ಕರ್ನಾಟಕದಲ್ಲಿ ಕಲ್ಲಿದ್ದಲು ಸಮಸ್ಯೆ ಇಲ್ಲ. ಹೀಗಾಗಿ ವಿದ್ಯುತ್‌ ಕಡಿತಗೊಳಿಸುವ ಪ್ರಮೇಯವೇ ಇಲ್ಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಪಪಡಿಸಿದ್ದಾರೆ.

 ಬೆಂಗಳೂರು (ಅ.13): ಕರ್ನಾಟಕದಲ್ಲಿ (Karnataka) ಕಲ್ಲಿದ್ದಲು (Coal) ಸಮಸ್ಯೆ ಇಲ್ಲ. ಹೀಗಾಗಿ ವಿದ್ಯುತ್‌ (Power) ಕಡಿತಗೊಳಿಸುವ ಪ್ರಮೇಯವೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸ್ಪಷ್ಪಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಮಂಗಳವಾರ ರಾತ್ರಿ ವಿವಿಧ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

ನಾಳೆಯೊಳಗೆ ರಾಜ್ಯಕ್ಕೆ 2 ರೇಕ್‌ ಕಲ್ಲಿದ್ದಲು : ಸಮಸ್ಯೆ ನಿರ್ಮಾಣವಾಗುವುದಿಲ್ಲ

ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ಮುಂದೆಯೂ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು. ಒಡಿಶಾ (odisha) ಸೇರಿದಂತೆ ಹಲವು ಕಡೆ ಗಣಿ ಉತ್ಖನನ ಪ್ರದೇಶದಲ್ಲಿ ಹೆಚ್ಚು ಮಳೆಯಾದ ಪರಿಣಾಮ ಕೆಲ ತೊಂದರೆಯಾಗಿದೆ. ಹಾಗಿದ್ದರೂ ನಮ್ಮಲ್ಲಿ ಕಲ್ಲಿದ್ದಲು ತೊಂದರೆಯಾಗದಂತೆ ನೋಡಿಕೊಂಡಿದ್ದೇವೆ. ಎರಡು ದಿನದಿಂದ ಕಲ್ಲಿದ್ದಲು ಉತ್ಪಾದನೆ ಹೆಚ್ಚಾಗಿದೆ. ವಿದ್ಯುತ್‌ ಸಮಸ್ಯೆ ಬಗ್ಗೆ ಜನ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

Coal Crisis| ಕಲ್ಲಿದ್ದಲು ಬರ, ರಾಜ್ಯದಲ್ಲಿ ಪವರ್‌ ಕಟ್‌ ಆರಂಭ!

ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವರ ಭೇಟಿ ಬಳಿಕ ಎರಡು ರೇಕ್‌ಗಳು ಹೆಚ್ಚುವರಿಯಾಗಿ ರಾಜ್ಯಕ್ಕೆ ಬಂದಿವೆ. ರಾಜ್ಯದಲ್ಲಿ 98,863 ಮೆಟ್ರಿಕ್‌ ಟನ್‌ ಕಲ್ಲಿದ್ದಲು ಸಂಗ್ರಹ ಇದೆ. ಇನ್ನು ಮೂರು ರೇಕ್‌ ಬಂದರೆ ಯಾವುದೇ ಸಮಸ್ಯೆ ಇರುವುದಿಲ್ಲ. ತೆಲಂಗಾಣದ ಸಿಂಗನೇರಿ ಗಣಿಯಿಂದ 12 ರೇಕ್‌ ಪಡೆಯುವ ಬಗ್ಗೆ ಮಾತುಕತೆ ನಡೆಸಲಾಗಿದೆ. ಇದಕ್ಕೆ ಬೇಕಾದ ಹಣವನ್ನು ಇನ್ನೆರೆಡು ದಿನದಲ್ಲಿ ಪಾವತಿ ಮಾಡಲಾಗುವುದು. ಈ ಸಂಬಂಧ ತೆಲಂಗಾಣ (Telangana) ಮುಖ್ಯಮಂತ್ರಿಗಳ ಬಳಿ ಮಾತನಾಡಲಾಗುವುದು. ತೆಲಂಗಾಣ ರಾಜ್ಯಕ್ಕೆ ಸಮೀಪದಲ್ಲಿರುವ ಕಾರಣ ಸಾರಿಗೆ ವೆಚ್ಚ ಕೂಡ ಕಡಿಮೆ ಇರಲಿದೆ. ಹೀಗಾಗಿ ತೆಲಂಗಾಣದಿಂದ 12 ರೇಕ್‌ ತರಿಸಿಕೊಳ್ಳಲು ಮೊದಲ ಆದ್ಯತೆ ನೀಡಲಾಗುವುದು ಎಂದರು.

ಹೆಸ್ಕಾಂ (Hescom) ಅನ್ನು ಕೂಡ ಆರ್ಥಿಕವಾಗಿ ಸಬಲೀಕರಣ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಪದೇ-ಪದೇ ಬಾಕಿ ಉಳಿಸಿಕೊಳ್ಳುವುದು ಸರಿಯಲ್ಲ ಎಂದು ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ. ಕಳೆದ ವಾರ ಕೂಡ ವಿದ್ಯುತ್ತನ್ನು ಇತರೆ ರಾಜ್ಯಗಳಿಗೆ ಮಾರಾಟ ಮಾಡಿದ್ದೇವೆ. ಕಾಂಗ್ರೆಸ್‌ ನಾಯಕರು ಆಧಾರ ರಹಿತ ಆರೋಪ ಮಾಡುವ ಮೂಲಕ ಜನರಲ್ಲಿ ಆತಂಕ ಉಂಟು ಮಾಡುತ್ತಿದ್ದಾರೆ ಎಂದರು.

ಇನ್ನು ಇಂಧನ ಸಚಿವ ಸುನಿಲ್ ಕುಮಾರ್ ಅವರು ಕಲ್ಲಿದ್ದಲು ಸಮಸ್ಯೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.