ಕೇಂದ್ರ ಸರ್ಕಾರ ನೀಡುವ 1 ಕೋಟಿ ರು. ಮೊತ್ತದ ‘ಸಾಂಸ್ಕೃತಿಕ ಸಾಮರಸ್ಯಕ್ಕೆ ಠ್ಯಾಗೋರ್‌ ಪ್ರಶಸ್ತಿ’ಗೆ  ಆಹ್ವಾನ ಅರ್ಹರ ನಾಮನಿರ್ದೇಶನ ಕಳುಹಿಸಲು ರಾಜ್ಯಪಾಲರು ನೇಮಿಸಿರುವ ಸಮಿತಿಯು ಅರ್ಹ ವ್ಯಕ್ತಿ, ಸಂಘ ಸಂಸ್ಥೆಗಳಿಂದ ಪ್ರಸ್ತಾವನೆಗೆ ಆಹ್ವಾನ

ಬೆಂಗಳೂರು (ಆ.18): ಕೇಂದ್ರ ಸರ್ಕಾರ ನೀಡುವ 1 ಕೋಟಿ ರು. ಮೊತ್ತದ ‘ಸಾಂಸ್ಕೃತಿಕ ಸಾಮರಸ್ಯಕ್ಕೆ ಠ್ಯಾಗೋರ್‌ ಪ್ರಶಸ್ತಿ’ಗೆ ರಾಜ್ಯದಿಂದ ಅರ್ಹರ ನಾಮನಿರ್ದೇಶನ ಕಳುಹಿಸಲು ರಾಜ್ಯಪಾಲರು ನೇಮಿಸಿರುವ ಸಮಿತಿಯು ಅರ್ಹ ವ್ಯಕ್ತಿ, ಸಂಘ ಸಂಸ್ಥೆಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ.

Add Asianetnews Kannada as a Preferred SourcegooglePreferred

ರಾಜ್ಯಪಾಲರು ಬೆಂಗಳೂರು ವಿವಿ ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ನೇತೃತ್ವದಲ್ಲಿ ಮೂವರು ಕುಲಪತಿಗಳ ಸಮಿತಿಯನ್ನು ರಚಿಸಿದ್ದು, ಈ ಸಮಿತಿಯು ಠ್ಯಾಗೋರ್‌ ಪ್ರಶಸ್ತಿಗೆ ರಾಜ್ಯದ ಅರ್ಹ ವ್ಯಕ್ತಿ, ಸಂಘ ಸಂಸ್ಥೆಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಿ ತನ್ನ ಶಿಫಾರಸನ್ನು ಕಳುಹಿಸಲು ಸೂಚಿಸಿದೆ. ಅದರಂತೆ ಈ ಸಮಿತಿಯು ಪ್ರಸ್ತಾವನೆಯನ್ನು ಆಹ್ವಾನಿಸಿದ್ದು, ಪ್ರಶಸ್ತಿ ಆಯ್ಕೆಗೆ ಇರುವ ಕಾರ್ಯವಿಧಾನಗಳನ್ನು ಬೆಂ.ವಿವಿಯ ಅಧಿಕೃತ ವೆಬ್‌ಸೈಟ್‌ನಲ್ಲಿ (www.bangloreuniverosty.ac.in) ಪ್ರಕಟಿಸಿರುವುದಾಗಿ ತಿಳಿಸಿದೆ.

ಈ ವರ್ಷ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ವಿತರಣೆ ವಿಳಂಬ..!

ಕಳೆದ ವರ್ಷಗಳ ನೋಬೆಲ್‌ ಪ್ರಶಸ್ತಿ, ಭಾರತ ರತ್ನ, ಜ್ಞಾನಪೀಠ ಪ್ರಶಸ್ತಿ, ಗಾಂಧಿ ಶಾಂತಿ, ನೆಹರು ಪಾರಿತೋಷಕ, ಇಂದಿರಾ ಗಾಂಧಿ ಬಹುಮಾನ ಪ್ರಶಸ್ತಿ ಪುರಸ್ಕೃತರು, ಕೇಂದ್ರದ ಮಂತ್ರಿಗಳು, ಸಂಸತ್‌ ಸದಸ್ಯರು, ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್‌ ಸಭಾಧ್ಯಕ್ಷರು, ಸಭಾಪತಿಗಳು, ಸೆಕ್ರೆಟರಿ ಜನರಲ್‌, ವಿಶ್ವಸಂಸ್ಥೆ, ಕಾಮನ್‌ವೆಲ್ತ್‌, ಪಾರ್ಲಿಮೆಂಟ್‌, ಯೂನಿಯನ್‌, ಇಂಟರ್‌ ಪಾರ್ಲಿಮೆಂಟರಿ ಮೂನಿಯರ್‌ ಹಾಗೂ ಇತರೆ ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳು, ರಾಯಭಾರಿ ಕಚೇರಿ ಮುಖ್ಯಸ್ಥರು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳು ಸೇರಿದಂತೆ ಇತರೆ ಗಣ್ಯರು ಪ್ರಸ್ತಾವನೆಗೆ ಅರ್ಹರಾಗಿರುತ್ತಾರೆ ಎಂದು ಸಮಿತಿ ತಿಳಿಸಿದೆ.

ಠ್ಯಾಗೋರ್‌ ಪ್ರಶಸ್ತಿಯು ಕವಿ ರವೀಂದ್ರನಾಥ್‌ ಠ್ಯಾಗೋರ್‌ ಅವರ 150ನೇ ಜನ್ಮದಿನೋತ್ಸವದ ಅಂಗವಾಗಿ 2012ರಲ್ಲಿ ಕೇಂದ್ರ ಸರ್ಕಾರದಿಂದ ಸ್ಥಾಪಿತವಾಗಿದೆ. ಠ್ಯಾಗೋರ್‌ ಅವರ ಸಾಧನೆ, ಧ್ಯೇಯೋದ್ದೇಶ ಮತ್ತು ಪರಿಕಲ್ಪನೆಗಳ ಮೌಲ್ಯಗಳನ್ನು ಉತ್ತೇಜಿಸಲು ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು 1 ಕೋಟಿ ರು. ನಗದು, ಬಿರುದು ಪತ್ರ, ಭಿನ್ನವತ್ತಳೆ ಮತ್ತು ಸಾಂಪ್ರದಾಯಿಕ ಕರಕುಶಲ ಕೈಮಗ್ಗ ವಸ್ತುಗಳನ್ನು ಒಳಗೊಂಡಿರುತ್ತದೆ.