ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ವರ್ಷಗಳ ಮೊದಲೇ ಹೇಳಿದ್ದ ದ್ವಾರಕನಾಥ ಗುರೂಜಿ ಇದೀಗ ಸಿಎಂ ಕುರಿತು ಮಹತ್ವದ ಮಾತುಗಳನ್ನಾಡಿದ್ದಾರೆ. ಮಾತುಗಳ ನಡುವೆ ದ್ವಾರಕನಾಥ್ ಗುರೂಜಿ ಭಾವುಕರಾಗಿದ್ದಾರೆ.
ಬೆಂಗಳೂರು (ಜು.12 ) ಬೆಂಗಳೂರಿನ ಲಿಂಗಧೀರನಹಳ್ಳಿಯಲ್ಲಿ ಸುಬ್ರಮಣ್ಯ ದೇವಾಲಯದ ಭೂಮಿಪೂಜೆ ಕಾರ್ಯಕ್ರಮ ಅದ್ಧೂರಿಯಾಗಿ ನೇರವೇರಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೂಮಿ ಪೂಜೆ ನೆರವೇರಿಸಿದ್ದಾರೆ. ಈ ವೇಳೆ ಮಾತನಾಡಿದ ರಾಜಗುರು ದ್ವಾರಕನಾಥ್ ಡಿಕೆ ಶಿವಕುಮಾರ್ ದೂರದೃಷ್ಟಿ ಇರುವ ರಾಜಕಾರಣಿ ಎಂದಿದ್ದಾರೆ. ಕೆಲ ವರ್ಷಗಳ ಮೊದಲೇ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದ ರಾಜಗುರು ದ್ವಾರಕನಾಥ್ ಇದೀಗ ಸಿಎಂ ಕುರಿತು ಕೆಲ ಮಾತುಗಳನ್ನಾಡಿದ್ದಾರೆ.
ನಾನು ಸಾಮಾನ್ಯ ಮನುಷ್ಯ, ದೇವರು ನಡೆಸಿಕೊಳ್ಳುತ್ತಾನೆ
ನಾನು ಸಾಮಾನ್ಯ ಮನುಷ್ಯ, ದೇವರು ನಡೆಸಿಕೊಳ್ಳುತ್ತಾನೆ ಎಂದು ರಾಜಗುರು ದ್ವಾರಕನಾಥ್ ಹೇಳಿದ್ದಾರೆ. ಮೊದಲೇ ಮುಖ್ಯಮಂತ್ರಿ ಆಗುತ್ತಾರೆ ಎಂದಿದ್ದೆ. ಡಿಕೆ ಶಿವಕುಮಾರ್ ಸಿಎಂ ಆಗಿದ್ದಾರೆ. ರಾಮ ಅಯೋಧ್ಯೆಯನ್ನೇ ಸಂಪಾದನೆ ಮಾಡಿದ್ದ, ಹಾಗೇ ಶಿವಕುಮಾರ್ ಕಷ್ಟಪಟ್ಟು ಕರ್ನಾಟಕವನ್ನು ಸಂಪಾದಿಸಿದ್ದಾರೆ. ಅನೇಕ ಕಾಲ ಡಿಕೆ ಶಿವಕುಮಾರ್ ಸಿಎಂ ಆಗಿದ್ದು ಜನಸೇವೆ ಮಾಡಲಿ ಎಂದು ರಾಜಗುರು ದ್ವಾರಕನಾಥ್ ಹಾರೈಸಿದ್ದಾರೆ.
ಐದು ವರ್ಷ ಡಿಕೆ ಶಿವಕುಮಾರ್ ಮುಖ್ಯಮಂತ್ರಿ
ಸುಬ್ರಹ್ಮಣ್ಯ ದೇವರೇ ಡಿಕೆ ಶಿವಕುಮಾರ್ ಹೆಸರಲ್ಲಿ ಬಂದು ಈ ಜಾಗ ಕೊಡಿಸಿದ್ದಾನೆ. ಐದು ವರ್ಷ ಪೂರ್ತಿ ಡಿಕೆ ಶಿವಕುಮಾರ್ ಸಿಎಂ ಆಗಿರಲಿ. ದೇವರಾಜ್ ಅರಸು ಎಲ್ಲರನ್ನು ಒಳಗೊಂಡು ಸೇವೆ ಮಾಡಿದ್ದರು. ಈಗ ಡಿಕೆ ಶಿವಕುಮಾರ್ ಎಲ್ಲರನ್ನೂ ಆದರದಿಂದ ನೋಡಿ ಸೇವೆ ಮಾಡುತ್ತದ್ದಾರೆ ಎಂದು ರಾಜಗುರು ದ್ವಾರಕನಾಥ್ ಹೇಳಿದ್ದಾರೆ. ದೇವರನ್ನು ಬಿಟ್ಟರೇ ನನಗೇನು ಇಲ್ಲ ಎಂದು ರಾಜಗುರು ದ್ವಾರಕನಾಥ್ ಭಾವುಕರಾಗಿದ್ದಾರೆ.
ಮಂತ್ರಿಯಾಗುತ್ತಿಯಾ ಎಂದಿದ್ದ ದ್ವಾರಕನಾಥ್
ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, 5-6 ವರ್ಷದಿಂದ ನಮ್ಮ ಮನೆ ದೇವರು ತಿರುಪತಿಗೆ ಹೋಗಿರಲಿಲ್ಲ. ತಿರುಪತಿಗೆ ಹೋಗಿ ಬಾ ಅಂತ ಹೇಳಿದ್ದರು. ನೀನು ಮಂತ್ರಿ ಆಗುತ್ತಿಯಾ ಎಂದು ದ್ಪಾರಕನಾಥ್ ನನಗೆ ಬಹಳ ವರ್ಷಗಳ ಹಿಂದೆ ಹೇಳಿದ್ದರು. 35 ವರ್ಷದ ಹಿಂದೆಯೇ ಮಾರ್ಗದರ್ಶನ ಕೊಟ್ಟಿದ್ದರು. ಅವರು ಮಾರ್ಗದರ್ಶನ ಕೊಟ್ಟಿರುವ ಸನ್ನಿವೇಶ ಹೇಳಿದ್ರೆ ದೊಡ್ಡ ಪುಸ್ತಕ ಬರೆಯಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಹಲವು ಬಾರಿ ಮಾಧ್ಯಮಗಳು ದ್ವಾರಕಾನಾಥ್ ಗುರುಜಿ ಪ್ರಶ್ನಿಸಿತ್ತು. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದಿದ್ದೀರಿ. ಆಗಿಲ್ಲ ಎಂದು ಪ್ರಶ್ನಿಸಿದ್ದರು. ಗುರೂಜಿ ಸಾಕಷ್ಟು ಧಮ್ಕಿ ಎದುರಿಸಿದ್ದಾರೆ. ಆದರೆ ಯಾವುದಕ್ಕೂ ಹೆದರಿಲ್ಲ. ದೇವರಾಜ ಅರಸು, ಎಸ್. ಎಂ ಕೃಷ್ಣ ,ವಿಲಾಶರಾವ್ ದೇಶಮುಖ್ ಅವರ ಕಾಲದಿಂದ ಅನೇಕ ಮಾರ್ಗದರ್ಶನ ಮಾಡಿದ್ದಾರೆ.ದ್ವಾರಕನಾಥ್ ಅವರು ಜ್ಞಾನದಲ್ಲಿ ಶ್ರೀಮಂತರು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.


