Asianet Suvarna News Asianet Suvarna News

Raita Ratna award 2022 ಗಿರ್‌ ಗೋಸಾಕಣೆಯಲ್ಲಿ ಮ್ಯಾಜಿಕ್‌ ಸೃಷ್ಟಿಸಿದ ಬೆಳ್ತಂಗಡಿಯ ಅಭಿನಂದನ್‌

ಕೆಮಿಕಲ್‌ ಎಂಜಿನಿಯರಿಂಗ್‌ ಕಲಿತು ಬೆಂಗಳೂರಿನಲ್ಲಿ ಉತ್ತಮ ಸಂಬಳದ ಕೆಲಸ ಇದ್ದರೂ ಅದನ್ನು ತ್ಯಜಿಸಿ ಕೈಹಾಕಿದ್ದು ಕೃಷಿಗೆ. ಅದರಲ್ಲೂ ಇವರು ಪಕ್ಕಾ ದೇಸಿ ರೈತ. ರಾಸಾಯನಿಕ ಬಳಕೆಯ ಹಾನಿಯನ್ನು ಕಂಡು, ಬೆಂಗಳೂರಿನ ಜೀವನ ಶೈಲಿಯಿಂದ ರೋಸಿಹೋದ ಇವರು ಅದನ್ನೆಲ್ಲ ಬಿಟ್ಟು ನಾಲ್ಕು ವರ್ಷಗಳ ಹಿಂದೆ ಬೆಳ್ತಂಗಡಿಯ ತಮ್ಮ ಕುಗ್ರಾಮಕ್ಕೆ ಬಂದು ಸುಮಾರು 15 ಎಕರೆ ಜಾಗದಲ್ಲಿ ಸಾವಯವ ಕೃಷಿ ಚಟುವಟಿಕೆ ಜತೆಗೆ ದೇಸಿ ಹಸು ಸಾಕಣೆಯಲ್ಲಿ ತೊಡಗಿಕೊಂಡವರು.
 

Raita Ratna Award 2022 Young Farmer category winner Abhinandan from Dakshina Kannada vcs
Author
Bangalore, First Published Apr 12, 2022, 11:56 AM IST

ಸಂದೀಪ್‌ ವಾಗ್ಲೆ, ಮಂಗಳೂರು

ಇವರು ಅಭಿನಂದನ್‌. ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಕಜೆ ಬೈಲಿನವರು. ಈಗವರಿಗೆ ಕೇವಲ 30 ವರ್ಷ ವಯಸ್ಸು. ಬೆಂಗಳೂರಿನಿಂದ ಹಳ್ಳಿಗೆ ಬಂದ ಅವರು ಮೊದಲು ಆರಂಭಿಸಿದ್ದು ಅಪರೂಪದ ಗಿರ್‌ ದೇಸಿ ತಳಿ ಹಸುಗಳ ಸಾಕಣೆ. ಅದರ ಉತ್ಪನ್ನಗಳಿಗೆ ಅವರದ್ದೇ ಆದ ‘ಸತ್ವ ಸೂಪರ್‌ ಫುಡ್ಸ್‌’ ಎನ್ನುವ ಬ್ರ್ಯಾಂಡ್‌ ಕೂಡ ನೀಡಿದ್ದಾರೆ. ‘ಸತ್ವ ಸೂಪರ್‌ ಫುಡ್ಸ್‌ ಡಾಟ್‌ ಕಾಂ’ ವೆಬ್‌ಸೈಟ್‌ ಕೂಡ ಇವರೇ ತಯಾರಿಸಿ ಮಾರುಕಟ್ಟೆಗೆ ಡಿಜಿಟಲ್‌ ಸ್ಪರ್ಶ ನೀಡಿದ್ದಾರೆ. ಹೀಗಾಗಿ ದೇಶಾದ್ಯಂತ ಇವರ ಬ್ರ್ಯಾಂಡ್‌ನ ದೇಸಿ ಹಸುವಿನ ಉತ್ಪನ್ನಗಳು ಭರ್ಜರಿ ಮಾರಾಟವಾಗುತ್ತಿವೆ.

‘ಬ್ಲೂ ಡಾರ್ಟ್‌’ ಆನ್‌ಲೈನ್‌ ಸಂಸ್ಥೆಯೊಂದಿಗೂ ಅಭಿನಂದನ್‌ ಒಪ್ಪಂದ ಮಾಡಿಕೊಂಡಿದ್ದು, ದೇಶದ ಎಲ್ಲೇ ಇರಲಿ, 5 ದಿನದೊಳಗೆ ಇವರ ಬ್ರ್ಯಾಂಡ್‌ನ ತುಪ್ಪ ಹಾಗೂ ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳು ಗ್ರಾಹಕರ ಮನೆ ಬಾಗಿಲಿಗೆ ತಲುಪುತ್ತವೆ. ಹಾಲಿನ ಉತ್ಪನ್ನಗಳನ್ನು ಉದ್ದಿಮೆಗಳ ರೀತಿ ಬಾಟಲಿಗಳಲ್ಲಿ ತುಂಬಿಸಿ ಪ್ಯಾಕ್‌ ಮಾಡಿ ಬ್ರ್ಯಾಂಡ್‌ ನೇಮ್‌ ಸ್ಟಿಕ್ಕರ್‌ ಅಂಟಿಸಿ ಹೊಸ ಉದ್ಯಮವನ್ನೇ ಸೃಷ್ಟಿಸಿದ್ದಾರೆ. ಗಿರ್‌ ಹಸುಗಳಿಂದಲೇ ಲಕ್ಷಾಂತರ ರು. ಆದಾಯ ಪಡೆಯುತ್ತಿದ್ದಾರೆ.

Raita Ratna Award 2022: ಪರಿಸರ ಸ್ನೇಹಿ ಬದುಕಿನ ಪಾಠ ಹೇಳುವ ಅನ್‌ಮೋಲ್‌ ಶಾಲೆ

ಅಭಿನಂದನ್‌ ಬೆಂಗಳೂರು ಬಿಟ್ಟು ಬರುವಾಗ ಅಲ್ಲಿನ ಆಡುಗೋಡಿ ನ್ಯಾಷನಲ್‌ ಡೇರಿ ರಿಸಚ್‌ರ್‍ ಇನ್ಸಿ$್ಟಟ್ಯೂಟ್‌ ಸಂಪರ್ಕಿಸಿ, ವಿಜ್ಞಾನಿಗಳ ಸಲಹೆ ಪಡೆದು ದೇಸಿ ತಳಿ ಗಿರ್‌ ಆಕಳುಗಳ ಸಾಕಣೆ ಆರಂಭಿಸಿದ್ದರು. ಆರಂಭದಲ್ಲಿ ಒಂದೇ ಹಸುವಿನಿಂದ ಆರಂಭಿಸಿದವರು ಈಗ 25ರಷ್ಟುಹಸುಗಳು, ಕರುಗಳು, ಹೋರಿಗಳನ್ನು ಹೊಂದಿದ್ದಾರೆ. ಸಾಮಾನ್ಯವಾಗಿ ಬೇರೆ ತಳಿಯ ಹೋರಿಗಳು ಉಪಯೋಗಕ್ಕಿಲ್ಲ ಎಂದು ಕಸಾಯಿಖಾನೆಗೆ ಕೊಡುವುದು ಹೆಚ್ಚು. ಆದರೆ ಗಿರ್‌ ತಳಿಯ ಹೋರಿಗಳೂ ಬೆಲೆಬಾಳುವಂಥವು. ಗಿರ್‌ ಹಾಲನ್ನು ಸ್ಥಳೀಯವಾಗಿಯೂ ಮಾರಾಟ ಮಾಡುತ್ತಿದ್ದಾರೆ. ಹಾಲಿಗಿಂತ ಗಿರ್‌ ತುಪ್ಪಕ್ಕೆ ಬೇಡಿಕೆ ಹೆಚ್ಚಿರುವುದರಿಂದ ಅದರ ಉತ್ಪಾದನೆಗೆ ಹೆಚ್ಚು ಗಮನ ಹರಿಸಿದ್ದಾರೆ. ಮನೆಯಲ್ಲೇ ಅದಕ್ಕೆ ಬೇಕಾದ ಎಲ್ಲ ಉಪಕರಣಗಳನ್ನೂ ಹೊಂದಿದ್ದಾರೆ. ಗಿರ್‌ ಗೋವಿನ ಸೆಗಣಿ, ಗೋಮೂತ್ರಕ್ಕೂ ಭಾರಿ ಬೇಡಿಕೆ ಇರುವುದರಿಂದ ಮುಂದಿನ ದಿನಗಳಲ್ಲಿ ಈ ಉತ್ಪನ್ನಗಳನ್ನು ಕೂಡ ಮಾರುಕಟ್ಟೆಗೆ ಬಿಡುವ ನಿಟ್ಟಿನಲ್ಲಿ ಯೋಜಿಸಿದ್ದಾರೆ. ಅಲ್ಲದೆ, ಗಿರ್‌ ತಳಿಗಳ ಬ್ರೀಡಿಂಗ್‌ ಮಾಡುವ ನಿಟ್ಟಿನಲ್ಲೂ ಅಭಿನಂದನ್‌ ಕಾರ್ಯ ಪ್ರವೃತ್ತರಾಗಿದ್ದಾರೆ.

ಅಭಿನಂದನ್‌ ತಂದೆ, ತಾಯಿ ನಿವೃತ್ತ ಶಿಕ್ಷಕರು. ಸುಮಾರು 15 ಎಕರೆ ವಿಶಾಲ ಪ್ರದೇಶದಲ್ಲಿ ಅಡಕೆ, ತೆಂಗು, ಕೊಕ್ಕೊ, ಕಾಳುಮೆಣಸು ಮುಖ್ಯ ಬೆಳೆಗಳು. ಅಭಿನಂದನ್‌ ಕೃಷಿಯತ್ತ ವಾಲುವ ಮೊದಲು ತೋಟಕ್ಕೆ ರಾಸಾಯನಿಕ ಬಳಕೆ ಮಾಡುತ್ತಿದ್ದರು. ಇವರು ಬಂದ ನಂತರ ಒಂದು ಹನಿ ರಾಸಾಯನಿಕವನ್ನೂ ತೋಟಕ್ಕೆ ಬಳಸಿದ್ದೇ ಇಲ್ಲ. ಸಂಪೂರ್ಣ ಸಾವಯವ.

Raita Ratna 2022 ತೆಂಗಿನಕಾಯಿ ಹಾಲಿನ ಎಣ್ಣೆ ತಯಾರಿಸಿ ಗೆದ್ದ ಕಾಸರಗೋಡಿನ ಪಾವನಾ ಮಹೇಶ್‌

ಹಸುಗಳು ಮುಕ್ತವಾಗಿ ತೋಟದಲ್ಲಿ ಓಡಾಡುತ್ತ ಮೇಯುವುದು ಇಲ್ಲಿನ ವಿಶೇಷ. ಕರೆದರೆ ಓಡೋಡಿ ಬರುತ್ತವೆ. ಸಣ್ಣ ಮಕ್ಕಳಂತೆ ಮನೆ ಮಂದಿಯೆಲ್ಲ ಹಸು- ಕರುಗಳನ್ನು ಮುದ್ದು ಮಾಡುವ ದೃಶ್ಯ ಅವರ್ಣನೀಯ. ಯಾವುದೇ ರೀತಿಯ ರಾಸಾಯನಿಕ ದೇಸಿ ಹಸುವಿಗೆ ತಟ್ಟಲ್ಲ. ತಮ್ಮ ಉತ್ಪನ್ನ ರಾಸಾಯನಿಕ ರಹಿತವಾಗಿರಬೇಕು ಎನ್ನುವುದು ಅಭಿನಂದನ್‌ ಅವರ ನಿಲುವು.

"

Follow Us:
Download App:
  • android
  • ios