Asianet Suvarna News Asianet Suvarna News

Anti Conversion Bill: ಮೇಲ್ಮನೆಯಲ್ಲಿಂದು ಮತಾಂತರ ನಿಷೇಧ ಮಸೂದೆ ಮಂಡನೆ?

  • ಮೇಲ್ಮನೆಯಲ್ಲಿ ಇಂದು ಮತಾಂತರ ಮಸೂದೆ?
  • ಸುಗ್ರೀವಾಜ್ಞೆಗೆ ಕಾಯ್ದೆ ಸ್ವರೂಪ ನೀಡಲು ಯತ್ನ
  • ಬಹುಮತದ ಕಾರಣ ಸುಲಭವಾಗಿ ಅಂಗೀಕಾರ?
Prohibition of conversion bil in the rajyasabha today rav
Author
First Published Sep 15, 2022, 5:15 AM IST

ಬೆಂಗಳೂರು (ಸೆ.15) : ರಾಜ್ಯದಲ್ಲಿ ಸಾಕಷ್ಟುಚರ್ಚೆ ಹುಟ್ಟು ಹಾಕಿದ್ದ, ಮತಾಂತರ ನಿಷೇಧ ವಿಧೇಯಕ ಎಂದೇ ಹೇಳಲಾಗುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಗುರುವಾರ ವಿಧಾನಪರಿಷತ್ತಿನಲ್ಲಿ ಮಂಡನೆಯಾಗುವ ನಿರೀಕ್ಷೆಯಿದೆ. ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ 2022ನೇ ಸಾಲಿನ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ’ ಮಂಡಿಸುವ ಬಗ್ಗೆ ಪರಿಷತ್ತಿನ ಗುರುವಾರದ ಕಾರ್ಯಕಲಾಪಗಳ ಪಟ್ಟಿಯಲ್ಲಿ ಪ್ರಸ್ತಾಪಿಸಲಾಗಿದೆ.

ಮತಾಂತರ ನಿಷೇಧ ಕಾಯ್ದೆಯಿಂದ ಅಭಿವೃದ್ಧಿಗೆ ಅಡ್ಡಿಯಲ್ಲ: ಸಿಎಂ ಬೊಮ್ಮಾಯಿ

ಕಳೆದ ವರ್ಷ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದ ವೇಳೆ ವಿಧಾನಸಭೆಯಲ್ಲಿ ಈ ವಿಧೇಯಕ ಅಂಗೀಕಾರಗೊಂಡಿತ್ತು. ಆದರೆ, ಸಂಖ್ಯಾಬಲದ ಕೊರತೆ ಕಾರಣ ವಿಧಾನಪರಿಷತ್ತಿನಲ್ಲಿ ಅಂಗೀಕಾರ ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಈ ಬಗ್ಗೆ ರಾಜ್ಯ ಸರ್ಕಾರ ಕಳೆದ ಮೇನಲ್ಲಿ ಸುಗ್ರೀವಾಜ್ಞೆ ಜಾರಿಗೊಳಿಸಿತು. ಆದರೆ, ಸುಗ್ರೀವಾಜ್ಞೆಯ ಅವಧಿ ಆರು ತಿಂಗಳು ಮಾತ್ರ. ಅಷ್ಟರೊಳಗೆ ಉಭಯ ಸದನಗಳಲ್ಲಿ ಮತ್ತೊಮ್ಮೆ ಮಂಡಿಸಿ ಅಂಗೀಕಾರ ಪಡೆಯಬೇಕಾಗುತ್ತದೆ.

ಇದೀಗ ವಿಧಾನಪರಿಷತ್ತಿನಲ್ಲಿ ಆಡಳಿತಾರೂಢ ಬಿಜೆಪಿ ಸ್ಪಷ್ಟಬಹುಮತ ಸಾಧಿಸಿದೆ. ಈಗ ವಿಧೇಯಕಕ್ಕೆ ಅಂಗೀಕಾರ ಪಡೆಯಲು ಯಾವುದೇ ಅಡಚಣೆ ಎದುರಾಗಲಿಕ್ಕಿಲ್ಲ ಎಂಬ ಉದ್ದೇಶದಿಂದ ಮಂಡನೆಗೆ ಮುಂದಾಗಿದೆ. ಬಹುತೇಕ ಗುರುವಾರವೇ ಪರಿಷತ್ತಿನಲ್ಲಿ ಈ ವಿಧೇಯಕ ಮಂಡನೆಯಾಗಲಿದ್ದು, ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ ನಡುವೆ ತೀವ್ರ ವಾಕ್ಸಮರಕ್ಕೆ ನಾಂದಿ ಹಾಡುವ ಸಂಭವವಿದೆ.

ಮಂಗಳವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ನಡೆದಿತ್ತು. ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿರಿಸಿ ಈ ವಿಧೇಯಕವನ್ನು ಅಂಗೀಕರಿಸಿ ಕಟ್ಟುನಿಟ್ಟಾಗಿ ಕಾಯ್ದೆ ರೂಪದಲ್ಲಿ ಜಾರಿಗೆ ತರಬೇಕು ಎಂಬ ಉದ್ದೇಶವನ್ನು ಬಿಜೆಪಿ ಹೊಂದಿದೆ.

Anti Conversion Bill ಕರ್ನಾಟಕ ಮತಾಂತರ ನಿಷೇಧ ಕಾಯ್ದೆಗೆ ರಾಜ್ಯಪಾಲರ ಸಹಿ

ಕಾಯ್ದೆಯಲ್ಲೇನಿದೆ?

  •  ಬಲವಂತ, ಆಮಿಷ ಮತ್ತು ಮದುವೆಯಾಗುವ ಭರವಸೆ ನೀಡಿ ನಡೆಸುವ ಮತಾಂತರಕ್ಕೆ ನಿಷೇಧ
  •  ಮತಾಂತರಗೊಂಡ ವ್ಯಕ್ತಿಯ ಮನೆಯವರು, ಆಪ್ತರು ದೂರು ನೀಡಿದರೆ ಎಫ್‌ಐಆರ್‌ ದಾಖಲು
  •  ಬಲವಂತದ ಮತಾಂತರಕ್ಕೆ 3ರಿಂದ 5 ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ರು.ವರೆಗೆ ದಂಡ
  •  ಮತಾಂತರವಾಗಲು ಮುಂದಾಗಿರುವ ವ್ಯಕ್ತಿ 2 ತಿಂಗಳು ಮೊದಲು ಜಿಲ್ಲಾಧಿಕಾರಿಗೆ ತಿಳಿಸಬೇಕು
  •  ಈ ಮಾಹಿತಿಯನ್ನು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ ಕಚೇರಿ ಸೂಚನಾ ಫಲಕದಲ್ಲಿ ಹಾಕಬೇಕು
  •  ಇದಕ್ಕೆ 30 ದಿನಗಳ ಒಳಗಾಗಿ ಆಕ್ಷೇಪಣೆ ಬಂದರೆ ಕಂದಾಯ ಇಲಾಖೆ ವಿಚಾರಣೆ ನಡೆಸಬೇಕು
  • ತಪ್ಪು ಕಂಡುಬಂದಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಲು ಪೊಲೀಸ್‌ರಿಗೆ ಅಧಿಕಾರ
Follow Us:
Download App:
  • android
  • ios