ಉಮ್ಮಚಗಿ ಗ್ರಾಮ ಪಂಚಾಯತಿಯ ಬಾಳೆಗದ್ದೆಯಲ್ಲಿ ಅಂಗನವಾಡಿ ಮಕ್ಕಳು ಪ್ಲಾಸ್ಟಿಕ್ ಹೊದಿಕೆಯ ಚಪ್ಪರದಲ್ಲಿ ಕಲಿಯುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ಮಂಜೂರಾದ ಕಟ್ಟಡ ಇನ್ನೂ ಪೂರ್ಣಗೊಂಡಿಲ್ಲ, ಮಳೆಗಾಲದಲ್ಲೂ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಿದೆ.

ಯಲ್ಲಾಪುರ (ಜೂ.5): ಉಮ್ಮಚಗಿ ಗ್ರಾಪಂ ವ್ಯಾಪ್ತಿಯ ಬಾಳೆಗದ್ದೆಯಲ್ಲಿ ಅಂಗನವಾಡಿಯ ಮಕ್ಕಳು ಪ್ಲಾಸ್ಟಿಕ್ ಹೊದಿಕೆಯ ಚಪ್ಪರದಲ್ಲಿಯೇ ಕಲಿಕೆ ಮುಂದುವರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಮೂರು ವರ್ಷದ ಹಿಂದೆಯೇ ಮಂಜೂರಿಯಾದರೂ ಇನ್ನು ಕಟ್ಟಡ ಕಾಮಗಾರಿ ಪೂರ್ತಿಯಾಗದೇ ಮಕ್ಕಳ ಕಲಿಕೆಗೆ ತೊಂದರೆಯಾಗಿದೆ.

Add Asianetnews Kannada as a Preferred SourcegooglePreferred

ಕಟ್ಟಡ ಕಾಮಗಾರಿ ಕಳೆದ ವರ್ಷ ಮಳೆಗಾಲದಲ್ಲಿ ಪ್ರಾರಂಭವಾಗಿದ್ದರೂ ಇದುವರೆಗೂ ಮುಕ್ತಾಯವಾಗಿಲ್ಲ. ಈ ವರ್ಷ ಮಳೆಗಾಲ ಪ್ರಾರಂಭವಾಗುವ ಹೊತ್ತಿಗೆ ಮಕ್ಕಳು ಹೊಸ ಕಟ್ಟಡದಲ್ಲಿ ಓದುತ್ತಾರೆ ಎಂಬ ಹೆತ್ತವರ ಕನಸು ಕನಸಾಗಿಯೇ ಉಳಿದಿದೆ. ಮಳೆಗಾಲದ ಹೊತ್ತಿಗೆ ಒಂದು ಕೋಣೆಯನ್ನಾದರೂ ನಿರ್ಮಿಸಿ ಕೊಡುತ್ತೇನೆಂದು ಗುತ್ತಿಗೆದಾರರು ಹೇಳುತ್ತಲೇ ಬಂದರಾದರೂ ಕೆಲಸ ಮುಗಿದಿಲ್ಲ ಎಂದು ಸ್ಥಳೀಯ ಗ.ರಾ.ಭಟ್ಟ ಬಾಳೆಗದ್ದೆ ತಿಳಿಸಿದ್ದಾರೆ.

ಈಗ ಮಳೆಗಾಲ ಪ್ರಾರಂಭವಾಗಿದೆ. ಮಕ್ಕಳ ಕಲಿಕೆಗೆ ಸರಿಯಾದ ಜಾಗವಿಲ್ಲ. ಎರಡು ವರ್ಷಗಳ ಹಿಂದೆ ಪಂಚಾಯತದವರು ತಗಡು ಕೊಟ್ಟು ಶ್ರಮದಾನದ ಮೂಲಕ ಕಟ್ಟಿದ ಚಪ್ಪರ ಈಗ ಮುರಿದು ಬೀಳುವ ಹಂತದಲ್ಲಿದೆ. ಸಂಬಂಧಿಸಿದ ಅಧಿಕಾರಿಗಳು ಕಟ್ಟಡದ ವಿಷಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.

ಚಪ್ಪರದಲ್ಲೇ ಮಳೆಗಾಲ ಕಳೆಯುತ್ತಿರುವ ಬಾಳೆಗದ್ದೆ ಅಂಗನವಾಡಿ ಮಕ್ಕಳು