Asianet Suvarna News Asianet Suvarna News

ಬೆಳಗಾವಿ ಅಧಿವೇಶನದಲ್ಲಿ ಕಡೆಗೂ ಉತ್ತರ ಕರ್ನಾಟಕ ಚರ್ಚೆ ಆರಂಭ

ಚಳಿಗಾಲದ ಅಧಿವೇಶನವು ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗುವ ಒಂದೇ ಒಂದು ದಿನ ಮುಂಚಿತವಾಗಿ ಉತ್ತರ ಕರ್ನಾಟಕದ ಬಗೆಗಿನ ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ. ಬುಧವಾರ ಸಂಜೆ ಬಿಜೆಪಿ ಸದಸ್ಯ ಎ.ಎಸ್‌. ಪಾಟೀಲ್‌ ನಡಹಳ್ಳಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ಪ್ರಸ್ತಾಪಿಸುವ ಮೂಲಕ ಚರ್ಚೆ ಆರಂಭವಾಗಿದೆ.

North Karnataka discussion finally started in Belgaum session rav
Author
First Published Dec 29, 2022, 1:33 AM IST

ವಿಧಾನಸಭೆ (ಡಿ.29) : ಚಳಿಗಾಲದ ಅಧಿವೇಶನವು ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗುವ ಒಂದೇ ಒಂದು ದಿನ ಮುಂಚಿತವಾಗಿ ಉತ್ತರ ಕರ್ನಾಟಕದ ಬಗೆಗಿನ ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ. ಬುಧವಾರ ಸಂಜೆ ಬಿಜೆಪಿ ಸದಸ್ಯ ಎ.ಎಸ್‌. ಪಾಟೀಲ್‌ ನಡಹಳ್ಳಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ಪ್ರಸ್ತಾಪಿಸುವ ಮೂಲಕ ಚರ್ಚೆ ಆರಂಭವಾಗಿದೆ.

ಡಿ.19 ರಂದು ಬೆಳಗಾವಿ(Belagavi)ಯ ಸುವರ್ಣಸೌಧ(Suvarna soudha)ದಲ್ಲಿ ಶುರುವಾದ ಹತ್ತು ದಿನಗಳ ಉತ್ತರಾಧಿವೇಶನದಲ್ಲಿ ಉತ್ತರ ಭಾಗದ ಸಮಸ್ಯೆಗಳ ಚರ್ಚೆಗೆ ಆದ್ಯತೆ ನೀಡುವ ನಿರೀಕ್ಷೆಯಿತ್ತು. ಆದರೆ, ಅಧಿವೇಶನದ ಕೊನೆಯ ದಿನದವರೆಗೂ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡುವ ಬಗ್ಗೆ ನಮೂದಾಗಿರಲಿಲ್ಲ. ಆದರೆ ಅಧಿವೇಶನವನ್ನು 1 ದಿನ ಮೊದಲೇ ಮುಂದೂಡುವ ಘೋಷಣೆ ಹೊರಬೀಳುತ್ತಿದ್ದಂತೆಯೇ ಸದಸ್ಯರ ಆಗ್ರಹದ ಮೇರೆಗೆ ಬುಧವಾರ ಸಂಜೆಯಿಂದ ಕೊನೆಯ ದಿನವಾದ ಗುರುವಾರ ರಾತ್ರಿವರೆಗೆ ಉತ್ತರ ಕರ್ನಾಟಕ ಕುರಿತ ಚರ್ಚೆಗೆ ಸ್ಪೀಕರ್‌ ಸಮ್ಮತಿಸಿದ್ದಾರೆ.

ಇಂದು ಮಹತ್ವದ ಸಂಪುಟ ಸಭೆ: ಪಂಚಮಸಾಲಿ ಮೀಸಲು ಫೈನಲ್‌?...

ಸದನ ಇಂದೇ ಮೊಟಕಿಗೆ ಖರ್ಗೆ ಆಕ್ಷೇಪ:

