ವಿಧಾನ ಪರಿಷತ್‌ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಅಗೌರವದ ಪದ ಬಳಸಿದ ಆರೋಪದ ಮೇಲೆ ಸಿ.ಟಿ. ರವಿ ವಿರುದ್ಧ ವಿಚಾರಣೆ ನಡೆಸಲಾಯಿತು. ಸಭಾಪತಿ ಬಸವರಾಜ್ ಹೊರಟ್ಟಿ ಇಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಸೂಚಿಸಿ, ಕಲಾಪದ ಸಾರಾಂಶ ದಾಖಲಿಸದಂತೆ ನಿರ್ದೇಶನ ನೀಡಿದರು.

ಬೆಳಗಾವಿ (ಡಿ.20): ವಿಧಾನಪರಿಷತ್‌ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಪ್ರಾಸ್ಟಿಟ್ಯೂಟ್‌ ಎಂದು ಬಿಜೆಪಿಯ ಪರಿಷತ್‌ ಸದಸ್ಯ ಸಿಟಿ ರವಿ ಕರೆದಿರುವುದು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಇದರ ನಡುವೆ ಗುರುವಾರದ ಘಟನೆಯ ಬೆನ್ನಲ್ಲಿಯೇ ಸುವರ್ಣಸೌಧದ ಸಭಾಪತಿ ಕಚೇರಿಯಲ್ಲಿ ಈ ಬಗ್ಗೆ ವಿಚಾರಣೆ ನಡೆದಿದ್ದು, ಸ್ವತಃ ಸಭಾಪತಿ ಹಿರಿಯ ನಾಯಕ ಬಸವರಾಜ್‌ ಹೊರಟ್ಟಿ ರೂಲಿಂಗ್‌ ಕೂಡ ನೀಡಿದ್ದಾರೆ. ಸಭಾಪತಿ ಕಚೇರಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಿಟಿ ರವಿ ಮುಖಾಮುಖಿಯಾಗಿ ವಿಚಾರಣೆಗೆ ಹಾಜರಾಗಿದ್ದಾರೆ. ಬಸವರಾಜ್ ಹೊರಟ್ಟಿ ಅವರು ಸಿಟಿ ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್‌ ಇಬ್ಬರನ್ನೂ ಕೂರಿಸಿ ವಿವರಣೆ ಪಡೆದುಕೊಂಡಿದ್ದಾರೆ. ಆಡಿಯೋ, ವಿಡಿಯೋ ಪರಿಶೀಲಿಸಿದ ಬಸವರಾಜ್ ಹೊರಟ್ಟಿ, ಪ್ರಾಸ್ಟಿಟ್ಯೂಟ್ ಪದ ಬಳಸಲಾಗಿದೆಯಾ ಎಂದು ಪರಿಶೀಲನೆ ಮಾಡಿದ್ದರು. ಸಭಾಪತಿ ಕಚೇರಿಯ ಸಭೆ ನಂತರ ಹೊರಟ್ಟಿ ಈ ಬಗ್ಗೆ ರೂಲಿಂಗ್‌ ಕೂಡ ನೀಡಿದ್ದಾರೆ. ಭಾರೀ ವಿವಾದದ ಬಳಿಕ ಮತ್ತೆ ಪರಿಷತ್ ಕಲಾಪ ಶುರುವಾಗಿತ್ತು. ಈ ಬಗ್ಗೆ ಹೇಳಿರುವ ಮಾತುಗಳ ಬಗ್ಗೆ ಇಬ್ಬರೂ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಬಸವರಾಜ್‌ ಹೊರಟ್ಟಿ ತಿಳಿಸಿದ್ದರು.

Add Asianetnews Kannada as a Preferred SourcegooglePreferred

'ಯಾವುದೇ ಮಹಿಳೆ ಮೇಲೆ ಮಾತನಾಡುವುದು ಅಗೌರವ ತರುತ್ತದೆ. ಕಡತಗಳಿಗೆ ಈ ಪದಗಳನ್ನು ಸೇರಿಸದೇ ಇರಲು ನಿರ್ಧಾರ ಮಾಡಲಾಗಿದ್ದು, ಅನಿರ್ಧಿಷ್ಟಾವದಿಗೆ ವಿಧಾನಪರಿಷತ್ ಕಲಾಪ ಮುಂದೂಡಲಾಗಿದೆ' ಎಂದು ರೂಲಿಂಗ್‌ ನೀಡಿದರು.

ಸಿಟಿ ರವಿ ಮೇಲೆ ಬೇಲ್‌ ಸಿಗದಂಥ ಕೇಸ್‌, ರಾತ್ರಿಯಿಡೀ ಸುತ್ತಾಡಿಸಿ ಅಂಕಲಗಿ ಠಾಣೆಗೆ ಕರೆತಂದ ಪೊಲೀಸರು!

‘ಪ್ರಾಸ್ಟಿಟ್ಯೂಟ್’ ಪದ ಬಳಕೆಗೆ ಸಭಾಪತಿ ರೂಲಿಂಗ್: ಸಾವಿಂಧಾನಿಕವಾಗಿ ಪವಿತ್ರವಾದ ಈ ಸದನ ಹೆಣ್ಣನ್ನು ಗೌರವಿಸಿದೆ. ಅನುಚಿತ ಪದ, ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ಪದಗಳು ಆಡಬಾರದು.ಯಾವ ಸದಸ್ಯರೂ ಅಗೌರವದ ಮಾತು ಬಳಸಿರುವುದು ನನ್ನ ಅವಧಿಯಲ್ಲಿ ಕೇಳಿಲ್ಲ. ಹೆಬ್ಬಾಳ್ಕರ್ ಬಗ್ಗೆ ಸಿ.ಟಿ ರವಿ ಹೇಳಿದ್ದಾರೆ ಎನ್ನಲಾದ ಪದ ಗೌರವ ತರುವಂತದ್ದಲ್ಲ. ಸಿ.ಟಿ ರವಿ ಪ್ರಾಸ್ಟಿಟ್ಯೂಟ್ ಎಂದಿದ್ದಾರೆ ಎಂದು ಹೆಬ್ಬಾಳ್ಕರ್ ದೂರು ನೀಡಿದ್ದಾರೆ. ಯಾವುದೇ ಮಹಿಳೆ ಅಗೌರವದ ಮಾತುಗಳ ಬಗ್ಗೆ ವಿನಾ ಕಾರಣ ದೂರು ನೀಡುವುದಿಲ್ಲ.ಸಿ.ಟಿ ರವಿ ಅವರು ಫ್ರಸ್ಟ್​ರೇಟ್ (ಹತಾಶೆ) ಎಂಬ ಪದ ಬಳಸಿದ್ದಾಗಿ ವಿವರಣೆ ನೀಡಿದ್ದಾರೆ. ಯಾವ ಮಹಿಳೆಯ ಬಗ್ಗೆಯೂ ಅಗೌರವದ ಮಾತಾಡಲ್ಲ ಎಂದು ಸಿಟಿ ರವಿ ಹೇಳಿದ್ದಾರೆ. ಇಬ್ಬರೂ ಈ ವಿಷಯದ ಸತ್ಯಾಸತ್ಯತೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜವಾಬ್ದಾರಿ ಸ್ಥಾನ ಹಾಗೂ ಸಾರ್ವಜನಿಕ ಜೀವನದಲ್ಲಿ ಇತರರಿಗೆ ಮಾದರಿಯಾಗಬೇಕು. ಸದನದ ಸಾರಾಂಶಗಳನ್ನು ಕಡತಗಳಲ್ಲಿ ದಾಖಲಿಸಿಕೊಳ್ಳದಿರಲು ನಿರ್ದೇಶನ ನೀಡುತ್ತೇನೆ' ಎಂದು ಪರಿಷತ್‌ ಸಭಾಪತಿಯಾಗಿರುವ ಬಸವರಾಜ ಹೊರಟ್ಟಿ ರೂಲಿಂಗ್‌ನಲ್ಲಿ ತಿಳಿಸಿದ್ದಾರೆ.

ಸಿಟಿ ರವಿ-ಲಕ್ಷ್ಮೀ ಹೆಬ್ಬಾಳ್ಕರ್‌ ನಡುವೆ 'ಜಾರಿಣಿ' ಯುದ್ಧ; ಅಷ್ಟಕ್ಕೂ ವಿಧಾನಪರಿಷತ್‌ನಲ್ಲಿ ಆಗಿದ್ದೇನು?