Asianet Suvarna News Asianet Suvarna News

ದಸರಾ ಉದ್ಘಾಟನೆ: ಸಂಪ್ರದಾಯ ಮುರಿದು ಎಸ್‌. ಎಂ ಕೃಷ್ಣರನ್ನೇಕೆ ಕರೆದಿದ್ದು ಬೊಮ್ಮಾಯಿ?!

* ದಸರಾ ಉದ್ಘಾಟನೆ ಸಂಪ್ರದಾಯ ಸಿಎಂ ಬೊಮ್ಮಾಯಿ ಮುರಿದಿದ್ದು ಏಕೆ?

* ಸಾಹಿತಿ, ಸಂಗೀತಗಾರರು, ಸ್ವಾತಂತ್ರ್ಯ ಹೋರಾಟಗಾರರನ್ನು ಕರೆಯದೆ ರಾಜಕಾರಣಿಯನ್ನು ಕರೆದಿದ್ದೇಕೆ?

 

The Reason Behind Inviting Former CM SM Krishna For The Dasara Inauguration Article By MP Pratap Simha
Author
Bangalore, First Published Sep 30, 2021, 8:19 AM IST

-ಪ್ರತಾಪ್ ಸಿಂಹ, ಬಿಜೆಪಿ ಸಂಸದ ಮೈಸೂರು

ಸಾಹಿತಿಗಳು, ಸಂಗೀತಗಾರರು, ಸ್ವಾತಂತ್ರ್ಯ ಹೋರಾಟಗಾರನ್ನು ಕರೆಯುವ ಸಂಪ್ರದಾಯವನ್ನೇಕೆ ಮುರಿದರು ಸಿಎಂ ಬೊಮ್ಮಾಯಿ?!

ಇಂಥದ್ದೊಂದು ಪ್ರಶ್ನೆ ನಿಮ್ಮನ್ನೂ ಕಾಡುತ್ತಿರಬಹುದಲ್ಲವೇ? ಇಷ್ಟಕ್ಕೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇಕೆ(Basavaraj Bommai) ವಾಡಿಕೆಯಂತೆ ಸಾಹಿತಿಯನ್ನೋ, ಸಂಗೀತಗಾರರನ್ನೋ ದಸರಾ(Dasara) ಉದ್ಘಾಟನೆಗೆ ಕರೆಯಲಿಲ್ಲ? ಯಾಕಾಗಿ ಒಬ್ಬ ರಾಜಕಾರಣಿಯನ್ನು ಕರೆದರು? ಅದರಲ್ಲೂ ಎಸ್‌.ಎಂ.ಕೃಷ್ಣರೇ ಯಾಕೆ ಬೇಕಿತ್ತು?

ಬಹುಶಃ ಕರ್ನಾಟಕದ(Karnataka) ಇತಿಹಾಸದಲ್ಲಿ ಅತಿ ಹೆಚ್ಚು ಅಡೆತಡೆಗಳನ್ನು, ಸಂಕಷ್ಟಗಳನ್ನು ಎದುರಿಸಿದ ಮುಖ್ಯಮಂತ್ರಿಯೆಂದರೆ ಎಸ್‌.ಎಂ.ಕೃಷ್ಣ.(SM Krishna)

