ಚಿಕ್ಕಬಳ್ಳಾಪುರದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ, ನಿಡುಮಾಮಿಡಿ ಮಠದ ಶ್ರೀ ಚೆನ್ನಮಲ್ಲ ವೀರಭದ್ರ ದೇಶಿಕೇಂದ್ರ ಸ್ವಾಮೀಜಿ ಅವರು, ಕಾಂಗ್ರೆಸ್ ಪಕ್ಷದ ಹಾಗೂ ನಾಡಿನ ಹಿತದೃಷ್ಟಿಯಿಂದ ಸಿದ್ದರಾಮಯ್ಯನವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಸೂಕ್ತ ಎಂದಿದ್ದಾರೆ.

ಚಿಕ್ಕಬಳ್ಳಾಪುರ (ನ.4): ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಪೂರ್ಣಾವಧಿ ಅಧಿಕಾರದಲ್ಲಿ ಮುಂದುವರಿಯುವುದು ಉತ್ತಮ ಎಂದು ಸಿಎಂ ಸಿದ್ದರಾಮಯ್ಯ ಪರ ನಿಡುಮಾಮಿಡಿ ಮಠದ ಶ್ರೀ ಚೆನ್ನಮಲ್ಲ ವೀರಭದ್ರ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

Add Asianetnews Kannada as a Preferred SourcegooglePreferred

ತಾಲೂಕಿನ ಕಳವಾರದ ವೀರಭ್ರಹ್ಮೇಂದ್ರಸ್ವಾಮಿ ಉಗಮಸ್ಥಳ ಪಾಪಾಗ್ನಿ ಮಠದಲ್ಲಿ ಕರ್ನಾಟಕ ಪುಲಿಕೇಶಿ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ನೂತನ ವಧುವರರಿಗೆ ಆರ್ಶಿವಾದ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಹಿತದೃಷ್ಟಿಯಿಂದ ಹಾಗೂ ಎಲ್ಲ ರೀತಿಯಿಂದಲೂ ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರೆಯುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್‌ ಹಿತದೃಷ್ಟಿ:

ಮುಖ್ಯಮಂತ್ರಿಯಾಗಿ ಯಾರೇ ಬಂದರೂ ಅವರವರ ಸಾಮರ್ಥ್ಯದ ಮೇಲೆ ಕೆಲಸ ಮಾಡ್ತಾರೆ. ಆದರೆ ಸಿದ್ದರಾಮಯ್ಯರಿಗೆ ಸರಿಸಾಟಿಯಾಗಲು ಸಾಧ್ಯವಿಲ್ಲ. ನಾಡಿನ ಹಿತಕ್ಕಾಗಿ ಹಿಂದಿನಿಂದಲೂ ಸಿದ್ದರಾಮಯ್ಯ ಒಳ್ಳೆಯ ಕೆಲಸಗಳನ್ನ ಮಾಡಿಕೊಂಡು ಬಂದಿದ್ದಾರೆ. ಈಗಲೂ ಮಾಡ್ತಿದ್ದಾರೆ. ನಾಡಿನ ಹಿತದೃಷ್ಟಿಯಿಂದ, ಕಾಂಗ್ರೆಸ್ ಪಕ್ಷದ ಭವಿಷ್ಯಕ್ಕಾಗಿ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಸೂಕ್ತ ಎಂದು ತಿಳಿಸಿದರು.

ತಾಳಿ ವಿತರಿಸಿದ ಸಂಸದ ಸುಧಾಕರ್‌ ದಂಪತಿ

ಇದೇ ವೇಳೆ ಸಂಸದ ಡಾ.ಕೆ.ಸುಧಾಕರ್ ಮತ್ತು ಡಾ.ಪ್ರೀತಿ ಸುಧಾಕರ್ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 13 ಜೋಡಿ ನೂತನ ವಧುವರರಿಗೆ ತಾಳಿ ನೀಡಿ ಆರ್ಶಿವಾದಿಸಿದರು. ಜತೆಗೆ ಚಿತ್ರನಟರು ಜನಪ್ರತಿನಿಧಿಗಳು ಭಾಗವಹಿಸಿ ನೂತನ ದಂಪತಿಗಳಿಗೆ ಅಕ್ಷತೆ ಹಾಕಿ ಆಶೀರ್ವದಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ . ಚಲನಚಿತ್ರ ನಟ ಅಭಿಮನ್ಯು ಕಾಶೀನಾಥ್ ಸಹ ನೂತನ ಸಹಬಾಳ್ವೆಗೆ ಮುಂದಾದ ನವಜೋಡಿಗಳಿಗೆ ಮಾಂಗ್ಯಲ್ಯ ಕಟ್ಟಿಸಿ ಆಶೀರ್ವದಿಸಿದರು.