ನಮ್ಮ ನಡುವೆ ಸ್ನೇಹ-ಪ್ರೀತಿಯ ಕೊರತೆ ಇರಲಿಲ್ಲ: ಸಿದ್ದರಾಮಯ್ಯ
ಸ್ನೇಹ ಜೀವಿಯಾಗಿದ್ದ ಅನಂತಕುಮಾರ್ ಅವರು ಹಾಗೂ ನಾವು ಬೇರೆ ಬೇರೆ ಪಕ್ಷದಲ್ಲಿದ್ದರೂ ಸ್ನೇಹ ಹಾಗೂ ಪ್ರೀತಿ ಕೊರತೆ ಇರಲಿಲ್ಲ. ನಮ್ಮ ಹಾಗೂ ಅವರ ಸ್ನೇಹ ಚೆನ್ನಾಗಿತ್ತು. ಪಕ್ಷ ಮತ್ತು ರಾಜಕಾರಣ ಬೇರೆ. ಮನುಷ್ಯ ಸಂಬಂಧಗಳೇ ಬೇರೆ, ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ- ಮಾಜಿ ಸಿಎಂ ಸಿದ್ದರಾಮಯ್ಯ
ಉತ್ತಮ ಆಡಳಿತಗಾರರಾಗಿದ್ದ ಕೇಂದ್ರ ಸಚಿವ ಅನಂತಕುಮಾರ್ ಕರ್ನಾಟಕದ ಬೆಳವಣಿಗೆ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದರು. ಕೇಂದ್ರ ಸರ್ಕಾರದಲ್ಲಿ ಸಚಿವರಾದ ಎಲ್ಲ ಸಂದರ್ಭದಲ್ಲೂ ರಾಜ್ಯದ ಯಾವುದೇ ಸಮಸ್ಯೆ ಬಂದರೂ, ರಾಜ್ಯವನ್ನು ಬಹಳ ಸಮರ್ಥವಾಗಿ ಪ್ರತಿನಿಧಿಸುತ್ತಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅನಂತ್ ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ರಾಷ್ಟ್ರ ರಾಜಕಾರಣಕ್ಕೆ ಅನಂತ್ ಕುಮಾರ್ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡಿದ್ದಾರೆ. ಅವರು ಇನ್ನೂ ದೀರ್ಘಕಾಲ ದೇಶದ ರಾಜಕಾರಣದಲ್ಲಿ ಇರಬೇಕಿತ್ತು ಎಂದಿದ್ದಾರೆ.
ಸ್ನೇಹ ಜೀವಿಯಾಗಿದ್ದ ಅನಂತ್ ಕುಮಾರ್ ಅವರು ಹಾಗೂ ನಾವು ಬೇರೆ ಬೇರೆ ಪಕ್ಷದಲ್ಲಿದ್ದರೂ ಸ್ನೇಹ ಹಾಗೂ ಪ್ರೀತಿ ಕೊರತೆ ಇರಲಿಲ್ಲ. ನಮ್ಮ ಹಾಗೂ ಅವರ ಸ್ನೇಹ ಚೆನ್ನಾಗಿತ್ತು. ಪಕ್ಷ ಮತ್ತು ರಾಜಕಾರಣ ಬೇರೆ. ಮನುಷ್ಯ ಸಂಬಂಧಗಳೇ ಬೇರೆ, ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಅಕಾಲಿಕ ಮರಣದಿಂದ ರಾಷ್ಟ್ರ ರಾಜಕಾರಣಕ್ಕೆ ದೊಡ್ಡ ನಷ್ಟಉಂಟಾಗಿದೆ ಎಂದು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅನಂತ್ ಕುಮಾರ್ ಒಬ್ಬ ಸಜ್ಜನ ಹಾಗೂ ಸುಸಂಸ್ಕೃತ ರಾಜಕಾರಣಿ. ಬಹಳ ಚಿಕ್ಕ ವಯಸ್ಸಿನಲ್ಲಿ ಸಾರ್ವಜನಿಕ ಬದುಕಿನಲ್ಲಿ ತಮ್ಮನ್ನು ತೊಡಗಿಸಿಕೊಂಡು, ರಾಷ್ಟ್ರಮಟ್ಟದ ರಾಜಕಾರಣಕ್ಕೆ ಹೋದವರು. ರಾಷ್ಟ್ರ ನಾಯಕ ಎನಿಸಿಕೊಳ್ಳುವುದಕ್ಕೆ ಎಲ್ಲ ಅರ್ಹತೆ ಪಡೆದವರು. ಎವಿಬಿಪಿಯೊಂದಿಗೆ ಸಾರ್ವಜನಿಕ ಬದುಕು ಆರಂಭಿಸಿ, ಆರ್ಎಸ್ಎಸ್ನೊಂದಿಗೆ ಸಂಬಂಧ ಹೊಂದಿ, ಅಲ್ಲಿಯೇ ಬೆಳೆದರು ಎಂದು ತಿಳಿಸಿದ್ದಾರೆ.