19ರಿಂದ ಡಿ.30ರವರೆಗೆ (ಶುಕ್ರವಾರದವರೆಗೆ) ನಡೆಯಬೇಕಿದ್ದ ಅಧಿವೇಶನವನ್ನು ಕಾಂಗ್ರೆಸ್‌ ಹಾಗೂ ಬಿಜೆಪಿ ರಾಜಕೀಯ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಒಂದು ದಿನ ಮೊದಲೇ (ಗುರುವಾರಕ್ಕೆ) ಅನಿರ್ದಿಷ್ಟಾವಧಿಗೆ ಮುಂದೂಡಲಾಗುತ್ತಿದೆ. ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಕಟಿಸಿದ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಪೂರ್ವ ನಿರ್ಧಾರದಂತೆ ಸದನ ಡಿ.30 ರಂದು ಶುಕ್ರವಾರದವರೆಗೆ ನಡೆಯಬೇಕಿತ್ತು. ಆದರೆ ಹಿರಿಯ ಸದಸ್ಯರೆಲ್ಲರ ನಿರ್ಧಾರದ ಪ್ರಕಾರ ಗುರುವಾರಕ್ಕೆ ಮೊಟಕುಗೊಳಿಸಲಾಗುತ್ತಿದ್ದು, ಗುರುವಾರ ಸಂಜೆ 5 ಅಥವಾ 6 ಗಂಟೆವರೆಗೆ ಕಲಾಪ ನಡೆಸಲಾಗುವುದು’ ಎಂದರು. ‘ಗುರುವಾರ ಪ್ರಶ್ನೋತ್ತರ ಅವಧಿ ಬಳಿಕ ಪೂರಕ ಅಂದಾಜುಗಳ ವಿಧೇಯಕಕ್ಕೆ ಅಂಗೀಕಾರ ಪಡೆಯಲಾಗುವುದು. ಬಳಿಕ ಶೂನ್ಯ ವೇಳೆಗೆ ಅವಕಾಶ ನೀಡದೆ ವಿವಿಧ ಚರ್ಚೆಗಳಿಗೆ ಅವಕಾಶ ನೀಡಲಾಗುವುದು’ ಎಂದು ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ ಸದಸ್ಯ ಪ್ರಿಯಾಂಕ್‌ ಖರ್ಗೆ,‘ಕಳೆದ ಅಧಿವೇಶನದಲ್ಲೂ ಕಲ್ಯಾಣ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿಲ್ಲ. ಇದೀಗ ಒಂದು ದಿನ ಮೊದಲೇ ಮೊಟಕುಗೊಳಿಸಿದರೆ ಈ ಭಾಗದ ಜನರ ಸಮಸ್ಯೆಗಳನ್ನು ಎಲ್ಲಿ ಪ್ರಸ್ತಾಪಿಸಬೇಕು?’ ಎಂದು ಪ್ರಶ್ನಿಸಿದರು.

ಈ ವೇಳೆ ಕಾಗೇರಿ ಅವರು, ಇಂದು ಸಂಜೆ ಎ.ಎಸ್‌. ಪಾಟೀಲ್‌ ನಡಹಳ್ಳಿ ಅವರ ಮೂಲಕ ಉತ್ತರ ಕರ್ನಾಟಕ ಚರ್ಚೆ ಆರಂಭಿಸಲಾಗುವುದು. ಗುರುವಾರವೂ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಸ್ಪಷ್ಟನೆ ನೀಡಿದರು.

 

ಸರ್ಕಾರದ ವಿರುದ್ಧ ಖುದ್ದು ಶೆಟ್ಟರ್‌ ಆಕ್ರೋಶ..!

ರಾತ್ರಿವರೆಗೆ ಕಲಾಪ ನಡೆಸಿ- ಸಿದ್ದು:

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ‘ಅವಧಿಗಿಂತ ಒಂದು ದಿನ ಮೊದಲೇ ಕಲಾಪ ಮುಗಿಸುತ್ತಿದ್ದೀರಿ. ಶುಕ್ರವಾರ ಮಧ್ಯಾಹ್ನದವರೆಗೆ ಕಲಾಪ ನಡೆಯಬೇಕಿತ್ತು. ಇದೀಗ ಗುರುವಾರವೇ ಮೊಟಕುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಉತ್ತರ ಕರ್ನಾಟಕ ಚರ್ಚೆಗೆ ಅವಕಾಶ ನೀಡಬೇಕು. ಜತೆಗೆ ಗುರುವಾರ ರಾತ್ರಿ 8.30-9 ಗಂಟೆವರೆಗೆ ಚರ್ಚೆ ನಡೆಯಬೇಕು. ಮಧ್ಯಾಹ್ನದ ಊಟದ ವಿರಾಮಕ್ಕೂ ಅವಕಾಶ ನೀಡದೆ ಅಗತ್ಯವಿರುವವರು ಊಟ ಮಾಡಿಕೊಂಡು ಬರಲು ಸೂಚಿಸಬೇಕು. ಇಲ್ಲದಿದ್ದರೆ ಈ ಭಾಗದ ಜನರಿಗೆ ಅನ್ಯಾಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ ಸ್ಪೀಕರ್‌ ಕಾಗೇರಿ ಅವರು ಬುಧವಾರ ಸಂಜೆಯೇ ಎ.ಎಸ್‌. ನಡಹಳ್ಳಿ ಅವರಿಗೆ ಅವಕಾಶ ನೀಡುವ ಮೂಲಕ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡುವ ಹಿಂದಿನ ದಿನ ಉತ್ತರ ಕರ್ನಾಟಕ ಚರ್ಚೆಗೆ ಅವಕಾಶ ಕಲ್ಪಿಸಿದರು.

Follow Us:
Download App:
  • android
  • ios