ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಹಳದಿ ಮೆಟ್ರೋ ಉದ್ಘಾಟನೆಯನ್ನು ನಾಳೆ ಮಾಡಲಿದ್ದಾರೆ. ಆದರೆ ಈ ಕಾರ್ಯಕ್ರಮಕ್ಕೆ ಪ್ರತಿಪಕ್ಷ ನಾಯಕ ಆರ್ ಅಶೋಕ್ಗೆ ಆಹ್ವಾನ ನೀಡಿಲ್ಲ, ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಆಹ್ವಾನ ನೀಡಲಾಗಿದ್ದು ಇದೀಗ ಬಿಜೆಪಿಯಲ್ಲೇ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.
ಬೆಂಗಳೂರು (ಆ.09) ಬೆಂಗಳೂರಿನ ಹಳದಿ ಮೆಟ್ರೋ ಉದ್ಘಾಟನೆ ಹಾಗೂ ವಂದೇ ಭಾರತ್ ರೈಲಿಗೆ ಚಾಲನೆ ಕಾರ್ಯಕ್ರಮಕ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ನಾಳೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಆರ್ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ 19.15 ಕಿಲೋಮೀಟರ್ ಉದ್ದದ ಈ ಹಳದಿ ಮೆಟ್ರೋ ಮಾರ್ಗವನ್ನು ಮೋದಿ ನಾಳೆ (ಆ.10) ಉದ್ಘಾಟನೆ ಮಾಡಲಿದ್ದಾರೆ. ಈ ಉದ್ಘಾಟನಾ ಕಾರ್ಯಕ್ರಮದ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ವಿಶೇಷ ಅಂದರೆ ಸರ್ಕಾರಿ ಕಾರ್ಯಕ್ರಮ ಇದಾಗಿದ್ದು, ಈ ಕಾರ್ಯಕ್ರಮಕ್ಕೆ ಪ್ರತಿಪಕ್ಷ ನಾಯಕ ಆರ್ ಅಶೋಕ್ಗೆ ಆಹ್ವಾನ ನೀಡಿಲ್ಲ. ಇದರ ಬದಲು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಆಹ್ವಾನ ನೀಡಲಾಗಿದೆ. ಇದು ರಾಜ್ಯ ಬಿಜೆಪಿಯಲ್ಲಿ ಕೆಲ ಮುಸುಕಿನ ಗುದ್ದಾಟಕ್ಕೆ ಕಾರಣಾಗುವ ಸಾಧ್ಯತೆ ಇದೆ.
ಬೇಸರಗೊಂಡ ಆರ್ ಅಶೋಕ್
ಬಿಜೆಪಿ ನಾಯಕ, ಪ್ರತಿಪಕ್ಷ ನಾಯಕ ಆರ್ ಆಶೋಕ್ಗೆ ಆಹ್ವಾನ ನೀಡಿಲ್ಲ. ಮೋದಿ ಕಾರ್ಯಕ್ರಮದಲ್ಲಿ ತನಗೆ ಆಹ್ವಾನ ನೀಡಿಲ್ಲ ಎಂದು ಆರ್ ಅಶೋಕ್ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಂಗಳೂರು ಶಾಸಕನ, ಪ್ರತಿಪಕ್ಷ ನಾಯಕಾಗಿದ್ದರೂ ತನಗೆ ಆಹ್ವಾನ ನೀಡಿಲ್ಲ ಎಂದು ಆರ್ ಅಶೋಕ್ ಬೇಸರಗೊಂಡಿದ್ದಾರೆ. ಇದೇ ವೇಳೆ ಬಿಜೆಪಿ ರಾಜ್ಯಧ್ಯಕ್ಷ, ಶಿಕಾರಿಪುರದ ಶಾಸಕನಾಗಿರುವ ಬಿವೈ ವಿಜಯೇಂದ್ರಗೆ ಆಹ್ವಾನ ನೀಡಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.
ಮೋದಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ 10 ಪ್ರಮುಖರು
ಥಾವರ್ಚಂದ್ ಗೆಹ್ಲೋಟ್, ರಾಜ್ಯಪಾಲರು
ಮನೋಹರ್ ಲಾಲ್, ಕೇಂದ್ರ ಸಚಿವರು
ಅಶ್ವಿನಿ ವೈಷ್ಣವ್, ಕೇಂದ್ರ ಸಚಿವರು
ಶೋಭಾ ಕರಂದ್ಲಾಜೆ, ಕೇಂದ್ರ ಸಚಿವರು
ತೇಜಸ್ವಿ ಸೂರ್ಯ, ಕೇಂದ್ರ ಸಚಿವರು
ಸಿದ್ದರಾಮಯ್ಯ, ಮುಖ್ಯಮಂತ್ರಿ
ಡಿಕೆ ಶಿವಕುಮಾರ್, ಉಪ ಮುಖ್ಯಮಂತ್ರಿ
ಹೆಚ್ಡಿ ಕುಮಾರಸ್ವಾಮಿ, ಕೇಂದ್ರ ಸಚಿವರು
ವಿ ಸೋಮಣ್ಣ, ಕೇಂದ್ರ ಸಚಿವರು
ಬಿವೈ ವಿಜಯೇಂದ್ರ, ಶಾಸಕರು
ಬೆಂಗಳೂರಿನ ಕೇಂದ್ರ ಭಾಗವಗಿಂದ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಈ ಮೆಟ್ರೋ ಬೆಂಗಳೂರಿನ ಸಾರಿಗೆ ಸಂಪರ್ಕ, ಟ್ರಾಫಿಕ್ ಸಮಸ್ಯೆಗೂ ಪರಿಹಾರ ನೀಡಲಿದೆ. ಹಳದಿ ಮಾರ್ಗವು ಹಸಿರು ಮಾರ್ಗ, ಗುಲಾಬಿ, ನೀಲಿ ಮಾರ್ಗಕ್ಕೆ ಸಂಪರ್ಕ ಕಲ್ಪಿಸಲಿದೆ.ಜೂನ್ 14, 2016ರಲ್ಲಿ ಹಳದಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ಮಾಡಿದ್ದರು. ಇದೀಗ ಉದ್ಘಾಟನೆ ಮಾಡುತ್ತಿದ್ದಾರೆ. ನವೆಂಬರ್ 2017ರಲ್ಲಿ ಹಳದಿ ಮೆಟ್ರೋ ಮಾರ್ಗದ ಸಿವಿಲ್ ಕೆಲಸಗಳು ಆರಂಭಗೊಂಡಿತ್ತು. ಇದೀಗ ಹಳದಿ ಮೆಟ್ರೋ ಮಾರ್ಗದಲ್ಲಿ 19.15 ಕಿಲೋ ಮೀಟರ್ ಪ್ರಯಾಣದ ಅವಧಿ ಕೇವಲ 35 ರಿಂದ 40 ನಿಮಿಷ ಮಾತ್ರ. ಇದರಿಂದ ಈ ಭಾಗದ ಜನರಿಗೆ ಪ್ರಮುಖವಾಗಿ ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಸಿಗಲಿದೆ.
ಆರ್ ವಿ ನಿಲ್ದಾಣದಲ್ಲಿ ಗ್ರೀನ್ ಲೈನ್ ಗೆ ಇಂಟರ್ ಚೇಂಜ್ ಹಾಗೂ ಜಯದೇವ ಆಸ್ಪತ್ರೆ ಬಳಿ ಪಿಂಕ್ ಲೈನ್ ಗೆ ಇಂಟರ್ ಚೇಂಜ್ ಇರಲಿದೆ. ಪ್ರತಿ ದಿನ 25 ರಿಂದ 30 ಸಾವಿರ ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸುವ ನಿರೀಕ್ಷೆ ಇದೆ ಎಂದು ಮೆಟ್ರೋ ಹೇಳಿದೆ.
ಹಳದಿ ಮಾರ್ಗದಿಂದ ಅನುಕೂಲಗಳು.
ಬೆಂಗಳೂರಿನ ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿಯಿಂದ ಬೆಂಗಳೂರಿನ ಕೇಂದ್ರ ಭಾಗಕ್ಕೆ ಸಂಪರ್ಕ
- ಮೆಟ್ರೋ ಬಳಸೋದ್ರಿಂದ ಟ್ರಾಫಿಕ್ ಸಮಸ್ಯೆ ಕಡಿಮೆ ಸಾಧ್ಯತೆ
- HSR ಲೇಔಟ್, BTM ಲೇಔಟ್, ಸಿಂಗಸಂದ್ರ, ಬೊಮ್ಮನಹಳ್ಳಿ,
- ಜಯನಗರ, ತಿಲಕ್ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಗೆ ಅನುಕೂಲ
- ಪ್ರತಿಷ್ಠಿತ ಜಯದೇವ ಆಸ್ಪತ್ರೆ, ಇನ್ಫೋಸಿಸ್ಗೆ ತೆರಳುವ ಸಾವಿರಾರು ಜನರಿಗೆ ಅನುಕೂಲ
- ಬೆಂಗಳೂರಿನಿಂದ ಹೊಸೂರುಭಾಗಕ್ಕೆ ತೆರಳುವ ಪ್ರಯಾಣಿಕರಿಗೂ ಅನುಕೂಲ
