ಕೂಡ್ಲಿಗೆ ಕಾರ್ಯಕ್ರಮದಲ್ಲಿ ಅಕ್ಕ ಪಕ್ಕ ಕುಳಿತರೂ ಮಾತಿಲ್ಲ, ಮುನಿಸಿಕೊಂಡ್ರಾ ಸಿಎಂ-ಡಿಸಿಎಂ? ಡಿಕೆ ಶಿವಕುಮಾರ್ ತಡವಾಗಿ ವೇದಿಕೆಗೆ ಆಗಮಿಸಿ ಅಕ್ಕ ಪಕ್ಕದಲ್ಲಿ ಕುಳಿತರೂ ಮಾತಿಲ್ಲ ಕತೆಯಿಲ್ಲ. ಅಧಿಕಾರ ಹಂಚಿಕೆ ಮುಸುಕಿನ ಗುದ್ದಾಟದಲ್ಲಿ ಮುನಿಸಿಕೊಂಡ್ರಾ?

ವಿಜಯನಗರ (ನ.09) ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುನಿಸಿಕೊಂಡಿದ್ದಾರಾ? ವಿಜಯನಗರದ ಕೂಡ್ಲಿಗೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಇಬ್ಬರ ಮುನಿಸು, ಮುಸುಕಿನ ಗುದ್ದಾಟ ಎದ್ದು ಕಾಣುತ್ತಿತ್ತು ಅನ್ನೋದು ಭಾರಿ ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರು ಬೇರೆ ಬೇರೆಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಬಳಿಕ ಅಕ್ಕ ಪಕ್ಕದಲ್ಲಿ ಕುಳಿತರೂ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮಾತನಾಡಿಲ್ಲ. ಇದು ಇವರಿಬ್ಬ ಮುನಿಸು ಬಹಿರಂಗ ಮಾಡಿದೆ ಎಂದು ರಾಜಕೀಯ ವಲಯದಲ್ಲಿ ಮಾತುಗಳು ಕೇಳಿಬಂದಿದೆ.

ಏಕಾಂಗಿಯಾಗಿ ವೇದಿಕೆಗೆ ಬಂದ ಡಿಕೆ ಶಿವಕುಮಾರ್

ಕೂಡ್ಲಿಗಿ ಪಟ್ಟಣದ ಗೂಡೆಕೋಟೆ ರಸ್ತೆಯಲ್ಲಿ ಜರುಗುತ್ತಿರುವ ಕಾರ್ಯಕ್ರಮಕ್ಕೆ ವೇದಿಕೆಗೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಪತ್ಯೇಕವಾಗಿ ಆಗಮಿಸಿದ್ದಾರೆ. ಮೊದಲು ಸಿದ್ದರಾಮಯ್ಯ ವೇದಿಕೆಗೆ ಆಗಮಿಸಿದರೆ, 2 ನಿಮಿಷ ತಡವಾಗಿ ಡಿಕೆ ಶಿವಕುಮಾರ್ ಆಗಮಿಸಿದ್ದಾರೆ. ಸಚಿವರಾದ ಸಂತೋಷ ಲಾಡ್, ಜಮೀರ್ ಅಹಮ್ಮದ್ ಖಾನ್ ಸೇರಿದಂತೆ ಕೆಲ ನಾಯಕರು ಸಿದ್ದರಾಮಯ್ಯ ಅವರನ್ನು ವೇದಿಕೆಗೆ ಕರೆತಂದಿದ್ದಾರೆ. ಇತ್ತ ಡಿಕೆ ಶಿವಕುಮಾರ್ ಏಕಾಂಗಿಯಾಗಿ ವೇದಿಕೆಗೆ ಆಗಮಿಸಿದ್ದಾರೆ. ಬಳಿಕ ಶಿವಕುಮಾರ್ ಅವರನ್ನು ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ್ ವೇದಿಕೆಗೆ ಕರೆತಂದಿದ್ದಾರೆ.

ಅಕ್ಕಪಕ್ಕದಲ್ಲಿ ಕುಳಿತರೂ ಮಾತಿಲ್ಲ

ವೇದಿಕೆಗೆ ಬಂದ ಡಿಕೆ ಶಿವಕುಮಾರ್‌, ಸಿದ್ದರಾಮಯ್ಯ ಪಕ್ಕದಲ್ಲೇ ಹಾಕಿದ್ದ ಕುರ್ಚಿಯಲ್ಲಿ ಕುಳಿತಿದ್ದಾರೆ. ಆದರೆ ಅರ್ಧಗಂಟೆ ಕಳೆದರೂ ಇಬ್ಬರು ಮಾತನಾಡಿಲ್ಲ. ವೇದಿಕೆ ಮೇಲೆ ಇಬ್ಬರ ಮುನಿಸು ಸ್ಪಷ್ಟವಾಗಿ ಕಾಣುತ್ತಿದೆ ಎಂಬ ಮಾತುಗಳು ಕೇಳಿಬಂದಿದೆ. ಮುನಿಸು ಕುರಿತು ಈ ಹಿಂದೆಯೂ ಹಲವು ಪ್ರಶ್ನೆಗಳು ಎದ್ದಿದೆ. ಈ ವೇಳೆ ಇಬ್ಬರು ಜೊತೆಯಾಗಿ ಕೈ ಕೈಹಿಡಿದು ನಿಂತು ಉತ್ತರ ನೀಡಿದ್ದರು. ಇದೀಗ ಉಹಾಪೋಹಗಳು ಹರಿದಾಡುತ್ತಿದ. ಅಧಿಕಾರ ಹಂಚಿಕೆ, ನವೆಂಬರ್ ಕ್ರಾಂತಿ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ನವೆಂಬರ್‌ನಲ್ಲಿ ಯಾವುದೇ ಕ್ರಾಂತಿ ಇಲ್ಲ, ಸಿದ್ದರಾಮಯ್ಯ ನವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ಹಿನ್ನಲೆಯಲ್ಲಿ ಇಬ್ಬರು ಮುನಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ನವೆಂಬರ್ ಮಹತ್ವ

ರಾಜ್ಯ ಕಾಂಗ್ರೆಸ್‌ನಲ್ಲಿ ಹಲವು ನಾಯಕರು ನವೆಂಬರ್‌ನಲ್ಲಿ ಕ್ರಾಂತಿ ಮಾತನಾಡುತ್ತಿದ್ದಾರೆ. ಅದು ಮುಖ್ಯಮಂತ್ರಿ ಬದಲಾವಣೆ ಅಥವಾ ಸಚಿವ ಸಂಪುಟ ಪುನರ್ ರಚನೆಯೋ ಅನ್ನೋ ಕುರಿತು ಸ್ಪಷ್ಟನೆ ಇಲ್ಲ. ಬಿಹಾರ ಚುನಾವಣೆ ಫಲಿತಾಂಶ ಬಳಿಕ ಕರ್ನಾಟಕದಲ್ಲಿ ಕ್ರಾಂತಿ ನಡೆಯಲಿದೆ ಎಂದು ಹಲವು ನಾಯಕರು ಹೇಳಿಕೆಗಳನ್ನು ನೀಡಿದ್ದಾರೆ.