ಅಪೂರ್ಣ ಎಕ್ಸ್ಪ್ರೆಸ್ವೇ ಉದ್ಘಾಟಿಸಿ ಜೀವಗಳ ಜತೆ ಮೋದಿ ಚೆಲ್ಲಾಟ: ಸುರ್ಜೇವಾಲಾ
ಅಪೂರ್ಣ ರಸ್ತೆ ಉದ್ಘಾಟಿಸುವ ಮೂಲಕ ನರೇಂದ್ರ ಮೋದಿ ಹಾಗೂ ಬಸವರಾಜ ಬೊಮ್ಮಾಯಿ ಚುನಾವಣೆ ಗಿಮಿಕ್ ಮಾಡಲು ಹೊರಟಿದ್ದಾರೆ. 40 ಪರ್ಸೆಂಟ್ ಭ್ರಷ್ಟಾಚಾರದ ಚರ್ಚೆಯಿಂದ ಜನರ ಗಮನ ಬೇರೆಡೆ ಸೆಳೆಯಲು ಅಪೂರ್ಣ ಹೆದ್ದಾರಿ ಉದ್ಘಾಟಿಸುತ್ತಿದ್ದಾರೆ ಎಂದು ಟೀಕಿಸಿದ ರಣದೀಪ್ ಸಿಂಗ್ ಸುರ್ಜೆವಾಲಾ.
ಬೆಂಗಳೂರು(ಮಾ.12): ‘ಅಪೂರ್ಣ ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಅಪಘಾತಗಳಿಂದ ಈಗಾಗಲೇ 90 ಮಂದಿ ಮೃತಪಟ್ಟಿದ್ದಾರೆ. ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ಪ್ರವಾಹ ಉಂಟಾಗಿ ರಾದ್ಧಾಂತಗಳು ಸೃಷ್ಟಿಯಾಗಿವೆ. ಇದೀಗ ರಾಜಕೀಯಕ್ಕಾಗಿ ಕಾಮಗಾರಿ ಪೂರ್ಣಗೊಳ್ಳದ ಹೆದ್ದಾರಿ ಉದ್ಘಾಟಿಸಿ ಜನರ ಪ್ರಾಣದ ಜತೆ ಚೆಲ್ಲಾಟವಾಡುತ್ತಿದ್ದೀರಾ?’ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಹೆದ್ದಾರಿಗೆ ಅಗತ್ಯ ಭೂ ಸ್ವಾಧೀನ ಮಾಡಿ ಅದಕ್ಕೆ ಹಣಕಾಸು ಭರಿಸಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ನಿಮ್ಮದೇನೂ ಪಾತ್ರವೇ ಇಲ್ಲದೆ ಈ ರಸ್ತೆಯ ಟೋಲ್ ಮೂಲಕ 25 ಸಾವಿರ ಕೋಟಿ ರು. ಜನರ ಹಣ ಲೂಟಿ ಮಾಡಲು ಹೊರಟಿದ್ದೀರಿ. ಪ್ರವಾಹ ನಿಯಂತ್ರಣ ಮಾರ್ಗಸೂಚಿ ಅನುಸರಿಸಿಲ್ಲ, ರೈತರು ತಮ್ಮ ಊರಿನಿಂದ ಪಟ್ಟಣಕ್ಕೆ ಹೋಗಲು ಸೂಕ್ತ ಸಂಪರ್ಕ ವ್ಯವಸ್ಥೆಯಿಲ್ಲ. ಅವೈಜ್ಞಾನಿಕ ಹಾಗೂ ಅಪೂರ್ಣ ಕಾಮಗಾರಿಯ ರಸ್ತೆಯನ್ನು ತರಾತುರಿಯಲ್ಲಿ ಉದ್ಘಾಟಿಸುತ್ತಿರುವುದು ಚುನಾವಣಾ ಗಿಮಿಕ್ ಅಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.
