ಬೆಟ್ಟಿಂಗ್ ಅಥವಾ ಜೂಜಾಟದ ಉದ್ದೇಶವಿಲ್ಲದೆ ಕೇವಲ ಮನರಂಜನೆಯ ಕಾರಣಕ್ಕೆ ಇಸ್ಪೀಟ್‌ ಆಡುವುದು ನೈತಿಕವಾಗಿ ತಪ್ಪಲ್ಲ ಎಂದು ಕರ್ನಾಟಕದ ವ್ಯಕ್ತಿಯೊಬ್ಬರ ಪ್ರಕರಣದ ತೀರ್ಪಿನ ವೇಳೆ ಸುಪ್ರೀಂಕೋರ್ಟ್‌ ಹೇಳಿದೆ.

ನವದೆಹಲಿ (ಮೇ.26): ಬೆಟ್ಟಿಂಗ್ ಅಥವಾ ಜೂಜಾಟದ ಉದ್ದೇಶವಿಲ್ಲದೆ ಕೇವಲ ಮನರಂಜನೆಯ ಕಾರಣಕ್ಕೆ ಇಸ್ಪೀಟ್‌ ಆಡುವುದು ನೈತಿಕವಾಗಿ ತಪ್ಪಲ್ಲ ಎಂದು ಕರ್ನಾಟಕದ ವ್ಯಕ್ತಿಯೊಬ್ಬರ ಪ್ರಕರಣದ ತೀರ್ಪಿನ ವೇಳೆ ಸುಪ್ರೀಂಕೋರ್ಟ್‌ ಹೇಳಿದೆ. ಸರ್ಕಾರಿ ಪಿಂಗಾಣಿ ಕಾರ್ಖಾನೆ ನೌಕರರ ವಸತಿ ಸಹಕಾರಿ ಸಂಘ ಲಿಮಿಟೆಡ್‌ನ ನಿರ್ದೇಶಕರ ಮಂಡಳಿಗೆ ಆಯ್ಕೆಯಾಗಿದ್ದ ಹನುಮಂತರಾಯಪ್ಪ ವೈಎಸ್‌ ಎನ್ನುವವರು ಕೆಲವರೊಂದಿಗೆ ಇಸ್ಪೀಟ್‌ ಆಡುತ್ತಿದ್ದಾಗ ಸಿಕ್ಕಿಬಿದ್ದಿದ್ದರು.

Add Asianetnews Kannada as a Preferred SourcegooglePreferred

ಅವರಿಗೆ 200 ರು. ದಂಡವನ್ನು ವಿಧಿಸಲಾಗಿತ್ತು. ಈ ಬೆನ್ನಲ್ಲೇ ಹನುಮಂತರಾಯಪ್ಪ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಹೀಗಾಗಿ ಅವರನ್ನು ನಿರ್ದೇಶಕರ ಮಂಡಳಿಯಿಂದ ವಜಾಗೊಳಿಸಬೇಕು ಎಂದು ಚುನಾವಣೆಯಲ್ಲಿ ಹನುಮಂತರಾಯಪ್ಪ ವಿರುದ್ಧ ಸೋತಿದ್ದ ಬಿ. ರಂಗನಾಥ್‌ ಆಗ್ರಹಿಸಿದ್ದರು. ಅಲ್ಲದೇ , ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆಯ ಸೆಕ್ಷನ್ ಅಡಿ ಅವರ ಸದಸ್ಯತ್ವ ರದ್ದುಗೊಳಿಸಲಾಗಿತ್ತು.

ಹೈಕೋರ್ಟ್‌ ಕೂಡ ಈ ತೀರ್ಪು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಹನುಮಂತರಾಯಪ್ಪ ಸುಪ್ರೀಂ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ದ್ವಿಸದಸ್ಯ ಪೀಠ ಈ ತೀರ್ಪು ನೀಡಿದೆ. ‘ ಹಲವು ರೀತಿಯ ಇಸ್ಟೀಟ್‌ ಆಟಗಳಿವೆ. ಪ್ರತಿಯೊಂದು ರೀತಿಯ ಇಸ್ಟೀಟ್‌ ಆಟವು ನೈತಿಕ ಅಧಃಪತನವನ್ನು ಒಳಗೊಂಡಿರುತ್ತದೆ ಎಂಬುದನ್ನು ಒಪ್ಪಿಕೊಳ್ಳುವುದು ಕಷ್ಟ. ವಿಶೇಷವಾಗಿ ಮನರಂಜನೆ ಅಥವಾ ಬೆಟ್ಟಿಂಗ್ ಅಂಶವಿಲ್ಲದೆ ಇಸ್ಟೀಟ್ ಆಟ ಬಡವರ ಮನರಂಜನೆಯ ಮೂಲ ಎಂದು ಸ್ವೀಕರಿಸಲಾಗುತ್ತದೆ’ ಎಂದಿದೆ.

ಅಲ್ಲದೇ ಕರ್ನಾಟಕ ಹೈಕೋರ್ಟ್‌ ನೀಡಿದ್ದ ತೀರ್ಪು ರದ್ದುಗೊಳಿಸಿ, ಹನುಮಂತಪ್ಪ ಆಯ್ಕೆಯನ್ನು ಮಾನ್ಯ ಮಾಡಿದೆ. ಅವರ ನಿಗದಿತ ಅಧಿಕಾರವಧಿ ಪೂರ್ಣಗೊಳ್ಳುವ ತನಕ ಅವರು ಮಂಡಳಿಯಲ್ಲಿ ಮುಂದುವರೆಯಲಿದ್ದಾರೆ ಎಂದು ತೀರ್ಪು ನೀಡಿದೆ.