Grama Vastavya: ಹಾಸ್ಟೆಲ್ ಮಕ್ಕಳಿಗೆ ಉಪಾಹಾರ ಬಡಿಸಿದ ಸಚಿವ ಅಶೋಕ್
‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಅಂಗವಾಗಿ ಕಂದಾಯ ಸಚಿವ ಆರ್.ಅಶೋಕ್ ಅವರು ಶನಿವಾರ ರಾತ್ರಿ ಬಾಗಲಕೋಟೆ ತಾಲೂಕು ಕಲಾದಗಿಯ ಖಜ್ಜಿಡೋಣಿ ವಸತಿ ನಿಲಯದಲ್ಲಿ ಗ್ರಾಮ ವಾಸ್ತವ್ಯ ಮಾಡಿದರು.
![Minister R Ashok Served Breakfast to the Hostel Childrens gvd Minister R Ashok Served Breakfast to the Hostel Childrens gvd](https://static-ai.asianetnews.com/images/01gt8jbd3s6s4swr0qgyz3krsp/ashok_363x203xt.jpg)
ಕಲಾದಗಿ (ಫೆ.27): ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಅಂಗವಾಗಿ ಕಂದಾಯ ಸಚಿವ ಆರ್.ಅಶೋಕ್ ಅವರು ಶನಿವಾರ ರಾತ್ರಿ ಬಾಗಲಕೋಟೆ ತಾಲೂಕು ಕಲಾದಗಿಯ ಖಜ್ಜಿಡೋಣಿ ವಸತಿ ನಿಲಯದಲ್ಲಿ ಗ್ರಾಮ ವಾಸ್ತವ್ಯ ಮಾಡಿದರು. ಭಾನುವಾರ ಬೆಳಗ್ಗೆ ಗ್ರಾಮದ ದಲಿತ ಕಲ್ಲೊಳೆಪ್ಪ ಮಾದರ ಅವರ ಮನೆಯಲ್ಲಿ ಬೆಳಗಿನ ಉಪಾಹಾರ ಸೇವಿಸಿದರು. ಭಾನುವಾರ ