ಶಿಕ್ಷಕರನ್ನು ಸಂಬಾಳಿಸುವುದು ಅತ್ಯಂತ ಕಷ್ಟ . ಪ್ರೀತಿ ಹೆಚ್ಚಾದರು ಕಷ್ಟ.. ಪ್ರೀತಿ ಕಡಿಮೆಯಾದರೂ ಕಷ್ಟ ಎಂದು ಮುಖಂಡರೋರ್ವರು ಹೇಳಿದ್ದಾರೆ

ಬೆಂಗಳೂರು (ಅ.12): ‘ಚುನಾವಣೆಯಲ್ಲಿ ಗೆಲ್ಲುವುದು ದೊಡ್ಡ ವಿಚಾರವಲ್ಲ. ಆದರೆ, ಗೆದ್ದ ನಂತರ ಶಿಕ್ಷಕರನ್ನು ಸಂಭಾಳಿಸುವುದು ಬಹುಕಷ್ಟ. ಈ ಜಗತ್ತಿನಲ್ಲಿ ಇಂತಹ ಸವಾಲು ಯಾರಿಗೂ ಬೇಡ. ಪ್ರೀತಿ ಕಡಿಮೆಯಾದರೂ ತೊಂದರೆ, ಪ್ರೀತಿ ಹೆಚ್ಚಾದರೂ ಕಷ್ಟ!

Add Asianetnews Kannada as a Preferred SourcegooglePreferred

- ಹೀಗೆಂದವರು ಜೆಡಿಎಸ್‌ ಹಿರಿಯ ನಾಯಕ ಬಸವರಾಜ ಎಸ್‌. ಹೊರಟ್ಟಿ.

ಭಾರತ ಯಾತ್ರಾ ಕೇಂದ್ರ ಹಾಗೂ ಲೋಕನಾಯಕ ಜೆ.ಪಿ. ವಿಚಾರ ವೇದಿಕೆ-ಕರ್ನಾಟಕ ಸಂಯುಕ್ತವಾಗಿ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ ‘ಲೋಕನಾಯಕ ಜಯಪ್ರಕಾಶ್‌ ನಾರಾಯಣ್‌ ಅವರ 118ನೇ ಜನ್ಮದಿನ’ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್‌ ಸದಸ್ಯರಾಗಿ ದಾಖಲೆ ಸೃಷ್ಟಿಸಿ 40 ವರ್ಷಗಳನ್ನು ಪೂರೈಸಿದ್ದಕ್ಕೆ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಜನಾ​ಕ್ರೋ​ಶಕ್ಕೆ ಮಣಿದ ಸರ್ಕಾ​ರ: ವಿದ್ಯಾಗಮಕ್ಕೆ ತಾತ್ಕಾಲಿಕ ಬ್ರೇಕ್‌! .

ಅಂದಿನ ಕಾಲದಲ್ಲಿ ಚುನಾವಣೆಯ ಗೆಲುವು ದೊಡ್ಡದಾಗಿರಲಿಲ್ಲ. ಆದರೆ, ಗೆದ್ದ ನಂತರ ಶಿಕ್ಷಕರನ್ನು ಸಂಭಾಳಿಸುವುದು ಸವಾಲಾಗಿತ್ತು. ನಿಷ್ಠೆಯಿಂದ ಕಾರ್ಯಪ್ರವೃತ್ತರಾಗಿದ್ದರೂ ಕೆಲವೊಮ್ಮೆ ನಮಗೂ ಮಿತಿಗಳಿರುತ್ತವೆ. ಆಗ ತಮ್ಮ ಕೆಲಸ ಆಗದವರಿಂದ ದೂಷಣೆಯನ್ನೂ ಎದುರಿಸಿದ್ದೇನೆ ಎಂದು ಹೇಳಿದರು.

ಕವಿ ಪ್ರೊ. ಸಿದ್ದಲಿಂಗಯ್ಯ ಮಾತನಾಡಿ, ಜೀವನದುದ್ದಕ್ಕೂ ಹೊರಟ್ಟಿಶಿಕ್ಷಕರ ಏಳಿಗೆಗಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಗ್ರಾಚುಟಿ, ಮುಂಬಡ್ತಿ, ಅರೆಕಾಲಿಕ ಉಪನ್ಯಾಸಕರನ್ನು ಕಾಯಂಗೊಳಿಸುವುದು, ಕ್ರೀಡಾ ತರಬೇತುದಾರರಿಗೆ ಯುಜಿಸಿ ಶ್ರೇಣಿ ವೇತನ, ಸಾಮೂಹಿಕ ವಿಮೆ, ಶಿಕ್ಷಕರ ನೇಮಕಾತಿಗೆ ಹಿಂದಿದ್ದ ವಯೋಮಿತಿ ಸಡಿಲಿಕೆ (40ರಿಂದ 45ಕ್ಕೆ ಏರಿಕೆ) ಹೀಗೆ ಶಿಕ್ಷಕ ವೃಂದಕ್ಕೆ ದೊರೆತ ಹಲವಾರು ಸೌಲಭ್ಯಗಳ ಹಿಂದೆ ಬಸವರಾಜ ಹೊರಟ್ಟಿಅವರ ಶ್ರಮವಿದೆ. ಅವರೊಬ್ಬ ಮಾತೃ ಹೃದಯಿ. ಹೊರಟ್ಟಿಯವರ 40 ವರ್ಷಗಳ ಸುದೀರ್ಘ ಸೇವೆ ಅವಿಸ್ಮರಣೀಯ ಎಂದು ಬಣ್ಣಿಸಿದರು.

ಈ ವೇಳೆ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ.ಬಿ.ಎಲ್‌. ಶಂಕರ್‌, ಮಾಜಿ ಶಾಸಕ ಡಾ.ಎಂ.ಪಿ. ನಾಡಗೌಡ, ಜೆಡಿಎಸ್‌ ಮುಖಂಡ ಮಧುಬಂಗಾರಪ್ಪ, ಮಾಜಿ ವಿಧಾನ ಪರಿಷತ್‌ ಸದಸ್ಯ ಬಿ.ಆರ್‌. ಪಾಟೀಲ್‌ ಇನ್ನಿತರರು ಉಪಸ್ಥಿತರಿದ್ದರು.