂದ್ರದಿಂದ ಹೆಚ್ಚಿನ ಪರಿಹಾರ ಪಡೆಯಲು ಎಲ್ಲ ರೀತಿಯ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡಲಿದೆ. ನಮ್ಮ ನಿರೀಕ್ಷೆಯಂತೆ ಪರಿಹಾರ ದೊರೆಯುವ ವಿಶ್ವಾಸವಿದೆ ಎಂದರು.
ಪುತ್ರ ಹೇಳಿದ ಒಂದೇ ಮಾತಿಗೆ ಜಾರಿಗೊಳಿಸಿದ ಸಿಎಂ: ಇದೆಲ್ಲ ಬಸವ'ಕಲ್ಯಾಣ'ಕ್ಕಾಗಿ...!
9,883 ಕೋಟಿ ರು. ನಷ್ಟ:
ಕಳೆದ ಆಗಸ್ಟ್ ಮತ್ತು ಅಕ್ಟೋಬರ್ ಮಧ್ಯ ಸುರಿದ ಭಾರಿ ಮಳೆ, ಪ್ರವಾಹದಿಂದಾಗಿ ರಾಜ್ಯದ 25 ಜಿಲ್ಲೆಗಳ 173 ತಾಲೂಕುಗಳನ್ನು ಪ್ರವಾಹಪೀಡಿತ ಪ್ರದೇಶ ಎಂದು ರಾಜ್ಯ ಸರ್ಕಾರ ಘೋಷಿಸಿತ್ತು. ಬೆಳೆಹಾನಿ, ಅಸ್ತಿ-ಪಾಸ್ತಿ ಸೇರಿದಂತೆ ಸುಮಾರು 9,883 ಕೋಟಿ ರು. ಹಾನಿಯಾಗಿತ್ತು. ರಾಜ್ಯ ಸರ್ಕಾರ ಎನ್ಡಿಆರ್ಎಫ್ನಿಂದ 2100 ಕೋಟಿ ರು. ಬಿಡುಗಡೆ ಮಾಡುವಂತೆ ಇತ್ತೀಚೆಗೆ ಕೇಂದ್ರಕ್ಕೆ ಮನವಿ ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಈಗ ಕೇವಲ 577 ಕೋಟಿ ರು. ಮಾತ್ರ ಬಿಡುಗಡೆ ಮಾಡಿದೆ.
ಎಚ್ಡಿಕೆ ಜತೆ ರಾಜಕೀಯ ಚರ್ಚಿಸಿಲ್ಲ: ಬಿಎಸ್ವೈ ಸ್ಪಷ್ಟನೆ
ಶುಕ್ರವಾರ ತಮ್ಮ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಡುವಿನ ಸಭೆ ಬಗ್ಗೆ ಹೆಚ್ಚಿನ ವ್ಯಾಖ್ಯಾನ ಮಾಡಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿಗಳು, ಶುಕ್ರವಾರ ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆ ಸಂಬಂಧ ಚರ್ಚಿಸಲು ಕುಮಾರಸ್ವಾಮಿ ಭೇಟಿ ಮಾಡಿದ್ದರು. ಇದನ್ನು ಬಿಟ್ಟು ಬೇರೆ ವಿಷಯ ಚರ್ಚಿಸಿಲ್ಲ. ಅವರನ್ನು ಭೇಟಿಯಾಗಿರುವುದಕ್ಕೆ ಹೆಚ್ಚಿನ ವ್ಯಾಖ್ಯಾನ ಮಾಡುವುದು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.