'If you want to test a man's character, give him power’.ಅಂದರೆ ಒಬ್ಬ ಮನುಷ್ಯನ ವ್ಯಕ್ತಿತ್ವವನ್ನು ಪರೀಕ್ಷಿಸಬೇಕಾದರೆ ಅವನಿಗೆ ಅಧಿಕಾರ ಕೊಟ್ಟು ನೋಡು ಎಂದಿದ್ದರು ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್‌(Abraham Lincoln). ಎಷ್ಟೋ ವ್ಯಕ್ತಿಗಳು ಅವರ ಕೌಟುಂಬಿಕ ಹಿನ್ನೆಲೆಯಿಂದಲೋ, ಅದೃಷ್ಟದ ಬಲದಿಂದಲೋ, ಪರಿಸ್ಥಿತಿ ಸಹಜವಾಗಿಯೇ ಕಲ್ಪಿಸಿದ ಅನುಕೂಲಕರ ಸನ್ನಿವೇಶದಿಂದಲೋ ಅಥವಾ ಇನ್ನಾರದ್ದೋ ಶ್ರೀರಕ್ಷೆಯಿಂದಲೋ ಅಧಿಕಾರದ ಗದ್ದುಗೆಯೇರಿದ ನೂರಾರು ಉದಾಹರಣೆಗಳಿವೆ. ಆದರೆ ಗದ್ದುಗೆಯೇರಿದ ಮೇಲೆ ಯೋಗ್ಯತೆಯನ್ನು ಎತ್ತರಿಸಿಕೊಳ್ಳಲಾಗದೆ, ದೂರದೃಷ್ಟಿಹಾಗೂ ಸೂಕ್ಷ್ಮಗ್ರಾಹಿತ್ವದ ಕೊರತೆಯಿಂದ ಅಧಿಕಾರದ ಸ್ಥಾನವೇ ಅವರನ್ನು ತರಗೆಲೆಯಂತೆ ಮಾಡಿದ್ದುಂಟು. ಆದರೆ ಯೋಗ್ಯತೆಯಿಟ್ಟುಕೊಂಡು ಉನ್ನತ ಸ್ಥಾನಕ್ಕೇರಿದ ಹಾಗೂ ಏರಿದ ನಂತರ ಎದುರಾದ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಿ ವ್ಯಕ್ತಿತ್ವದ ಪರಿಚಯ ಮಾಡಿಕೊಟ್ಟನಾಯಕರು ಮಾತ್ರ ಕೆಲವೇ ಕೆಲವು ಮಂದಿ. ಅಂಥ ವಿರಳ ನಾಯಕರಲ್ಲಿ ನಮ್ಮ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಮುತ್ಸದ್ದಿ ಎಸ್‌.ಎಂ.ಕೃಷ್ಣ ಒಬ್ಬರು. ಅವರ ಬಗ್ಗೆ ಯೋಚಿಸಿದಾಗಲೆಲ್ಲ ಅಬ್ರಹಾಂ ಲಿಂಕನ್‌ ಮಾತು ನೆನಪಿಗೆ ಬರುತ್ತದೆ. ಕೃಷ್ಣ ಎದುರಿಸಿದ ಸಮಸ್ಯೆಗಳು ಒಂದೋ, ಎರಡೋ?!

* ರಾಜ್‌ಕುಮಾರ್‌ ಅಪಹರಣ

* ನಾಗಪ್ಪ ಹತ್ಯೆ

* ವಿಠಲೇನಹಳ್ಳಿ ಗೋಲಿಬಾರ್‌

* ಸತತ ಮೂರು ವರ್ಷ ಬರ

* ಮುನ್ನೂರಕ್ಕೂ ಹೆಚ್ಚು ರೈತರ ಆತ್ಮಹತ್ಯೆ

* ಕಾವೇರಿ ಗಲಾಟೆ

* ಜಯಲಲಿತಾ ಕಿರಿಕ್ಕು

* ದೊಡ್ಡಗೌಡರ ಕಾರ್ಯತಂತ್ರ

* ರಾಜ್ಯಕ್ಕೆ ಆರ್ಥಿಕ ಶಿಸ್ತು ತಂದರು

ಇಷ್ಟಾಗಿಯೂ ಸಾರ್ವಜನಿಕವಾಗಿ ಎಂದೂ ಅವರು ತಾಳ್ಮೆ ಕಳೆದುಕೊಳ್ಳಲಿಲ್ಲ. ಎಂದಿನ ಸಭ್ಯತೆ, ಸಜ್ಜನಿಕೆಯನ್ನು ಬಿಡಲಿಲ್ಲ. ಒಬ್ಬ ಮುಖ್ಯಮಂತ್ರಿ ಹೇಗಿರಬೇಕೆಂದರೆ ಕೃಷ್ಣ ಅವರಂತೆ ವಿದ್ಯಾವಂತ, ಬುದ್ಧಿವಂತ, ದೂರದೃಷ್ಟಿಹೊಂದಿರುವಾತ ಆಗಿರಬೇಕೆಂದು ಬೇರೆ ರಾಜ್ಯಗಳಿಗೆ ನಾವು ಉದಾಹರಣೆ ಕೊಡುವಂತೆ ಇದ್ದರು. ಅವರು ಉಡುಗೆ ತೊಡುಗೆಯಲ್ಲಿ ಮಾತ್ರ ಶಿಸ್ತನ್ನು ಹೊಂದಿದ್ದರು ಎಂದು ಭಾವಿಸಬೇಡಿ, ಕರ್ನಾಟಕದ ವಿತ್ತ ಸಚಿವಾಲಯಕ್ಕೂ ಶಿಸ್ತನ್ನು ತಂದರು. ಸ್ವತಃ ವಿತ್ತ ಸಚಿವರೂ ಆಗಿದ್ದ ಕೃಷ್ಣ, ಓa್ಟ್ಞaಠಿaka ಊಜಿs್ಚa್ಝ ್ಕಛಿspಟ್ಞsಜಿಚಿಜ್ಝಿಜಿಠಿy ಅ್ಚಠಿ- 2002 ಅಥವಾ ವಿತ್ತೀಯ ಹೊಣೆಗಾರಿಕೆ ಕಾಯಿದೆಯನ್ನು ಜಾರಿಗೆ ತಂದರು.

ಅಂದರೆ ಆದಾಯದ (ಆಯ) ಆಧಾರದ ಮೇಲೆ ಸರ್ಕಾರ ಖರ್ಚನ್ನು (ವ್ಯಯ) ಮಾಡಬೇಕು. ವ್ಯಯ ಆಯಕ್ಕಿಂತ ಜಾಸ್ತಿಯಾಗಬಾರದು ಎಂದು ಕಟ್ಟುನಿಟ್ಟಾದ ಚೌಕಟ್ಟು ಹಾಕಿಕೊಟ್ಟರು. ಹಾಗಂತ ಖರ್ಚನ್ನು ತಡೆಯುವುದಕ್ಕಾಗುವುದಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಅಪರಿಮಿತ ಹಣ ಬೇಕಾಗುತ್ತದೆ ಎಂಬುದನ್ನು ಮನಗಂಡು, ಆದಾಯವನ್ನು ಹೆಚ್ಚಿಸುವುದರ ಬಗ್ಗೆ ಅತಿಹೆಚ್ಚಿನ ಗಮನಹರಿಸಿದರು. ಮುಂದಿನ ಎಲ್ಲ ಮುಖ್ಯಮಂತ್ರಿಗಳೂ ಹೆಚ್ಚೂಕಡಿಮೆ ಅದೇ ಚೌಕಟ್ಟಿನಲ್ಲಿ ನಡೆದರು, ಸಿದ್ದರಾಮಯ್ಯ ಒಬ್ಬರನ್ನು ಬಿಟ್ಟು! ಅದರ ಪರಿಣಾಮವೇ ಬಿಜೆಪಿ ಸರ್ಕಾರ 5 ವರ್ಷಗಳಲ್ಲಿ ಮಾಡಿದ ಸಾಲದ ಎರಡೂವರೆ ಪಟ್ಟನ್ನು ಸಿದ್ದರಾಮಯ್ಯ ಮೂರು ವರ್ಷದಲ್ಲೇ ಮಾಡಿದರು! ಇದೇನೇ ಇರಲಿ, ರಾಜ್ಯದ ಖಜಾನೆಯನ್ನು ಭದ್ರಪಡಿಸಿದ್ದು, ಆರ್ಥಿಕತೆಯನ್ನು ಸರಿಪಡಿಸಿದ್ದು ಮಾತ್ರವಲ್ಲ, ಅಡಳಿತ ವ್ಯವಸ್ಥೆಯನ್ನೂ ತ್ವರಿತ ಹಾಗೂ ಭ್ರಷ್ಟಾಚಾರ ಮುಕ್ತವನ್ನಾಗಿ ಮಾಡುವ ಸಲುವಾಗಿ ಭೂ ದಾಖಲೆಗಳ ಗಣಕೀಕರಣಕ್ಕೆ ಕೈಹಾಕಿದರು ಕೃಷ್ಣ. ಪಹಣಿ, ಪಟ್ಟಾಗಳನ್ನು ಕೇಳಿದರೆ ತಿಂಗಳು ತಳ್ಳುತ್ತಿದ್ದರು, ಕಾಸು ಕೊಟ್ಟರಷ್ಟೇ ಕಾಪಿ ಕೊಡುತ್ತಿದ್ದರು. ಅಂಥ ವ್ಯವಸ್ಥೆಗೆ ಚಾಟಿಯೇಟು ಕೊಟ್ಟು, ತಂತ್ರಜ್ಞಾನವನ್ನು ತಂದು ಬದಲಾಯಿಸಿದರು. ಕನ್ನಡ ಸಾಫ್ಟ್‌ವೇರ್‌ ಅಭಿವೃದ್ಧಿಗೆ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಅದರ ಅಳವಡಿಕೆಗಾಗಿ ಭೂಮಿ ಯೋಜನೆ ಹೆಸರಿನಲ್ಲಿ ಗಣಕೀಕರಣ ಮಾಡಿದರು.

