ತೋಟದ ಮನೆಯಲ್ಲಿ ಹಾಯಾಗಿರುವ ಸ್ಪೀಕರ್ ರಮೇಶ್ ಕುಮಾರ್
ಕರ್ನಾಟಕ ರಾಜಕೀಯ ಕ್ಷೇತ್ರದಲ್ಲಿ ಪಕ್ಷಗಳ ನಡುವೆ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಒಂದೆಡೆ ಬಿಜೆಪಿ ಅತೃಪ್ತ ಶಾಸಕರನ್ನು ಒಲಿಸಿಕೊಳ್ಳಲು ಯತ್ನಿಸುತ್ತಿದ್ದರೆ, ಇತ್ತ ಕಾಂಗ್ರೆಸ್ ಶಾಸಕರು ರೆಸಾರ್ಟ್ಗೆ ತೆರಳಿದ್ದಾರೆ. ಇಷ್ಟೆಲ್ಲಾ ಬೆಳವಣಿಗಗಳು ನಡೆಯುತ್ತಿದ್ದರೂ ಸ್ಪೀಕರ್ ರಮೇಶ್ ಕುಮಾರ್ ಮಾತ್ರ ತಮ್ಮ ತೋಟದ ಮನೆಯಲ್ಲಿ ಹಾಯಾಗಿದ್ದಾರೆ.
ಕೋಲಾರ[ಜ.19]: ‘ಆಪರೇಷನ್ ಕಮಲ’ದ ಆತಂಕ ರಾಜ್ಯ ಸರ್ಕಾರದಲ್ಲಿ ಮನೆ ಮಾಡಿದ್ದರೂ ಸ್ಪೀಕರ್ ರಮೇಶ್ ಕುಮಾರ್ ಅವರು ಊರಿನಲ್ಲಿ ಹಾಯಾಗಿ ಓಡಾಡಿಕೊಂಡಿದ್ದಾರೆ. ತಮ್ಮೂರು ಅಡ್ಡಗಲ್ನ ತೋಟದ ಫಾರಂನಲ್ಲಿ ಪತ್ನಿ ವಿಜಯಮ್ಮ ಜತೆಗೆ ಆರಾಮಾಗಿ ದಿನ ಕಳೆಯುತ್ತಿದ್ದಾರೆ. ತೋಟ, ಕುರಿ, ಕೋಳಿ, ಬೆಳೆಗಳ ಮಧ್ಯೆ ಹಾಯಾಗಿದ್ದಾರೆ.
ಎರಡು ದಿನಗಳ ಹಿಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ರಮೇಶ್ ಕುಮಾರ್ ಗಂಭೀರವಾದ ಚರ್ಚೆ ನಡೆಸಿದ್ದರು ಎನ್ನಲಾಗಿದೆ. ಇದಾದ ಬಳಿಕ ಶ್ರೀನಿವಾಸಪುರಕ್ಕೆ ತೆರಳಿದ್ದರು ಎನ್ನಲಾಗುತ್ತಿದೆ.