'ಬಾ ನಿನಗಾಗಿ ಮನೇಲಿ ಬಾರಕೋಲ ಇಟ್ಟೀನಿ'; ಸಿಸಿ ಪಾಟೀಲ್ ವಿರುದ್ಧ ಕಾಶೆಪ್ಪನವರ್ ವಾಗ್ದಾಳಿ!

Synopsis
ಶಾಸಕ ವಿಜಯಾನಂದ ಕಾಶಪ್ಪನವರ, ಮಾಜಿ ಸಚಿವ ಸಿ.ಸಿ.ಪಾಟೀಲಗೆ ತಿರುಗೇಟು ನೀಡಿದ್ದಾರೆ. ಪಂಚಮಸಾಲಿ ಸಮಾಜದ ಸಂಘಟನೆಗೆ ಕಾಶಪ್ಪನವರ ಕುಟುಂಬದ ಕೊಡುಗೆಯನ್ನು ಪ್ರಶ್ನಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿಗಾರ:- ಮಲ್ಲಿಕಾರ್ಜುನ ಹೊಸಮನಿ.
ಬಾಗಲಕೋಟೆ (ಏ.13): ಪಂಚಮಸಾಲಿ ಸಮಾಜಕ್ಕೆ ಕಾಶಪ್ಪನವರ ಕುಟುಂಬದ ಕೊಡುಗೆ ಏನು ಎಂದು ಕೇಳಿರೋ ಮಾಜಿ ಸಚಿವ ಸಿ.ಸಿ.ಪಾಟೀಲಗೆ ಶಾಸಕ ವಿಜಯಾನಂದ ಕಾಶಪ್ಪನವರ ತಿರುಗೇಟು ನೀಡುವ ಮೂಲಕ ಆರಂಭದಲ್ಲಿ ಪಂಚಮಸಾಲಿ ಸಮಾಜದ ಸಂಘಟನೆಗೆ ಯಾರೂ ಇರಲಿಲ್ಲ, ಸಮಾಜ ಬೆಳೆದ ಮೇಲೆ ಸಿ.ಸಿ.ಪಾಟೀಲನಂತವರು ಬಂದು ಅದರ ಫಲ ಅನುಭವಿಸುತ್ತಿದ್ದಾರೆ ಎಂದರು.
ಬಾಗಲಕೋಟೆ ಜಿಲ್ಲೆಯ ಇಲಕಲ್ ಪಟ್ಟಣದಲ್ಲಿ ಮಾತನಾಡಿದ ಕಾಶಪ್ಪನವರ, ಹೋರಾಟದ ವೇಳೆ ಮಲಗಿದ್ದಾಗಲೂ ಕಾಶಪ್ಪನವರ ಬಳಿ ಬಾರಕೋಲು ಇತ್ತು, ಈಗ ಎಲ್ಲಿ ಹೋಯ್ತು ಬಾರಕೋಲು ಎಂಬ ಸಿ.ಸಿ.ಪಾಟೀಲ ವ್ಯಂಗ್ಯ ಮಾತಿಗೆ ಉತ್ತರಿಸಿದ ಕಾಶಪ್ಪನವರ, ಈಗಲೂ ನನ್ನ ಬಳಿ ಬಾರಕೋಲ ಇದೆ. ಬಾ ನನ್ನ ಮನೆಯಲ್ಲಿ ಬಾರಕೋಲ ಇಟ್ಟೀನಿ, ನಿನಗಾಗಿ ಬಾ ಇಲ್ಲಿ. ಕೊಡತಿನಿ ಬೇಕಾದ್ರೂ ನಿನಗೂ, ಬಾರಕೋಲ ತಗೋಂಡ ಮಲಕೊಂಡಾ ಅಂತಾನ.
