ಮಾ.1ರಿಂದ ಮುಷ್ಕರಕ್ಕೆ ಸರ್ಕಾರಿ ನೌಕರರ ಸಿದ್ಧತೆ
ಸರ್ಕಾರಕ್ಕೆ ನೋಟಿಸ್ ನೀಡಿ ಏಳು ದಿನಗಳ ಗಡುವು ನೀಡಬೇಕು. ಒಂದೊಮ್ಮೆ ಬೇಡಿಕೆಗಳು ಈಡೇರದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲು ತೀರ್ಮಾನ.
ಬೆಂಗಳೂರು(ಫೆ.22): ಮಧ್ಯಂತರ ವರದಿ ಪಡೆದು ಏಳನೇ ವೇತನ ಆಯೋಗ ಜಾರಿಗೊಳಿಸಬೇಕು, ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ಪಿಂಚಣಿ ವ್ಯವಸ್ಥೆಯನ್ನೇ (ಒಪಿಎಸ್) ಮುಂದುವರೆಸಬೇಕು. ಇಲ್ಲದಿದ್ದರೆ ಬರುವ ಮಾ.1ರಿಂದ ಅನಿರ್ದಿಷ್ಟಾವಧಿ ಕರ್ತವ್ಯಕ್ಕೆ ಗೈರು ಹಾಜರಾಗುತ್ತೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಎಚ್ಚರಿಕೆ ನೀಡಿದೆ. ಮಂಗಳವಾರ ಸಂಜೆ ಕಬ್ಬನ್ ಪಾರ್ಕ್ನ ಸರ್ಕಾರಿ ನೌಕರರ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಕಾರ್ಯಕಾರಿಣಿಯಲ್ಲಿ, ಸರ್ಕಾರಕ್ಕೆ ನೋಟಿಸ್ ನೀಡಿ ಏಳು ದಿನಗಳ ಗಡುವು ನೀಡಬೇಕು. ಒಂದೊಮ್ಮೆ ಬೇಡಿಕೆಗಳು ಈಡೇರದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಬೇಕು ಎಂದು ತೀರ್ಮಾನಿಸಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ್ದ ರಾಜ್ಯ ಬಜೆಟ್ನಲ್ಲಿ 7ನೇ ವೇತನ ಆಯೋಗ ರಚನೆಯ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲದಿರುವುದು ಸರ್ಕಾರಿ ನೌಕರರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ತುರ್ತು ಸಭೆ ಸೇರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಸರ್ಕಾರಿ ನೌಕರರು ಸಿದ್ಧರಾಗಿದ್ದಾರೆ.
Karnataka Budget 2023-24: ಈ ವರ್ಷವೇ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಅನುಷ್ಠಾನ: ಸಿಎಂ ಬೊಮ್ಮಾಯಿ ಭರವಸೆ
ಇತರ ರಾಜ್ಯಗಳು ಮಾದರಿ:
ಏಳನೇ ವೇತನ ಆಯೋಗದ ಮಧ್ಯಂತರ ವರದಿ ಪಡೆದು ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನ ಶೇ.40ರಷ್ಟುಫಿಟ್ಮೆಂಟ್ ಅನ್ನು 2022 ಜುಲೈ 1ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ತರಬೇಕು. ರಾಜಸ್ಥಾನ, ಛತ್ತೀಸ್ಗಢ, ಜಾರ್ಖಂಡ್, ಪಂಜಾಬ್ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಹೊಸ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೆ ತಂದಿರುವಂತೆಯೇ ರಾಜ್ಯದಲ್ಲಿಯೂ ಎನ್ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.
ಈ ಎರಡೂ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು 7 ದಿನಗಳ ನೋಟಿಸ್ ನೀಡುವುದು. ಬೇಡಿಕೆ ಈಡೇರಿಸದಿದ್ದರೆ ಮಾ.1 ರಿಂದ ರಾಜ್ಯದ ಸಮಸ್ತ ಸರ್ಕಾರಿ ನೌಕರರು, ನಿಗಮ ಮತ್ತು ಮಂಡಳಿಗಳು, ಅನುದಾನಿತ ಸಂಸ್ಥೆಯ ಎಲ್ಲ ನೌಕರರು ಅನಿರ್ದಿಷ್ಟಾವಧಿಯವರೆಗೆ ಕರ್ತವ್ಯಕ್ಕೆ ಗೈರು ಹಾಜರಾಗಬೇಕು ಎಂದು ಸಂಘ ಕರೆ ನೀಡಿದೆ.
ಹಳೆ ಪದ್ಧತಿ ಮರುಜಾರಿಗೆ ಹೆಚ್ಚಿದ ಒತ್ತಡ: ಎನ್ಪಿಎಸ್ನಲ್ಲೂ ನಿಶ್ಚಿತ 50 ಪಿಂಚಣಿ
ನೌಕರರ ಮೇಲೆ ಹಲ್ಲೆ: ಲಿಂಗೇಗೌಡ ಆರೋಪ
‘ಸಭೆಗೆ ಆಹ್ವಾನ ನೀಡಿ ನಮ್ಮ ಅಭಿಪ್ರಾಯ ಕೇಳದೆ ನಿರ್ಣಯ ಕೈಗೊಳ್ಳಲಾಗಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಹಲವರ ಮೇಲೆ ಹಲ್ಲೆ ನಡೆಸಲಾಗಿದೆ’ ಎಂದು ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್.ಲಿಂಗೇಗೌಡ ಆರೋಪಿಸಿದರು.
ಸಂಘದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘7ನೇ ವೇತನ ಆಯೋಗ ಜಾರಿಗೊಳಿಸಬೇಕು. ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಮುಂದುವರೆಸಬೇಕು ಎಂಬುದಕ್ಕೆ ನಮ್ಮ ಬೆಂಬಲವಿದೆ. ಆದರೆ ಚರ್ಚೆ ನಡೆಸದೆ ನಿರ್ಣಯ ಕೈಗೊಳ್ಳುವುದು ಸರಿಯಲ್ಲ. ಎನ್ಪಿಎಸ್ ವಿರೋಧಿಸಿ ಪ್ರತಿಭಟನೆ ಮುಂದುವರೆಸಬೇಕು ಎಂದು ನಾವು ಸಲಹೆ ನೀಡಿದ್ದಕ್ಕೆ ಕೆಲವರು ಹಲ್ಲೆ ನಡೆಸಿದರು’ ಎಂದು ಕಿಡಿಕಾರಿದರು.