ಮದ್ಯದ ಲಾಭ ಬೊಕ್ಕಸಕ್ಕೆ ತಂದರು

ನೀವು ಕರ್ನಾಟಕ ರಾಜಕಾರಣದ ಇತಿಹಾಸವನ್ನು ನೋಡಿದರೆ ಒಂದೊಂದು ಕಾಲಘಟ್ಟಗಳಲ್ಲಿ ಒಂದೊಂದು ಲಾಬಿಗಳು ರಾಜಕಾರಣವನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಾ ಬಂದಿವೆ. ಕೆ.ಸಿ.ರೆಡ್ಡಿ, ಕೆಂಗಲ… ಹನುಮಂತಯ್ಯನವರ ಕಾಲದಲ್ಲಿ ತಲೆದೋರಿದ ಹೆಂಡದ ಲಾಬಿಯಿಂದ ಹಿಡಿದು ಸಿದ್ದರಾಮಯ್ಯನವರ ಕಾಲದ ಸ್ಯಾಂಡ್‌ ಮೈನಿಂಗ್‌ ಲಾಬಿವರೆಗೂ ನೀವು ದೃಷ್ಟಿಹಾಯಿಸಬಹುದು. ಮೊದಲಿಗೆ ಹೆಂಡದ ದೊರೆಗಳು, ನಂತರ ಎಜುಕೇಶನ್‌ ಲಾಬಿ, ಮೈನಿಂಗ್‌ ಮಾಫಿಯಾ, ರಿಯಲ… ಎಸ್ಟೇಟ್‌ ದುಡ್ಡಿನ ದರ್ಪ, ಮರಳು ದಂಧೆ ಹೀಗೆ ಪಟ್ಟಿಬೆಳೆಯುತ್ತದೆ. ಇವುಗಳಲ್ಲೊಂದಾದ ಹೆಂಡದ ದೊರೆಗಳು ಸೆಕೆಂಡ್ಸ್‌ ಮೂಲಕ ತೆರಿಗೆ ಕದಿಯುತ್ತಿದ್ದರು. ಇಂಥ ಕಳ್ಳರನ್ನು ಮಟ್ಟಹಾಕಲು ಹಾಗೂ ರಾಜ್ಯದ ಆದಾಯವನ್ನು ಹೆಚ್ಚಿಸಲು 2003ರಲ್ಲಿ ಕರ್ನಾಟಕ ಸ್ಟೇಟ್‌ ಬೆವೆರೇಜಸ್‌ ಕಾರ್ಪೊರೇಶನ್‌ ಲಿಮಿಟೆಡ್‌ ಸ್ಥಾಪನೆ ಮಾಡಿದರು. ಆ ಮೂಲಕ ಮದ್ಯ ವಿತರಣೆ ಹಾಗೂ ಮಾರಾಟ ವ್ಯವಸ್ಥೆಯನ್ನು ನಿಯಂತ್ರಣಕ್ಕೆ ತಂದು ಬೊಕ್ಕಸಕ್ಕೆ ಲಾಭ ಮಾಡಿದರು ಕೃಷ್ಣ. ಈ ಹಿಂದೆಲ್ಲ ಹೆಂಡದ ದೊರೆಗಳು ರಾಜಕಾರಣಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದರು. ಆದರೆ ಇಂದು ಹೆಂಡದಿಂದ ರಿಯಲ… ಎಸ್ಟೇಟ್‌, ಮರಳುಗಾರಿಕೆವರೆಗೂ ಎಲ್ಲ ದಂಧೆಗಳನ್ನು ರಾಜಕಾರಣಿಗಳೇ ಸ್ವತಃ ನಿಯಂತ್ರಿಸುತ್ತಿದ್ದಾರೆ ಎಂಬುದು ಬೇರೇ ಮಾತು ಬಿಡಿ!

ಬೆಂಗಳೂರಿಗೆ 2ನೇ ಕೆಂಪೇಗೌಡ!

