ತೈಲ ದರ ಏರಿಕೆ ಬೆನ್ನಲ್ಲೇ ಮತ್ತೊಂದು ಶಾಕ್: ಕೇಂದ್ರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ
ಕೇಂದ್ರದ ವಿರುದ್ಧ ಲಟ್ಟಣಿಗೆ ಪ್ರಯೋಗಕ್ಕೆ ಮುಂದಾದ ಮಹಿಳೆಯರು| ದುಬಾರಿ ದುನಿಯಾದಲ್ಲಿ ಬದುಕೋದು ಹೇಗೆ ಸ್ವಾಮಿ?| ಸಿಲಿಂಡರ್ ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ಅತ್ತೆ- ಸೊಸೆ ಜಗಳ| ದಿನದಿಂದ ದಿನಕ್ಕೆ ಒಂದಾದ ಮೇಲೆ ಒಂದು ಬೆಲೆ ಏರಿಕೆಯಾಗುತ್ತಿರುವುದು ಖಂಡನೀಯ|
ಬೆಂಗಳೂರು(ಫೆ.26): ಗ್ಯಾಸ್ ಸಿಲಿಂಡರ್ ದರ ದುಬಾರಿಯಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ದಿನೇ ದಿನೆ ತೈಲ ದರ ಹಾಗೂ ಸಿಲಿಂಡರ್ ದರ ಹೆಚ್ಚಳವಾಗಿದೆ. ಇದರಿಂದ ಜನಸಾಮಾನ್ಯರು ಬದುಕೋದೆ ಕಷ್ಟವಾಗಿದೆ ಅಂತ ಜನರು ಕೇಂದ್ರ ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.
"
ಇನ್ನು ಸಿಲಿಂಡರ್ ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ಅತ್ತೆ- ಸೊಸೆ ಜಗಳ ಮಾಡಿಕೊಂಡ ಘಟನೆ ವಿಜಯಪುರದಲ್ಲಿ ಇಂದು ನಡೆದಿದೆ. ಏಷ್ಯಾನೆಟ್ ಸುವರ್ಣ ನ್ಯೂಜ್ ಎದುರೇ ಅತ್ತೆ-ಸೊಸೆ ಜಗಳ ಬಹಿರಂಗವಾಗಿದೆ. ಗ್ಯಾಸ್ ದರ ಏರಿಕೆಯಾದ ಹಿನ್ನೆಲೆ ಯಲ್ಲಿ ಅತ್ತೆ-ಸೊಸೆ ನಡುವೆ ತಕರಾರು ತೆಗೆದಿದ್ದಾರೆ. ಕಟ್ಟಿಗೆ ಒಲೆ ಹೊತ್ತಿಸುವಂತೆ ಅತ್ತೆ, ಗ್ಯಾಸ್ ಮೇಲೆ ಅಡುಗೆ ಮಾಡ್ತೀನಿ ಅಂತಾ ಸೊಸೆ ಜಗಳ ಮಾಡಿಕೊಂಡಿದ್ದಾರೆ. ಗ್ಯಾಸ್ಗೆ ದುಬಾರಿ ಹಣ ಕೊಡೋರು ಯಾರು? ಅಂತಾ ಅತ್ತೆ ಸೊಸೆ ನಡುವೆ ತಕರಾರು ಶುರುವಾಗಿವೆ.
"
ಕೇಂದ್ರದ ವಿರುದ್ಧ ಕುಂದಾನಗರಿ ಜನರ ಆಕ್ರೋಶ
"
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಕೇಂದ್ರ ಸರ್ಕಾರ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಪೆಟ್ರೋಲ್, ಡೀಸೆಲ್ ದರ ದಿನೇ ದಿನೆ ಏರಿಕೆಯಾಗುತ್ತಿದೆ. ಅಡುಗೆ ಅನಿಲ ದರ ಒಂದೇ ತಿಂಗಳಲ್ಲಿ ಮೂರು ಬಾರಿ ಏರಿಕೆಯಾಗಿದೆ. ಅಡುಗೆ ಅನಿಲ ದರ 800 ರೂ. ಆಗಿದ್ದು ಸಾವಿರ ಗಡಿ ದಾಟುವ ಆತಂಕವಾಗಿದೆ. ಹೀಗಾಗಿ ಮಧ್ಯಮವರ್ಗದ ಜನ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಜನರು ಆಕ್ರೋಶಗೊಂಡಿದ್ದಾರೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಜನರ ಆಕ್ರೋಶ
ಹುಬ್ಬಳ್ಳಿಯಲ್ಲಿಯೂ ಕೂಡ ತೈಲ ಬೆಲೆ ಏರಿಕೆ ಖಂಡಿಸಿ ಸೌತ್ ಜೋನ್ ಮೋಟರ್ ಟ್ರಾನ್ಸಪೋರ್ಟ್ ವೆಲಫೇರ್ ಸಂಘದಿಂದ ಧರಣಿ ನಡೆದಿದೆ. ನಗರದ ಗಬ್ಬೂರು ಬೈಪಾಸ್ ಟೋಲ್ ಬಳಿ ಧರಣಿ. ತೈಲ ಬೆಲೆ ಇಳಿಸುವಂತೆ ಒತ್ತಾಯಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"
ದುಬಾರಿ ದುನಿಯಾಗೆ ತತ್ತರಿಸಿದ ಚಿತ್ರದುರ್ಗದ ಜನತೆ
ದುನಿಯಾ ದುಬಾರಿ ಹಿನ್ನೆಲೆಯಲ್ಲಿ ಚಿತ್ರದುರ್ಗದ ಜನರೂ ಕೂಡ ತತ್ತರಿಸಿ ಹೋಗಿದ್ದಾರೆ. ದಿನನಿತ್ಯ ಬೆಲೆ ಏರಿಕೆ ಖಂಡಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರು ಜೀವನ ಸಾಗಿಸುವುದು ಬಹಳ ಕಷ್ಟವಾಗುತ್ತಿದೆ. ದಿನದಿಂದ ದಿನಕ್ಕೆ ಒಂದಾದ ಮೇಲೆ ಒಂದು ಬೆಲೆ ಏರಿಕೆಯಾಗುತ್ತಿರುವುದು ಖಂಡನೀಯವಾಗಿದೆ. ಸರ್ಕಾರ ಯಾಕೆ ಕಣ್ಮುಚ್ಚಿ ಕುಳ್ತಿದೆ ಎಂದು ಗೊತ್ತಾಗ್ತಿಲ್ಲ ಎಂದು ಜನರು ತಮ್ಮ ಕಷ್ಟಗಳನ್ನ ಹೇಳಿಕೊಂಡಿದ್ದಾರೆ.