ದೂರು ಬಂದರೆ ಅಧಿಕಾರಿಗಳೇ ಹೊಣೆ: ಸಚಿವ ಸೋಮಶೇಖರ್‌|ಆರ್‌.ಆರ್‌.ನಗರ ವಲಯದ ಹೊಣೆ ಬೆನ್ನಲ್ಲೇ ಅಧಿಕಾರಿಗಳ ಜತೆ ಸಭೆ| ಸೋಂಕು ನಿಯಂತ್ರಣಕ್ಕಾಗಿ ಆರ್‌.ಆರ್‌. ನಗರದ ಪಾಲಿಕೆ ಸದಸ್ಯರ ಜೊತೆಗೆ ಸಭೆ ನಡೆಸಲಾಗುವುದು| ಎಂಜಿನಿಯರ್‌ಗಳನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಗಳಿಗೆ ನಿಯೋಜನೆ ಮಾಡದಂತೆ ಹಾಗೂ ಕ್ಷೇತ್ರದಲ್ಲಿ ಅಧಿಕಾರಿಗಳು ಲಭ್ಯವಿರುವಂತೆ ಕ್ರಮ|

ಬೆಂಗಳೂರು(ಜು.11): ಸರ್ಕಾರ ನಗರದ ಎಂಟು ವಲಯದ ಕೋವಿಡ್‌ ನಿಯಂತ್ರಣದ ಜವಾಬ್ದಾರಿಯನ್ನು ಎಂಟು ಜನಪ್ರತಿನಿಧಿಗಳಿಗೆ ವಹಿಸಿದ ಬೆನ್ನಲ್ಲೆ ಸಹಕಾರ ಸಚಿವ ಎಸ್‌.ಟಿ ಸೋಮಶೇಖರ್‌, ಮುಂದಿನ ಮೂರು ತಿಂಗಳುಗಳ ಕಾಲ ಯಶವಂತಪುರ ಕ್ಷೇತ್ರ ಹಾಗೂ ಆರ್‌.ಆರ್‌.ನಗರ ವಲಯದಲ್ಲಿ ವಾಸ್ತವ್ಯ ಹೂಡಿ, ಸೋಂಕು ಹರಡದಂತೆ ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಕೋವಿಡ್‌ ನಿಯಂತ್ರಣ ಕುರಿತು ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಸೋಮವಾರದ ನಂತರ ಆರ್‌.ಆರ್‌.ನಗರದ ಉಪ ವಿಭಾಗಗಳಿಗೆ ಪಾಲಿಕೆ ಸದಸ್ಯರು ಸೇರಿದಂತೆ 10 ಜನರ ತಂಡ ರಚಿಸಲಾಗುವುದು. 6 ಉಪ ವಿಭಾಗಗಳನ್ನಾಗಿ ವಿಂಗಡಿಸಿದ ನಿಯಂತ್ರಣಕ್ಕೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

'ಜನರ ರಕ್ಷಣೆಗೆ ಮೋದಿ ಘೋಷಿಸಿರುವ ಯೋಜನೆಗಳ ಸದ್ಬಳಕೆಗೆ ಕರೆ'

ವೈಯಕ್ತಿಕ ಸಭೆ:

ಸೋಂಕು ನಿಯಂತ್ರಣಕ್ಕಾಗಿ ಆರ್‌.ಆರ್‌. ನಗರದ ಪಾಲಿಕೆ ಸದಸ್ಯರ ಜೊತೆಗೆ ಸಭೆ ನಡೆಸಲಾಗುವುದು. ಎಂಜಿನಿಯರ್‌ಗಳನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಗಳಿಗೆ ನಿಯೋಜನೆ ಮಾಡದಂತೆ ಹಾಗೂ ಕ್ಷೇತ್ರದಲ್ಲಿ ಅಧಿಕಾರಿಗಳು ಲಭ್ಯವಿರುವಂತೆ ಕ್ರಮ ವಹಿಸಲಾಗುವುದು. ಪಾಸಿಟಿವ್‌ ಬಂದ ಕೂಡಲೇ ಸೋಂಕಿತರನ್ನು ಕಾಯಿಸದೇ ಆಸ್ಪತ್ರೆಗಳಿಗೆ ಕರೆದೊಯ್ಯಬೇಕು. ವಾರ್ಡ್‌ ಮಟ್ಟದಲ್ಲಿ ವ್ಯವಸ್ಥೆ ವಿರುದ್ಧ ದೂರುಗಳು ಬಂದರೆ ಆಯಾ ವಾರ್ಡ್‌ನ ಅಧಿಕಾರಿಗಳನ್ನೆ ಹೊಣೆ ಮಾಡಲಾಗುವುದು. ಪಾಸಿಟಿವ್‌ ಪ್ರದೇಶಗಳಲ್ಲಿ ಸ್ಯಾನಿಟೈಸ್‌ ಮಾಡಲು ಕ್ರಮ ಕೈಗೊಳ್ಳಲಾಗುವುದು. ಮಾಸ್ಕ್‌ ಧರಿಸದವರಿಗೆ ಕಡ್ಡಾಯವಾಗಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ಡಿಸಿಪಿ ರಮೇಶ್‌ ಕುಮಾರ್‌, ಬಿಜೆಪಿ ಮುಖಂಡರಾದ ಮುನಿರತ್ನ, ವಲಯದ ಜೆಸಿ ಜಗದೀಶ್‌, ಕೋವಿಡ್‌ ಉಸ್ತುವಾರಿ ಐಎಎಸ್‌ ಅಧಿಕಾರಿ ಡಾ.ವಿಶಾಲ್‌, ಬೆಂಗಳೂರು ದಕ್ಷಿಣ ಎಸಿ ಶಿವಣ್ಣ, ಪಾಲಿಕೆ ಸದಸ್ಯರು, ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.