ಒಂದು ಕ್ಷೇತ್ರಕ್ಕೆ ಕಸವನ್ನು ಹಾಕದೆ ಎಲ್ಲಾ ಕ್ಷೇತ್ರಗಳಿಗೂ ಸಮನಾಗಿ ಹಂಚಿ ಬಿಡಿ, ಎಲ್ಲರಿಗೂ ಸಮಪಾಲು-ಸಮಬಾಳು ಇರಲಿ- ರಮೇಶ್ ಕುಮಾರ್

ಬೆಳಗಾವಿ[ಡಿ.13]: ಯಾವುದೋ ಒಂದು ಕ್ಷೇತ್ರಕ್ಕೆ ಕಸವನ್ನು ಹಾಕದೆ ಎಲ್ಲಾ ಕ್ಷೇತ್ರಗಳಿಗೂ ಸಮನಾಗಿ ಹಂಚಿ ಬಿಡಿ, ಎಲ್ಲರಿಗೂ ಸಮಪಾಲು-ಸಮಬಾಳು ಇರಲಿ ಎಂದು ವಿಧಾನಸಭಾಧ್ಯಕ್ಷ ರಮೇಶ್‌ ಕುಮಾರ್‌ ಚಟಾಕಿ ಹಾರಿಸುವ ಮೂಲಕ ಸದನವನ್ನು ನಗೆಗಡಲಲ್ಲಿ ತೇಲಿಸಿದ ಪ್ರಸಂಗ ನಡೆಯಿತು.

Add Asianetnews Kannada as a Preferred SourcegooglePreferred

ಪ್ರಶ್ನೋತ್ತರ ಅವಧಿಯಲ್ಲಿ ಬುಧವಾರ ಕಾಂಗ್ರೆಸ್‌ ಸದಸ್ಯ ಎಸ್‌.ಟಿ.ಸೋಮಶೇಖರ್‌, ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ತ್ಯಾಜ್ಯ ಘಟಕಗಳಿಂದ ಹೊರ ಹೊಮ್ಮುವ ದುರ್ವಾಸನೆ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮದ ಬಗ್ಗೆ ಪ್ರಶ್ನಿಸಿದರು. ಈ ಪ್ರಶ್ನೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್‌ ಉತ್ತರಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಎಸ್‌.ಆರ್‌.ವಿಶ್ವನಾಥ್‌, ಯಶವಂತಪುರ ಕ್ಷೇತ್ರದಿಂದ ಅರ್ಧ ಕಿ.ಮೀ. ಅಂತರದಲ್ಲಿರುವ ಯಲಹಂಕ ಕ್ಷೇತ್ರಕ್ಕೂ ಆ ದುರ್ವಾಸನೆ ಬರುತ್ತಿದೆ. ಸೋಮಶೇಖರ್‌ ಕ್ಷೇತ್ರಕ್ಕಾದರೂ ಅನುದಾನ ಸಿಕ್ಕಿದೆ. ನಮಗೆ ಅದೂ ಇಲ್ಲ ಎಂದರು.

ಸದಸ್ಯರಾದ ಎಂ.ಟಿ.ಬಿ.ನಾಗರಾಜ್‌, ವೆಂಕಟರಮಣಯ್ಯ ಸಹ ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಕ್ಷೇತ್ರದಲ್ಲಿಯೂ ಕಸ ಸಮಸ್ಯೆ ಇರುವ ಬಗ್ಗೆ ಪ್ರಸ್ತಾಪಿಸಿದರು. ಈ ವೇಳೆ ಕಾಂಗ್ರೆಸ್ಸಿನ ಲಕ್ಷ್ಮೇ ಹೆಬ್ಬಾಳ್ಕರ್‌ ಸಹ ತಮ್ಮ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿಯೂ ಕಸ ಸಮಸ್ಯೆ ಹೆಚ್ಚಾಗಿದೆ ಎಂದು ಹೇಳಿದರು. ಆಗ ಸಭಾಧ್ಯಕ್ಷರು ಬೆಂಗಳೂರಿಗೂ, ಬೆಳಗಾವಿಗೂ ಏನು ಸಂಬಂಧ ಎಂದು ಪ್ರಶ್ನಿಸಿ, ಕಸವನ್ನು ಯಾವುದೋ ಒಂದು ಕ್ಷೇತ್ರಕ್ಕೆ ಹಾಕದೆ ಎಲ್ಲಾ ಕ್ಷೇತ್ರಗಳಿಗೆ ಸಮನಾಗಿ ಹಂಚಿಬಿಡಿ ಎಂದು ಹಾಸ್ಯ ಮಾಡಿದರು. ಸಭಾಧ್ಯಕ್ಷರ ಮಾತು ಇಡೀ ಸದನವೇ ನಗೆಯಲ್ಲಿ ತೇಲಿಸಿತು.