ಶಾಸಕ ತನ್ವೀರ್ ಸೇಠ್‌ಗೆ ಇರಿತ: ಆಸ್ಪತ್ರೆಗೆ ದಾಖಲು| ಮದುವೆಯಲ್ಲಿದ್ದಾಗ ಇರಿದ ದುಷ್ಕರ್ಮಿ

ಮೈಸೂರು[ನ18]: ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ತನ್ವೀರ್ ಸೇಠ್ ಮೇಲೆ ಯುವಕನೊಬ್ಬ ಮಟನ್ ಕತ್ತರಿಸುವ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಭಾನುವಾರ ರಾತ್ರಿ ಮೈಸೂರಿನಲ್ಲಿ ನಡೆದಿದೆ. ತೀವ್ರ ಗಾಯಗೊಂಡಿರುವ ಶಾಸಕರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತನ್ವೀರ್ ಸೇಠ್ ಅವರು ಭಾನುವಾರ ರಾತ್ರಿ ಸಂಬಂಧಿಕರೊಬ್ಬರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೈಸೂರು ನಗರದ ಬನ್ನಿಮಂಟಪ ಸಮೀಪದ ಪಾರ್ಟಿ ಹಾಲ್‌ಗೆ ತೆರಳಿದ್ದರು. ಸುಮಾರು ರಾತ್ರಿ ೧೧.೩೦ರ ವೇಳೆಗೆ ಫರಾನ್ ಪಾಶಾ (25) ಎಂಬ ವ್ಯಕ್ತಿ ಏಕಾಏಕಿ ತನ್ವೀರ್ ಸೇಠ್ ಅವರ ಕತ್ತಿನ ಭಾಗಕ್ಕೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.

ಡಿಕೆಶಿಗೆ ಜೈಕಾರ ಹಾಕುತ್ತಿದ್ದವಗೆ ತನ್ವೀರ್ ಸೇಠ್ ಕಪಾಳ ಮೋಕ್ಷ

ತಕ್ಷಣವೇ ಬೆಂಬಲಿಗರು ಶಾಸಕರನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡುತ್ತಿರುವ ವೈದ್ಯರು ಸೇಠ್ ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. ಹಲ್ಲೆ ನಡೆಸಿದ ಆರೋಪಿಯನ್ನು ತಕ್ಷಣವೇ ಸ್ಥಳದಲ್ಲೇ ಹಿಡಿದಿರುವ ಶಾಸಕರ ಬೆಂಬಲಿಗರು ಎನ್.ಆರ್.ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ. ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.

ಮೇಲ್ನೋಟಕ್ಕೆ ರಾಜಕೀಯ ದ್ವೇಷಕ್ಕೆ ಈ ಕೃತ್ಯ ಎಸಗಿರುವ ಶಂಕೆ ಇದೆ. ಕೊಲಂಬಿಯಾ ಏಷ್ಯಾ ಆಸ್ಪತ್ರೆ ಮತ್ತು ಪೊಲೀಸ್ ಠಾಣೆ ಎದುರು ಅಪಾರ ಜನ ಸೇರಿದ್ದು ಪರಿಸ್ಥಿತಿ ಬಿಗುವಿನಿಂದ ಕೂಡಿದೆ.

ಟಿಪ್ಪು ಜಯಂತಿ ರದ್ದು ಮಾಡಿದ್ದು ಬೇಸರವಿಲ್ಲ : ತನ್ವೀರ್ ಸೇಠ್