ಗ್ರಾಹಕರ ಕಣ್ಣಲ್ಲಿ ನೀರು ಬರೋದು ಗ್ಯಾರಂಟಿ: 100ರ ಸನಿಹದಲ್ಲಿ ಈರುಳ್ಳಿ ದರ..!
ಮಳೆ ಕೊರತೆ ಹಾಗೂ ಅತಿವೃಷ್ಟಿ ಕಾರಣ ಈರುಳ್ಳಿ ಬೆಳೆಯುವ ಪ್ರದೇಶದಲ್ಲಿ ಬೆಳೆ ಕುಂಠಿತವಾಗಿದೆ. ಇದರ ಪರಿಣಾಮ ಮಾರುಕಟ್ಟೆಗೆ ಈರುಳ್ಳಿ ಸರಬರಾಜು ಭಾರಿ ಇಳಿಕೆಯಾಗಿದೆ. ಜೊತೆಗೆ ನವರಾತ್ರಿ ಬಳಿಕ ಬೇಡಿಕೆ ಹೆಚ್ಚಾಗಿರುವುದು ಏಕಾಏಕಿ ಬೆಲೆ ಏರಿಕೆಗೆ ಕಾರಣವಾಗಿದೆ. ಡಿಸೆಂಬರ್ವರೆಗೂ ಬೆಲೆ ಏರಿಕೆಯಲ್ಲೇ ಇರುತ್ತದೆ ವಾರದಲ್ಲಿ ಕೇಜಿಗೆ 100 ರು. ತಲುಪಲಿದೆ.

ಬೆಂಗಳೂರು(ಅ.29): ಟೊಮೆಟೋ ಬಳಿಕ ಈರುಳ್ಳಿ ದರ ಏರುಮುಖದಲ್ಲೇ ಸಾಗಿದ್ದು, ಬೆಂಗಳೂರು, ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 1 ಕೆಜಿ ಈರುಳ್ಳಿ ಬೆಲೆ 70 ರು ತಲುಪಿದೆ. ಬೆಲೆ ಏರಿಕೆ ತಡೆಗೆ ಕೇಂದ್ರ ಸರ್ಕಾರ ತನ್ನ ದಾಸ್ತಾನಿನಲ್ಲಿರುವ ಈರುಳ್ಳಿಯನ್ನು ಪ್ರತಿ ಕೆಜಿಗೆ 25 ರು.ನಂತೆ ಮಾರಾಟ ಮಾಡಲು ಆರಂಭಿಸಿದ್ದರೂ ದರ ಇಳಿಕೆಯಾಗುವ ಬದಲು ಏರುಮುಖದಲ್ಲೇ ಸಾಗುತ್ತಿದೆ.
ಮಳೆ ಕೊರತೆ ಹಾಗೂ ಅತಿವೃಷ್ಟಿ ಕಾರಣ ಈರುಳ್ಳಿ ಬೆಳೆಯುವ ಪ್ರದೇಶದಲ್ಲಿ ಬೆಳೆ ಕುಂಠಿತವಾಗಿದೆ. ಇದರ ಪರಿಣಾಮ ಮಾರುಕಟ್ಟೆಗೆ ಈರುಳ್ಳಿ ಸರಬರಾಜು ಭಾರಿ ಇಳಿಕೆಯಾಗಿದೆ. ಜೊತೆಗೆ ನವರಾತ್ರಿ ಬಳಿಕ ಬೇಡಿಕೆ ಹೆಚ್ಚಾಗಿರುವುದು ಏಕಾಏಕಿ ಬೆಲೆ ಏರಿಕೆಗೆ ಕಾರಣವಾಗಿದೆ. ಡಿಸೆಂಬರ್ವರೆಗೂ ಬೆಲೆ ಏರಿಕೆಯಲ್ಲೇ ಇರುತ್ತದೆ ವಾರದಲ್ಲಿ ಕೇಜಿಗೆ 100 ರು. ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನಸಾಮಾನ್ಯರಿಗೆ ಗುಡ್ ನ್ಯೂಸ್: ಕೇಂದ್ರ ಸರ್ಕಾರದಿಂದ 25 ರೂ.ಗೆ ಈರುಳ್ಳಿ ಮಾರಾಟ
ಆಗಸ್ಟ್ನಿಂದ ಈವರೆಗೂ 1.7 ಲಕ್ಷ ಟನ್ ಈರುಳ್ಳಿಯನ್ನು ಕೇಂದ್ರ ಸರ್ಕಾರ ತನ್ನ ದಾಸ್ತಾನಿನಿಂದ ಸರಕು ಮತ್ತು ಚಿಲ್ಲರೆ ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಬೆಲೆ ನಿಯಂತ್ರಣಕ್ಕೆ ಪ್ರಯತ್ನಿಸಿದೆ.
ಮುಂದಿನ ದಿನಗಳಲ್ಲಿ ಈರುಳ್ಳಿ ದರ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ. ಹೊರ ರಾಜ್ಯದಿಂದ ರಾಜ್ಯಕ್ಕೆ ಪೂರೈಕೆಯಾಗ್ತಿದ್ದ ಈರುಳ್ಳಿಯಲ್ಲಿ ವ್ಯತ್ಯಯವಾಗಿದ್ದೇ ದರ ಏರಿಕೆಗೆ ಕಾರಣವಾಗಿದೆ. ಮಹಾರಾಷ್ಟ್ರದಿಂದ ಆಮದು ಆಗ್ತಿದ್ದ ಈರುಳ್ಳಿ ಪ್ರಮಾಣದಲ್ಲಿ ಕುಂಠಿತವಾಗಿದೆ. ಹೊರ ರಾಜ್ಯದಿಂದ ಆಮದು ಮಾಡಿಕೊಳ್ಳುವ ಈರುಳ್ಳಿಗೆ ಭಾರೀ ಬೆಲೆ ಏರಿಕೆಯಾಗಿದೆ. ಮುಂಗಾರು ಕೊರತೆಯಿಂದ ರಾಜ್ಯದಲ್ಲಿ ಈರುಳ್ಳಿ ಇಳುವರಿ ಕಡಿಮೆಯಾಗಿದೆ. ಹೀಗಾಗಿ ಈರುಳ್ಳಿ ಬೆಲೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ.