ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಬೇಕೆಂದು ನಾನೂ ಒತ್ತಾಯಿಸುತ್ತೇನೆ. ಭಯೋತ್ಪಾದಕರು ಮುಸ್ಲಿಮರಲ್ಲಿ ಮಾತ್ರವಲ್ಲ, ಇತರೆ ಧರ್ಮದಲ್ಲೂ ಇದ್ದಾರೆ ಎಂದು ಸಚಿವ ಜಮೀರ್ ಅಹಮದ್ ಹೇಳಿದರು. 

ಚಿಕ್ಕಬಳ್ಳಾಪುರ :  ಪದೇ ಪದೇ ಭಾರತದ ಸ್ವಾಭಿಮಾನ ಕೆಣಕುತ್ತಿರುವ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಣೆ ಮಾಡುವ ಜೊತೆಗೆ, ಭಾರತೀಯ ಯೋಧರ ಮೇಲಿನ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದು ಸಚಿವ ಜಮೀರ್‌ ಅಹಮದ್‌ ಖಾನ್‌ ಅಭಿಪ್ರಾಯಪಟ್ಟರು. 

Add Asianetnews Kannada as a Preferred SourcegooglePreferred

ಬಾಗೇಪಲ್ಲಿ ಹೊರವಲಯದ ಕೊಡಿಕೊಂಡ ರಸ್ತೆಯಲ್ಲಿ ಷಾದಿ ಮಹಲ್‌ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಬೇಕೆಂದು ನಾನೂ ಒತ್ತಾಯಿಸುತ್ತೇನೆ. ಭಯೋತ್ಪಾದಕರು ಮುಸ್ಲಿಮರಲ್ಲಿ ಮಾತ್ರವಲ್ಲ, ಇತರೆ ಧರ್ಮದಲ್ಲೂ ಇದ್ದಾರೆ ಎಂದರು. ಇಸ್ಲಾಂ ಧರ್ಮವೂ ಶಾಂತಿಯನ್ನು ಬಯಸುತ್ತದೆ. ಸೈನ್ಯದಲ್ಲಿಯೂ ಮುಸ್ಲಿಂ ಯೋಧರಿದ್ದಾರೆ. ಹಾಗಾಗಿ ಭಯೋತ್ಪಾದನೆ ಎಂಬುದು ಇಸ್ಲಾಂಗೆ ಸೀಮಿತವಲ್ಲ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ : ದೇಶದಲ್ಲಿರುವ ಮುಸ್ಲಿಮರು ಮತದಾನ ಮಾಡುವುದೇ ಶೇ.50ರಷ್ಟುಮಾತ್ರ. ಒಂದು ವೇಳೆ ಶೇ.90ರಷ್ಟುಮತದಾನವನ್ನು ಮುಸ್ಲಿಮರು ಮಾಡಿದರೆ ರಾಜ್ಯದಲ್ಲಿ ಮಾತ್ರವಲ್ಲ, ದೇಶದಲ್ಲಿಯೇ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ರಾಹುಲ್‌ಗಾಂಧಿ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಕೃಷಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ ಮಾತನಾಡಿ, ದೇಶದಲ್ಲಿ ಅಲ್ಪಸಂಖ್ಯಾತರು ಭಯದಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ ಎಂದರು.

ನಮ್ಮದು ಜಾತ್ಯತೀತ ದೇಶವಾಗಿದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಅಲ್ಪಸಂಖ್ಯಾತರು ಭಯದ ವಾತಾವರಣದಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ಇದೆ. ಜಾತ್ಯತೀತತೆ ಮತ್ತು ಸಂವಿಧಾನ ಉಳಿಸುವ ಕೆಲಸಕ್ಕೆ ಮುಂದಾಗಬೇಕಿದೆ ಎಂದು ಹೇಳಿದರು.