Shivamogga: ಸತ್ತ ಗುತ್ತಿಗೆದಾರನನ್ನು ಬಿಜೆಪಿ ವಾಪಸ್ ಕೊಡಬಲ್ಲದೇ? ಸುರ್ಜೇವಾಲ ಪ್ರಶ್ನೆ
ಅಪೂರ್ಣ ರಸ್ತೆ ಉದ್ಘಾಟಿಸುವ ಮೂಲಕ ನರೇಂದ್ರ ಮೋದಿ ಹಾಗೂ ಬಸವರಾಜ ಬೊಮ್ಮಾಯಿ ಚುನಾವಣೆ ಗಿಮಿಕ್ ಮಾಡಲು ಹೊರಟಿದ್ದಾರೆ. 40 ಪರ್ಸೆಂಟ್ ಭ್ರಷ್ಟಾಚಾರದ ಚರ್ಚೆಯಿಂದ ಜನರ ಗಮನ ಬೇರೆಡೆ ಸೆಳೆಯಲು ಅಪೂರ್ಣ ಹೆದ್ದಾರಿ ಉದ್ಘಾಟಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
40% ಕಮಿಷನ್ ಮರೆಮಾಚಲು ತಂತ್ರ:
ಎಕ್ಸ್ಪ್ರೆಸ್ ಕಾರಿಡಾರ್ ವಾಸ್ತವಾಂಶ ಪರಿಶೀಲಿಸಿದರೆ 2014ರ ಮಾ.4 ರಂದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ-275 ಆಗಿ ಅಧಿಸೂಚನೆ ಹೊರಡಿಸಿತ್ತು. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ 2016ರ ಅ.4ರ ವೇಳೆಗೆ 4,400 ಕೋಟಿ ವೆಚ್ಚ ಮಾಡಿ 2500 ಎಕರೆ ಭೂಮಿ ಸ್ವಾಧೀನ ಪಡಿಸಿಕೊಂಡಿತು. 2018ರ ಫೆ.13ರ ವೇಳೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಗೆ 6,420 ಕೋಟಿ ರು. ಹಣವನ್ನು ಮಂಜೂರು ಮಾಡಿತ್ತು. ಬೆಂಗಳೂರಿನಿಂದ ನಿಡಘಟ್ಟದ 56 ಕಿ.ಮೀ ಉದ್ದ ರಸ್ತೆಗೆ 3501 ಕೋಟಿ ರು., ನಿಡಘಟ್ಟದಿಂದ ಮೈಸೂರಿನ 62 ಕಿ.ಮೀ ಉದ್ದದ ರಸ್ತೆಗೆ 2919 ಕೋಟಿ ನೀಡಿತ್ತು. ಈಗ ಈ ರಸ್ತೆಯ ಒಟ್ಟು ವೆಚ್ಚ 10 ಸಾವಿರ ಕೋಟಿ ಅಂದಾಜು ಮಾಡಲಾಗಿದೆ.
ಇಷ್ಟೆಲ್ಲಾ ಕಾಂಗ್ರೆಸ್ ಪಾತ್ರವಿದ್ದರೂ ಹೆದ್ದಾರಿ ಕಾಮಗಾರಿ ಅಪೂರ್ಣ:
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸುಮಾರು 21 ಕಿ.ಮೀ ಉದ್ದದಷ್ಟುರಸ್ತೆ ಅಪೂರ್ಣವಾಗಿದೆ. 50 ಅಂಡರ್ ಪಾಸ್ಗಳ ಪೈಕಿ 22 ಅಂಡರ್ಪಾಸ್ ಮಾತ್ರ ಪೂರ್ಣಗೊಂಡಿವೆ. 12 ಮೇಲ್ಸೇತುವೆ ಪೈಕಿ 6 ಮಾತ್ರ ಪೂರ್ಣಗೊಂಡಿವೆ.
12 ಹಗುರ ವಾಹನಗಳ ಕೆಳಸೇತುವೆ ಪೈಕಿ 6 ಮಾತ್ರ ಪೂರ್ಣವಾಗಿವೆ. 18 ಪಾದಚಾರಿ ಅಂಡರ್ಪಾಸ್ಗಳ ಪೈಕಿ ಕೇವಲ 8 ಮಾತ್ರ ಪೂರ್ಣಗೊಂಡಿವೆ. ಅಪೂರ್ಣವಾಗಿರುವ, ಛಿದ್ರವಾಗಿರುವ ಹಾಗೂ ತೇಪೆಯಿಂದ ಕೂಡಿರುವ ರಾಷ್ಟ್ರೀಯ ಹೆದ್ದಾರಿಯನ್ನು ಪ್ರಧಾನಮಂತ್ರಿಗಳು ಉದ್ಘಾಟನೆ ಮಾಡುತ್ತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.