ಮತ್ತೆ ಕೃಷ್ಣ ಅವರ ಸಾಧನೆಯ ವಿಷಯಕ್ಕೆ ಬರುವುದಾದರೆ, ಇವತ್ತು ಬೆಂಗಳೂರನ್ನು ಒಂದು ತಕ್ಕಡಿಗೆ, ಕರ್ನಾಟಕದ ಉಳಿದ ಭಾಗವನ್ನು ಮತ್ತೊಂದು ತಕ್ಕಡಿಗೆ ಇಟ್ಟರೆ ಬೆಂಗಳೂರೇ ಹೆಚ್ಚು ತೂಗುತ್ತದೆ! ಏಕೆಂದರೆ ಕೆಂಪೇಗೌಡ ಬೆಂಗಳೂರಿನ ನಿರ್ಮಾತೃ ಆದರೂ ಆ ಬೆಂಗಳೂರಿಗೆ ಐಟಿ ಗರಿಯನ್ನು ಇಟ್ಟು ಜಾಗತಿಕ ಮಟ್ಟದಲ್ಲಿ ಬೆಂಗಳೂರು ಹೆಸರುವಾಸಿಯಾಗುವಂತೆ ಮಾಡಿದ್ದು ಕೃಷ್ಣ. ಅದು ಟ್ಯಾಕ್ಸ್‌ ಹಾಲಿಡೇ ಇರಬಹುದು, ಉಚಿತ ಭೂಮಿ ನೀಡಿಕೆ ಇರಬಹುದು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಹಾಗೂ ಉದ್ಯಮ ಕ್ಷೇತ್ರದ ಎಲ್ಲ ಬೇಡಿಕೆಗಳಿಗೂ ಸ್ಪಂದಿಸುವುದು ಇರಬಹುದು, ಇಂತಹ ಕೆಲಸಗಳಿಂದ ಜಗತ್ತಿನ ಪ್ರತಿಷ್ಠಿತ ಕಂಪನಿಗಳು ಬೆಂಗಳೂರಿನತ್ತ ಮುಖಮಾಡುವಂತೆ ಮಾಡಿದರು. ಹಾಗಾಗಿ ಇವತ್ತು ಬೆಂಗಳೂರೊಂದರಿಂದ ಬರುವ ಆದಾಯವನ್ನು ಇಡೀ ಕರ್ನಾಟಕ ಸರಿಗಟ್ಟಲು ಸಾಧ್ಯವಿಲ್ಲ. ನಮ್ಮ ರಾಜ್ಯದ ಖಜಾನೆ ತುಂಬುವುದೇ ಬೆಂಗಳೂರಿನಿಂದ. ಹಾಗಂತ ಕೃಷ್ಣ ಅವರು ಐಟಿ ಅಭಿವೃದ್ಧಿಗೆ ಬರೀ ಬೆಂಗಳೂರನ್ನೇ ಆಯ್ದುಕೊಳ್ಳಲಿಲ್ಲ, ಮ್ಯೆಸೂರು, ಮಂಗಳೂರು, ಹುಬ್ಬಳ್ಳಿಗಳತ್ತಲೂ ದೃಷ್ಟಿಹಾಯಿಸಿದರು. ಹಾಗಾಗಿಯೇ ಈ ನಗರಗಳಲ್ಲೂ ಇಂದು ಐಟಿ ತಾಣಗಳನ್ನು ಕಾಣುತ್ತಿದ್ದೇವೆ. ರೈತನೊಬ್ಬನಿಗೆ ಸಹಾಯ ಮಾಡಿದರೆ ಸಾಲದು ಅಂತ ಆ ರೈತನ ಮಗ ಎಂಜಿನಿಯರಿಂಗ್‌ ಮಾಡಿದರೆ ಅವನಿಗೆ ಉದ್ಯೋಗ ನೀಡುವ, ಭವಿಷ್ಯ ಕಟ್ಟಿ-ಕೊಳ್ಳಲು ವೇದಿಕೆ ಸೃಷ್ಟಿಮಾಡಿಕೊಡುವ ಕೆಲಸವನ್ನು ಕೃಷ್ಣ ಮಾಡಿದರು. ನೂರಾರು ಸಾಫ್ಟ್‌ವೇರ್‌ ಕಂಪನಿಗಳು ಬೆಂಗಳೂರನ್ನು ಅರಸಿಕೊಂಡು ಬರುವಂತೆ ಮಾಡಿ ಲಕ್ಷಾಂತರ ಉದ್ಯೋಗ ಸೃಷ್ಟಿಸಿದರು. ಹಾಗಾಗಿಯೇ ಸುಶಿಕ್ಷಿತರ, ವಿದ್ಯಾವಂತರ, ಮಧ್ಯಮ ವರ್ಗದವರ ಪ್ರೀತಿಗೆ ಪಾತ್ರರಾದರು. ಇವತ್ತು ಬೆಂಗಳೂರಿನ ಟ್ರಾಫಿಕ್‌ ನಮಗೆ ಉಸಿರು ಕಟ್ಟಿಸಿರಬಹುದು, ಆದರೆ ಕೃಷ್ಣ ಅವರ ಕೆಲಸ ಲಕ್ಷಾಂತರ ಪದವೀಧರರಿಗೆ ಬೆಂಗಳೂರಿನಲ್ಲಿ ಬದುಕು ಸೃಷ್ಟಿಸಿದ್ದು ಅಷ್ಟೇ ನಿಜ. ಇದೇನು ಕಡಿಮೆ ಸಾಧನೆಯೇ?