ಇದನ್ನೂ ಓದಿ: ಪಂಚಮಸಾಲಿ ಸಮಾಜದಲ್ಲಿ ಹುಟ್ಟಿದ್ದು ಇವರೊಬ್ಬರೇನಾ? ಯತ್ನಾಳ್ ವಿರುದ್ಧ ಶಾಸಕ ವಿಜಯಾನಂದ ಕಾಶೆಪ್ಪನವರ ಕಿಡಿ
ಏ ಮಿಸ್ಟರ್ ನಿಮಗ ತಾಕತ್ತಿಲ್ಲ. ಪೀಠದ ಬಗ್ಗೆ , ಗುರುಗಳ ಬಗ್ಗೆ ಮಾತಾಡ್ತೀರಿ. ಮತ್ತೊಂದು ಪೀಠ ಮಾಡ್ತೀನಿ ಅಂತಾರೆ ಮಾಡೋದಾದ್ರೆ ಮಾಡಿಕೊಳ್ಳಿ. ನಿಮಗಾರು ಬೇಡ ಅಂತಾರೆ, ನಮ್ಮ ಸಮಾಜದ ಟ್ರಸ್ಟ್ ಇದೆ, ಟ್ರಸ್ಟ್ ಅಡಿ ರೆಜಿಸ್ಟ್ರೇಶನ್ ಆಗಿದೆ, ಅದಕ್ಕೆ ಗುರುಗಳಿಗೆ ಸ್ಥಾನ ಕೊಟ್ಟಿದ್ದೀವಿ. ಗುರುಗಳು ಹೇಗಿರಬೇಕೆಂದು ಶಿಷ್ಟಾಚಾರ ಇದೆ, ಬೈಲಾ ಇದೆ. ಶಿಷ್ಟಾಚಾರ ಉಲ್ಲಂಘನೆ ಆದರೆ ಅವರ ವಿರುದ್ಧ ಕ್ರಮ ಆಗುತ್ತೆ. ಹುಬ್ಬಳ್ಳಿಯಲ್ಲಿ 22ಕ್ಕೆ ಎಲ್ಲಾ ಜನಪ್ರತಿನಿಧಿಗಳ ಸಭೆ ಕರೆದಿದ್ದೇವೆ. ಅಲ್ಲಿ ಎಲ್ಲವೂ ತೀರ್ಮಾನ ಆಗುತ್ತೆ. ಹಿಟ್ ಆಂಡ್ ರನ್ ಮಾಡೋರಿಗೆ ಉತ್ತರವನ್ನ ಜನರೇ ನೀಡಲಿದ್ದಾರೆಂದ ಕಾಶಪ್ಪನವರ.
ಇದನ್ನೂ ಓದಿ: ಕಾವಿ ಬಿಚ್ಚಿ ಖಾದಿ ತೊಡಲಿ: ಶ್ರೀಗಳ ವಿರುದ್ಧ ಕಾಶೆಪ್ಪನವರ್ ಕಿಡಿ!
ಸಮಾಜಕ್ಕೆ ಕಾಶಪ್ಪನವರ ಕುಟುಂಬ ಕೊಡುಗೆ ಏನು ಅಂತಾರೆ, ಮೊದಲು ಪಂಚಮಸಾಲಿ ಸಮಾಜದ ಸಂಘಟನೆ ಮಾಡಲು ಮುಂದಾಗಿದ್ದೇ ನಮ್ಮ ತಂದೆಯವರು. ಇವರೆಲ್ಲಾ 2004ರಲ್ಲಿ ಬಂದವರು. ಅಲ್ಲಿಯವರೆಗೆ ಸಮಾಜದ ಸಂಘಟನೆ ನಿಮಗೇನು ಗೊತ್ತು. ಮಠ ಕಟ್ಟಿಲ್ಲ, ಹಾಸಿಗೆ ಖುರ್ಚಿ ಇಲ್ಲ ಅಂತೀರಲ್ಲ. ನೀವು ಪ್ರಭಾವಿ ಸಚಿವರಂತಿದ್ರಿ. ಆಗ ನೀವು ಅಧಿಕಾರದಲ್ಲಿದ್ರಿ..
ನಾವು ಮಾಜಿ ಆಗಿದ್ವಿ, ನಮ್ಮತ್ರ ರೊಕ್ಕ ಇರಲಿಲ್ಲ. ನಿಮ್ಮತ್ರ ಎಲ್ಲಾ ಇತ್ತಲ್ಲ, ನೀವ್ಯಾಕೆ ಮಾಡಲಿಲ್ಲ. ಇದೆಲ್ಲಾ ಬಿಡ್ರಿ ಆರೋಪ ಹೊರಿಸೋದು, ಒಬ್ರು ಹಿಂಗ್, ಒಬ್ರು ಹಂಗ್. ಒಬ್ರು ನಾನೇ ಮುಖ್ಯಮಂತ್ರಿ ಅಂತಾನ, ಒಂದು ದೊಡ್ಡ ಪಕ್ಷ ಹೊರಗೆ ಹಾಕೇತಿ.ಇಂತವರು ಎಷ್ಟೋ ಮಂದಿ ಹೋಗ್ಯಾರ. ಸ್ವಯಂ ಘೋಷಿತ, ನಾಯಕ, ಮಂತ್ರಿ, ಅಪ್ಪಗೋಳು. ಯಾರೇ ತಪ್ಪು ಮಾಡಿದ್ರೂ ತಪ್ಪೆ, ಅದು ಗುರುಗಳ ಇರಬಹುದು. ಯಾರೇ ಇರಬಹುದು ಅದಕ್ಕೆ ಸಮಾಜ ಏನು ನಿರ್ಧಾರ ಮಾಡಬೇಕು, ಅದನ್ನ ಏಪ್ರಿಲ್ 22ಕ್ಕೆ ನಿರ್ಧಾರ ಮಾಡಿ ತೋರಸ್ತೀವಿ ಎಂದು ವಾಗ್ದಾಳಿ ನಡೆಸಿದ್ರು.