ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಿದರೆ ಭವಾನಿ ರೇವಣ್ಣ ಅವರು ಜೈಲಿಗೆ ಹೋಗುವುದು ತಪ್ಪಲಿದೆ. ಆದರೆ, ನ್ಯಾಯಾಲಯವು ಜಾಮೀನು ಅರ್ಜಿಯನ್ನು ತಿರಸ್ಕರಿಸಿದರೆ ಜೈಲಿಗೆ ಹೋಗುವುದು ಖಚಿತವಾಗಲಿದೆ. ಎಲ್ಲವೂ ನ್ಯಾಯಾಲಯದ ತೀರ್ಪಿನ ಮೇಲೆ ನಿಂತಿದ್ದು, ಕುತೂಹಲ ಮೂಡಿಸಿದೆ.

ಬೆಂಗಳೂರು(ಮೇ.31):  ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋದ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿ ತೀರ್ಪು ಶುಕ್ರವಾರ ಪ್ರಕಟವಾಗಲಿದ್ದು, ಜೈಲಾ... ಬೇಲಾ... ಎಂಬುದು ತೀರ್ಮಾನವಾಗಲಿದೆ.

Add Asianetnews Kannada as a Preferred SourcegooglePreferred

ಪ್ರಕರಣದಲ್ಲಿ ಎಚ್‌.ಡಿ.ರೇವಣ್ಣ ಬಂಧನಕ್ಕೊಳಗಾಗಿ ಜಾಮೀನು ಪಡೆದುಕೊಂಡಿದ್ದಾರೆ. ಇದೀಗ ಭವಾನಿ ರೇವಣ್ಣ ಅವರಿಗೂ ಬಂಧನ ಭೀತಿ ಎದುಗಾಗಿದ್ದು, ಶುಕ್ರವಾರ ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಯ್ದಿರಿಸಿದೆ. ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಿದರೆ ಭವಾನಿ ರೇವಣ್ಣ ಅವರು ಜೈಲಿಗೆ ಹೋಗುವುದು ತಪ್ಪಲಿದೆ. ಆದರೆ, ನ್ಯಾಯಾಲಯವು ಜಾಮೀನು ಅರ್ಜಿಯನ್ನು ತಿರಸ್ಕರಿಸಿದರೆ ಜೈಲಿಗೆ ಹೋಗುವುದು ಖಚಿತವಾಗಲಿದೆ. ಎಲ್ಲವೂ ನ್ಯಾಯಾಲಯದ ತೀರ್ಪಿನ ಮೇಲೆ ನಿಂತಿದ್ದು, ಕುತೂಹಲ ಮೂಡಿಸಿದೆ.

Prajwal Revanna : ಪ್ರಜ್ವಲ್ ರೇವಣ್ಣನನ್ನು ಹೆಡೆಮುರಿಕಟ್ಟಿದ ಐವರು ಮಹಿಳಾ ಪೊಲೀಸರು; ಮುಂದೈತೆ ಅಸಲಿ ತನಿಖೆ

ಪ್ರಜ್ವಲ್‌ ರೇವಣ್ಣ ಅರ್ಜಿ ವಿಚಾರಣೆ:

ಈ ನಡುವೆ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನ ಭೀತಿಯಲ್ಲಿರುವ ಸಂಸದ ಪ್ರಜ್ವಲ್‌ ರೇವಣ್ಣ ತಮ್ಮ ವಿರುದ್ಧ ದಾಖಲಾದ ಎಲ್ಲಾ ಪ್ರಕರಣದಲ್ಲಿಯೂ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯೂ ಸಹ ಶುಕ್ರವಾರ ನಡೆಯಲಿದೆ. ಸಿಐಡಿ ಪೊಲೀಸ್‌ ಠಾಣೆ, ಹೊಳೇನರಸೀಪುರ ಮತ್ತು ಸೈಬರ್‌ ಕ್ರೈಂ ಠಾಣೆಯಲ್ಲಿ ದಾಖಲಾದ ಮೂರು ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಲಾಗಿದೆ.

ಎಸ್‌ಐಟಿ ಪರ ವಕೀಲರು ವಾದ ಮಂಡಿಸಿ, ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ವಿರುದ್ಧ ಗಂಭೀರ ಆರೋಪ ಇದೆ. ಅವರನ್ನು ವಿಚಾರಣೆಗೊಳಪಡಿಸಬೇಕಾದ ಅಗತ್ಯ ಇರುವ ಕಾರಣ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಮನವಿ ಮಾಡಿದ್ದಾರೆ. ಆದರೆ, ಭವಾನಿ ರೇವಣ್ಣ ಪರ ವಕೀಲರು, ಪ್ರಕರಣದಲ್ಲಿ ಭವಾನಿ ಅವರನ್ನು ಸಿಲುಕಿಸುವ ಪ್ರಯತ್ನ ನಡೆದಿದೆ. ತನಿಖೆಗೆ ಸಹಕರಿಸುವುದಾಗಿ ಈಗಾಗಲೇ ತಿಳಿಸಿರುವ ಕಾರಣ ನಿರೀಕ್ಷಣಾ ಜಾಮೀನು ನೀಡಬೇಕು ಎಂದಿದ್ದಾರೆ.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಶುಕ್ರವಾರ ಆದೇಶ ನೀಡುವುದಾಗಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ತೀರ್ಪಿನತ್ತ ಎಲ್ಲರ ಚಿತ್ತ ಮೂಡಿದೆ.