'ಆ ಇಬ್ಬರು ಶಾಸಕರಿಂದ ಕುತಂತ್ರ ನಡೆದಿದೆ : ಹೆಸರು ಬಹಿರಂಗ ಮಾಡಲ್ಲ'
ಇಬ್ಬರು ಶಾಸಕರಿಂದ ಕುತಂತ್ರ ನಡೆದಿದೆ. ಹೆಸರು ಬೇರೆಯವರಿಗೆ ಸಿಗೋ ಕಾರಣ ಸಿಗುವ ಅವಕಾಶವನ್ನು ತಪ್ಪಿಸುವ ಹುನ್ನಾರವನ್ನೂ ಈ ಶಾಸಕರು ನಡೆಸಿದ್ದಾರೆ. ಅವರ ಹೆಸರು ಮಾತ್ರ ಹೇಳಲಸಾಧ್ಯ ಎಂದು ಮೀಸಲಾತಿ ವಿಚಾರವಾಗಿ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಬೆಂಗಳೂರು (ಮಾ.10): ಆಧಿವೇಶನದಲ್ಲಿ ಚರ್ಚೆ ಮಾಡಲು ಅವಕಾಶ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ನಮಗೆ ಶುಭ ಸುದ್ದಿ ಸಿಗುವ ಮುನ್ಸೂಚನೆ ಇದೆ. ನಮಗೆ ಜಯ ಸಿಗುವ ಸಕಾರಾತ್ಮಕ ಲಕ್ಷಣಗಳು ಕಾಣುತ್ತಿದೆ ಎಂದು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಮಾತನಾಡಿದ ಸ್ವಾಮೀಜಿ ನಿನ್ನೆ ಯಡಿಯೂರಪ್ಪ ನಮ್ಮ ಬಸನಗೌಡ ಪಾಟೀಲ್ ಯತ್ನಾಳ್ ಜೊತೆ ಮಾತನಾಡಿದ್ದಾರೆ. ಕುಳಿತುಕೊಂಡು ಮಾತಾಡೋಣ ಎಂದು ಸಿಎಂ ಹೇಳಿದ್ದಾರೆ. ಹೀಗಾಗಿ ನಮ್ಮ ಹೋರಾಟಕ್ಕೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ ಎಂದರು.
ಬೆಳಗ್ಗೆ ಸಿಸಿ ಪಾಟೀಲ್ ಕೂಡ ನಮ್ಮ ಜೊತೆ ಮಾತಾಡಿದರು. ಕೂಡಲ ಸಂಗಮದಲ್ಲಿ ಶಿವರಾತ್ರಿಗೆ ಪೂಜೆ ಪುನಸ್ಕಾರ ನಡೆಯುತ್ತಿದೆ. ಈ ಬಾರಿ ನೀವು ಇಲ್ಲೆ ಇದ್ದೀರಾ. ಸಿಹಿ ಸುದ್ದಿ ಸಿಗುವ ಲಕ್ಷಣಗಳು ಕಾಣಿಸುತ್ತಾ ಇದೆ ಅಂತಾ ಸಿಸಿ ಪಾಟೀಲ್ ಹೇಳಿದ್ದಾರೆ. ಹಾಗಾಗಿ ನಮ್ಮ ದೊಡ್ಡ ಹೋರಾಟಕ್ಕೆ ಜಯ ಸಿಗುವ ನಿರೀಕ್ಷೆ ಇದೆ ಎಂದರು.
ಪಂಚಮಸಾಲಿಗೆ ಮೀಸಲಾತಿ: ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ ಸ್ವಾಮೀಜಿ
ನಮ್ಮ ಸಮಾಜದ ಇಬ್ಬರು ಶಾಸಕರು ಮೀಸಲಾತಿ ತಪ್ಪಿಸುವ ಕುತಂತ್ರ ಮಾಡಿದ್ದಾರೆ. ಪ್ಯಾಲೇಸ್ ಗ್ರೌಂಡ್ ನಲ್ಲಿ ದೊಡ್ಡ ಸಮಾವೇಶ ನಡೆದಾಗಲೇ ಕುತಂತ್ರ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಮೀಸಲಾತಿ ಕೊಟ್ಟರೆ ಬೇರೆಯವರಿಗೆ ಹೆಸರು ಹೋಗುತ್ತದೆ ಎಂದು ಈ ಕುತಂತ್ರ ಮಾಡಿದ್ದಾರೆ. ಈಗ ನಾನು ಅವರ ಹೆಸರನ್ನ ಬಹಿರಂಗ ಪಡಿಸಲ್ಲ. ಶುಭ ಸುದ್ದಿ ಬರುತ್ತಾ ಇದೆ ಇದರಿಂದ ಹೆಸರು ಹೇಳೋಕೆ ಹೋಗಲ್ಲ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಕುತಂತ್ರ ಮಾಡುವುದು ಬಿಟ್ಟು ಸಮಾಜದ ಒಳಿತಿಗಾಗಿ ಶ್ರಮಿಸಿ ಎಂದು ಅವರಿಗೆ ಹೇಳುತ್ತೇನೆ. ಅಧಿವೇಶನದಲ್ಲಿ ಏನಾಗುತ್ತದೆಯೋ ನೋಡಿಕೊಂಡು ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.