ಕಲಬುರಗಿ ಸೇರಿ ಕೆಲವೆಡೆ ಆಲಿಕಲ್ಲು ಮಳೆ| ಜನತಾ ಕರ್ಫ್ಯೂ ಇರುವುದರಿಂದ ವಾಹನ ಸಂಚಾರ ವಿರಳವಾಗಿತ್ತು. ಹೀಗಾಗಿ ಯಾವುದೇ ಸಮಸ್ಯೆಯಾಗಿಲ್ಲ| ಹುಬ್ಬಳ್ಳಿ- ಧಾರವಾಡ ಮಹಾನಗರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಉತ್ತಮ ಮಳೆ| 

ಬೆಂಗಳೂರು(ಏ.30): ಕಲಬುರಗಿಯಲ್ಲಿ ಆಲಿಕಲ್ಲು ಮಳೆಯಾಗಿದ್ದರೆ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ಕೆಲವೆಡೆ ಗುರುವಾರ ಉತ್ತಮ ಮಳೆಯಾಗಿದೆ. ಜೇವರ್ಗಿ ತಾಲೂಕಿನಲ್ಲಿ ಮಹಿಳೆಯೊಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ.

Add Asianetnews Kannada as a Preferred SourcegooglePreferred

ಸಿಂದಗಿ ತಾಲೂಕಿನ ಕೋಕಟನೂರ ಗ್ರಾಮದ ನಿವಾಸಿ ಸಿದ್ದಮ್ಮ ಭೀಮಣ್ಣ ಘತ್ತರಗಿ (35) ಸಿಡಿಲಿಗೆ ಮೃತಪಟ್ಟವರು. ಇವರು ಜೇವರ್ಗಿ ತಾಲೂಕಿನ ಮಯೂರ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಲಬುರಗಿಯಲ್ಲಿ ಮಧ್ಯಾಹ್ನ ಅರ್ಧ ಗಂಟೆಗಳ ಕಾಲ ಗುಡುಗು, ಮಿಂಚಿನ ಮಳೆಯಾಗಿದೆ. ಕೆಲವು ಕಡೆ ಆಲಿಕಲ್ಲು ಬಿದ್ದಿದೆ. ಜನತಾ ಕರ್ಫ್ಯೂ ಇರುವುದರಿಂದ ವಾಹನ ಸಂಚಾರ ವಿರಳವಾಗಿತ್ತು. ಹೀಗಾಗಿ ಯಾವುದೇ ಸಮಸ್ಯೆಯಾಗಿಲ್ಲ.

ರಾಜ್ಯದಲ್ಲಿ ಮಳೆ : ಬಿರುಗಾಳಿಗೆ ಜೋಳಿಗೆಯಲ್ಲಿದ್ದ ಮಗು ಸಾವು

ಹುಬ್ಬಳ್ಳಿ- ಧಾರವಾಡ ಮಹಾನಗರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಉತ್ತಮ ಮಳೆ ಸುರಿದಿದೆ. ಹುಬ್ಬಳ್ಳಿ ನಗರದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಉತ್ತಮವಾಗಿಯೇ ಮಳೆಯಾಗಿದೆ. ಸಂಜೆ 5.30 ರ ಹೊತ್ತಿಗೆ ಆರಂಭವಾದ ಗುಡುಗು, ಸಿಡಿಲಿನ ಅಬ್ಬರದ ಮಳೆ ಸಂಜೆ 7 ಗಂಟೆಯವರೆಗೂ ಮುಂದುವರಿದಿತ್ತು. ಜನತಾ ಕಫä್ರ್ಯವಿನ ಹಿನ್ನೆಲೆಯಲ್ಲಿ ಜನರೆಲ್ಲ ಮನೆಯಲ್ಲಿಯೇ ಇದ್ದುದರಿಂದ ತೊಂದರೆ ಆಗಲಿಲ್ಲ. ಉಳಿದಂತೆ ಹಾವೇರಿ ಜಿಲ್ಲೆ ರಾಣಿಬೆನ್ನೂರು, ಗದಗ ಜಿಲ್ಲೆಯ ಶಿರಹಟ್ಟಿ, ಡಂಬಳ, ಲಕ್ಷ್ಮೇಶ್ವರಗಳಲ್ಲೂ ಸಹ ಮಳೆಯಾಗಿದೆ. ಕೊಪ್ಪಳದಲ್ಲಿ ತುಂತುರು ಮಳೆ ಸುರಿದಿದೆ. ಚಿಕ್ಕಮಗಳೂರು ಜಿಲ್ಲಾದ್ಯಂತ ಸಾಧಾರಣ ಮಳೆಯಾಗಿದೆ.