ಕ್ಷಿಪ್ರ ಯೋಜನೆಗಳ ಹರಿಕಾರ

ಅಂದು ಎಸ್‌.ಎಂ.ಕೃಷ್ಣ ಬೆಂಗಳೂರು ಅಜೆಂಡಾ ಟಾಸ್ಕ್‌ಫೋರ್ಸ್‌ ರಚನೆ ಮಾಡಿದಾಗ ನಾರಾಯಣಮೂರ್ತಿ ಆದಿಯಾಗಿ ಉದ್ಯಮ ಕ್ಷೇತ್ರದ ಅತಿರಥ ಮಹಾರಥರು ಅದರ ಸದಸ್ಯರಾಗಲು ಒಪ್ಪಿಕೊಂಡಿದ್ದರು. ಅದು ಕೃಷ್ಣರ ಮೇಲಿದ್ದ ನಂಬಿಕೆ, ವಿಶ್ವಾಸವನ್ನು ತೋರುತ್ತದೆ. ಈ ನಡುವೆ ರಾಜ್‌ಕುಮಾರ್‌ ಅಪಹರಣ, ಸತತ ಬರ, ರೈತರ ಆತ್ಮಹತ್ಯೆ, ವಿಠಲೇನಹಳ್ಳಿ ಗೋಲಿಬಾರ್‌, ನಾಗಪ್ಪ ಹತ್ಯೆ, ಜಯಾ ಕ್ಯಾತೆ, ಕಾವೇರಿ ಗಲಾಟೆಗಳು ನಡೆದವು. ಈ ಒಂದೊಂದು ಘಟನೆಗಳೂ ರಾಜ್ಯ ಬೆಚ್ಚಿ ನಿಬ್ಬೆರಗಾಗುವಂತೆ ಮಾಡಿದ್ದವು. ಒಬ್ಬ ಸಾಮಾನ್ಯ ವ್ಯಕ್ತಿ ಅವರಾಗಿದ್ದರೆ ಉಡುಗಿ ಹೋಗುತ್ತಿದ್ದರು. ಆದರೆ ಇಂತಹ ಸಮಸ್ಯೆಗಳ ನಡುವೆಯೂ ಮೂರು ವರ್ಷಗಳ ಸತತ ಬರ ಬಂದಾಗ ಅಂತರ್ಜಲ ಮಟ್ಟವನ್ನು ಹೆಚ್ಚಿಸಬೇಕಾದರೆ ಬೀಳುವ ಹನಿ ಹನಿ ನೀರನ್ನೂ ಕಾಪಿಟ್ಟುಕೊಳ್ಳಬೇಕೆಂದು ಭಾವಿಸಿ ಕೆರೆಗಳ ಪುನಶ್ಚೇತನಕ್ಕೆಂದೇ ‘ಕಾಯಕ ಕೆರೆ’ ಎಂಬ ಯೋಜನೆ ಜಾರಿಗೆ ತಂದಿದ್ದರು. ಇಂದು ಹೆಮ್ಮೆಯ ಪ್ರಧಾನಿ ನರೇಂದ್ರ ಮೋದೀಜಿ ಮೈಸೂರು-ಬೆಂಗಳೂರು ನಡುವೆ ರಸ್ತೆ ಅಗಲೀಕರಣ ಮಾಡಿ 10 ಪಥದ ಹೆದ್ದಾರಿಯನ್ನು ನಿರ್ಮಾಣ ಮಾಡಿಕೊಡುತ್ತಿದ್ದಾರೆ. ಆದರೆ 20 ವರ್ಷಗಳ ಹಿಂದೆಯೇ ಕೃಷ್ಣ ಅವರು ನಾಲ್ಕು ಪಥಗಳ ಬೆಂಗಳೂರು-ಮ್ಯೆಸೂರು ಹೈವೇಯನ್ನು ನಾಲ್ಕೂಮುಕ್ಕಾಲು ವರ್ಷದ ಅಧಿಕಾರಾವಧಿಯಲ್ಲಿ ನಿರ್ಮಾಣ ಮಾಡಿಕೊಟ್ಟಿದ್ದಾರೆ ಎಂಬುದನ್ನು ನಾವು ಮರೆಯಲಾದೀತೆ? ಈಗಿನವರು ಅಡಿಗಲ್ಲು ಇಡುವುದಕ್ಕೇ ವರ್ಷಗಳು ಬೇಕು. ಕೃಷ್ಣ ನೋಡನೋಡುತ್ತಲೇ ವಿಕಾಸಸೌಧವನ್ನು ಪೂರ್ಣಗೊಳಿಸಿದ್ದರು. ಬಡವರ ನರಳಿಕೆಯನ್ನು ನೋಡಲಾರದೆ ಆರೋಗ್ಯ ಸೇವೆಗೆ ಹೊಸ ಭಾಷ್ಯ ಬರೆದ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೆ ತಂದರು. ಖಾಸಗಿ ಆಸ್ಪತ್ರೆಗಳನ್ನೂ ಆ ಯೋಜನೆಯ ವ್ಯಾಪ್ತಿಗೆ ತಂದು ಕ್ಲಿಷ್ಟಸೇವೆಗಳೂ ಬಡವರಿಗೆ ಸಿಗುವಂತೆ ಮಾಡಿದರು. ಊರೂರಲ್ಲಿ ಸ್ತ್ರೀಶಕ್ತಿ ಸಂಘಗಳನ್ನು ಆರಂಭಿಸಿ, ಸಾಲ ಸವಲತ್ತು ನೀಡಿ ಗ್ರಾಮೀಣ ಮಹಿಳೆಯರಲ್ಲಿ ಸ್ವಾವಲಂಬನೆ ತರಲು ಮುಂದಾದರು. ರೈತ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಿದರು, ಸ್ವಸಹಾಯ ಸಂಘಗಳನ್ನು ಆರಂಭಿಸಿದರು, ಮಕ್ಕಳಿಗೆ ಮಧ್ಯಾಹ್ನದ ಊಟ ಆರಂಭಿಸಿದರು. ಇಂಥ ಯೋಜನೆಗಳು ಐಟಿಯಾಚೆಗಿನ ಕೃಷ್ಣ ಅವರ ದೂರದೃಷ್ಟಿಹಾಗೂ ಕಾಳಜಿಯ ದ್ಯೋತಕವಾಗಿದ್ದವು.

