ಎಪಿಎಂಸಿ ಕಾಯ್ದೆ ವಿರುದ್ಧ ರೈತರು ಬೀದಿಗಿಳಿದು ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಇದರ ನಡುವೆ ಸಹಕಾರ ಸಚಿವರು ಎಪಿಎಂಸಿ ಕಾಯ್ದೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರು, (ಸೆ.23): ಎಪಿಎಂಸಿ ಕಾಯ್ದೆ ರೈತರಿಗೆ ಉಪಕಾರಿಯಾಗಿದೆ. ಕರ್ನಾಟಕದಲ್ಲಿ 162 ಎಪಿಎಂಸಿಗಳಿದ್ದು, ಇವುಗಳೂ ಸೇರಿದಂತೆ ರೈತರು ರಾಜ್ಯದ ಯಾವುದೇ ಭಾಗದಲ್ಲಿ ಬೇಕಾದರೂ ಸಹ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಆದರೆ, ವಿರೋಧ ಪಕ್ಷದವರಿಂದ ಜನರ ದಾರಿ ತಪ್ಪಿಸುವ ಕೆಲಸವಾಗುತ್ತಿದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

Add Asianetnews Kannada as a Preferred SourcegooglePreferred

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಈ ಕಾಯ್ದೆಯಿಂದ ಎಪಿಎಂಸಿಗೆ ಯಾವುದೇ ಧಕ್ಕೆ ಇಲ್ಲ. ಮೊದಲು 1 ರೂ. ಸೆಸ್ ನಿಗದಿ ಮಾಡಿದ್ದೆವು. ಕೊನೆಗೂ ದರವೂ ಹೆಚ್ಚಾಯಿತು ಎಂಬ ಮನವಿಗಳು ಬಂದ ಹಿನ್ನೆಲೆಯಲ್ಲಿ ನಾವು ಸಂಪುಟದಲ್ಲಿ ಚರ್ಚೆ ನಡೆಸಿ 35 ಪೈಸೆಗೆ ನಿಗದಿ ಮಾಡಿದೆವು. ಇಷ್ಟಾದರೂ ಎಪಿಎಂಸಿಗೆ ವರ್ಷಕ್ಕೆ 120 ಕೋಟಿ ರೂ. ಆದಾಯ ಬರುತ್ತದೆ. ಇದರಿಂದ ವ್ಯವಸ್ಥೆ ಮೇಲೆ ಯಾವುದೇ ಪರಿಣಾಮ ಬೀರದು. ಅಲ್ಲದೆ, ಎಪಿಎಂಸಿಯ ಅಧಿಕಾರ ಮೊಟುಕುಗೊಳ್ಳುವುದಿಲ್ಲ, ಇದನ್ನು ಮುಚ್ಚುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸುಗ್ರಿವಾಜ್ಞೆ ಹಿಂಪಡೆಯಿರಿ, ಇಲ್ಲ ಉಗ್ರ ಹೋರಾಟ ಎದುರಿಸಿ: ಸರ್ಕಾರಕ್ಕೆ ರೈತರ ವಾರ್ನಿಂಗ್

ಕೇಂದ್ರ ಸರ್ಕಾರ ಜಾರಿಗೆ ತಂದ ಕಾಯ್ದೆಯನ್ನು ಸಚಿವನಾಗಿ ನಾನು ಸ್ವಾಗತಿಸುತ್ತೇನೆ. ಇದು ರೈತರಿಗೆ ಅನುಕೂಲವಾಗುವ ಕಾನೂನೇ ವಿನಹ ಯಾವುದೇ ತೊಂದರೆಯಾಗದು . ಈ ಕಾಯ್ದೆ ಬರುವುದಕ್ಕೆ ಮುಂಚೆ 50ಕ್ಕೂ ಹೆಚ್ಚು ಮಲ್ಟಿ ನ್ಯಾಷನಲ್ ಕಂಪನಿಗಳಿಗೆ ಮಾರಾಟ ಮಾಡುವ ಅವಕಾಶವನ್ನು ಈ ಹಿಂದಿನ ಸರ್ಕಾರವೇ ಅನುಮತಿ ಕೊಟ್ಟಿತ್ತು. ಆದರೆ, ಅದರಿಂದಲೂ ರೈತರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಈಗಿನ ನೂತನ ಕಾಯ್ದೆಯಿಂದ ಪೈಪೋಟಿ ಏರ್ಪಟ್ಟು ರೈತರಿಗೇ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ಸ್ಥಳೀಯ ಎಪಿಎಂಸಿಗೆ ಅಧಿಕಾರ ಇಲ್ಲದಿದ್ದರೂ ರಾಜ್ಯ ಎಪಿಎಂಸಿ ಬೋರ್ಡ್ ಗೆ ಸಂಪೂರ್ಣ ಅಧಿಕಾರ ಇದೆ. ಹೀಗಾಗಿ ಮಲ್ಟಿ ನ್ಯಾಷನಲ್ ಕಂಪನಿಗಳು ಅಕ್ರಮ ಎಸಗುತ್ತಿದ್ದರೆ, ಹಣವನ್ನು ರೈತರಿಗೆ ಸರಿಯಾಗಿ ನೀಡದಿದ್ದರೆ ದೂರು ಕೊಟ್ಟರೆ ಅಂಥವರ ಪರವಾನಗಿಯನ್ನೇ ರದ್ದುಪಡಿಸುತ್ತೇವೆ ಎಂದು ತಿಳಿಸಿದರು.

Scroll to load tweet…

ರೈತರ ಪ್ರತಿಭಟನೆ ಬಗ್ಗೆ ಸರ್ಕಾರ ಸಹ ಗಮನಹರಿಸುತ್ತಿದೆ. ಸಮಸ್ಯೆಗಳ ಪಟ್ಟಿ ಮಾಡಿಕೊಂಡು ಕೊಡುವಂತೆ ಮುಖ್ಯಮಂತ್ರಿಗಳು ಸಹ ತಿಳಿಸಿದ್ದಾರೆ. ಹೀಗಾಗಿ ನಾನೂ ಸಹ ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇನೆ. ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.