2 ವರ್ಷದಲ್ಲೇ ನಂ.1 ಮುಖ್ಯಮಂತ್ರಿ

ಮುಂದೆ ಬಂದ ಮುಖ್ಯಮಂತ್ರಿಗಳು ಇಂಥ ಕೃಷ್ಣ ಮಾರ್ಗವನ್ನು ತುಳಿದಿದ್ದರೆ ಸಾಕಿತ್ತು, ಕರ್ನಾಟಕ ಈ ವೇಳೆಗೆ ಉದ್ಧಾರವಾಗಿರುತಿತ್ತು. ಕೇವಲ ಎರಡು ವರ್ಷ ಪೂರೈಸಿದಾಗಲೇ ಎಸ್‌.ಎಂ.ಕೃಷ್ಣ ಅವರಿಗೆ ದೇಶದ ನಂಬರ್‌-1 ಮುಖ್ಯಮಂತ್ರಿ ಎಂದು ಪ್ರತಿಷ್ಠಿತ ಇಂಡಿಯಾ ಟುಡೆ ಮ್ಯಾಗಝಿನ್‌ ಎರಡನೇ ಬಾರಿಗೆ ಕಿರೀಟ ಕೊಟ್ಟಿತ್ತು! In two years and four months he as chief minister, Somanahalli Malaiah Krishna continues to lread with elegance, clarity and efficiency that have for the second successive year seen him being rated as India's best chief minister ಎಂದು ವಿವರಣೆ ಕೊಟ್ಟಿತ್ತು. ಸುಲಭವಾಗಿ ಸಿಗುವ ಹಾಗೂ ಹೊಸ ಯೋಚನೆ, ಯೋಜನೆಗಳ ಪ್ರಯೋಗಕ್ಕೆ ತೆರೆದುಕೊಳ್ಳುವ ವ್ಯಕ್ತಿ ಕೃಷ್ಣ ಎಂದು ನಾರಾಯಣಮೂರ್ತಿ ಹೊಗಳಿದ್ದರು.

ಒಬ್ಬ ವಿದೇಶಾಂಗ ಸಚಿವರಾಗಿಯೂ ವಿನೂತನವಾದ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಯೋಜನೆಯನ್ನು ಜಾರಿಗೆ ತಂದರು ಕೃಷ್ಣ. ಮಧ್ಯವರ್ತಿಗಳ ದಂಧೆ, ರಾಷ್ಟ್ರೀಯ ಭದ್ರತೆಗೆ ಧಕ್ಕೆ, ಭಯೋತ್ಪಾದಕರ ಕೈಗೆ ಪಾಸ್‌ಪೋರ್ಟ್‌ ಸಿಗಬಾರದು, ಕಮಿಷನ್‌ ದಂಧೆ ನಡೆಯಬಾರದು, ಜನರಿಗೆ ಸುಲಭವಾಗಿ ಪಾಸ್‌ಪೋರ್ಟ್‌ ಸಿಗಬೇಕು ಎಂದು ದೇಶಾದ್ಯಂತ 50ಕ್ಕಿಂತ ಹೆಚ್ಚು ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳ ಸ್ಥಾಪನೆಗೆ ಕಾರಣರಾದರು.

ಇಷ್ಟೆಲ್ಲ ಒಳ್ಳೆಯ ಕೆಲಸ ಮಾಡಿಯೂ ಅದೃಷ್ಟಎನ್ನುವುದು ಕೃಷ್ಣ ಹಾಗೂ ಅಟಲ… ಬಿಹಾರಿ ವಾಜಪೇಯಿಯವರಿಗೆ 2004ರಲ್ಲಿ ಕೈಕೊಟ್ಟಿತು. ಸಮಯಕ್ಕೆ ಸರಿಯಾಗಿ ಅಂದರೆ ಅಕ್ಟೋಬರ್‌ನಲ್ಲಿ ಚುನಾವಣೆ ನಡೆದಿದ್ದರೆ ಇಬ್ಬರೂ ಮತ್ತೆ ಅಧಿಕಾರಕ್ಕೆ ಬರುತ್ತಿದ್ದರೇನೋ. ಏಕೆಂದರೆ ಆ ವರ್ಷ ಮಾನ್ಸೂನ್‌ ಅವಧಿಯಲ್ಲಿ ಒಳ್ಳೆಯ ಮಳೆಯಾಯಿತು. ಆದರೆ ಏಪ್ರಿಲ… -ಮೇನಲ್ಲಿ ಚುನಾವಣೆ ನಡೆದಿದ್ದರಿಂದ ಸತತ ಬರ ಇಬ್ಬರ ಭವಿಷ್ಯಕ್ಕೂ ಬರೆ ಎಳೆಯಿತು!

ದಸರೆ ಉದ್ಘಾಟನೆಗೆ ಯೋಗ್ಯ ಆಯ್ಕೆ

ಇದೇನೇ ಇರಲಿ, ಇವತ್ತು ನರೇಂದ್ರ ಮೋದಿಯವರು ಮಾಡುವ ಒಳ್ಳೆಯ ಕೆಲಸವನ್ನು ಮಾತ್ರವಲ್ಲ, ಅವರು ಧರಿಸುವ ಉಡುಗೆ ತೊಡುಗೆಯನ್ನೂ ಜನ ಫಾಲೋ ಮಾಡುತ್ತಾರೆ. ಅಮೆರಿಕದಲ್ಲಿ ಕಲಿತ ಕೃಷ್ಣ ಈ ವಿಷಯದಲ್ಲಿ ಮೊದಲೇ ಮಾದರಿಯಾಗಿದ್ದವರು. ಅವರು ಉಡುಗೆ-ತೊಡುಗೆಯಲ್ಲೂ ಮಾದರಿ, ಮಾತು-ಕತೆಯಲ್ಲೂ ಟಾಕು ಠೀಕು. ನೋಟದಲ್ಲೂ ಠೀವಿ. ಎಂದೂ ಎಲ್ಲೆ ಮೀರದ ಮಾತು, ಸಭ್ಯತೆಯ ಗೆರೆ ದಾಟದ ನಡತೆ.

ಇಂಥ ವಿಷನರಿ ನಾಯಕನನ್ನು ಸಂಪ್ರದಾಯವನ್ನು ಬದಿಗೊತ್ತಿ ದಸರಾ ಉದ್ಘಾಟನೆಗೆ ಕರೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ, ಸಚಿವ ಸೋಮಶೇಖರರಿಗೆ ವಂದನೆ, ಒಪ್ಪಿಕೊಂಡ ಕೃಷ್ಣರಿಗೆ ಅಭಿನಂದನೆ!

 

Follow Us:
Download App:
  • android
  • ios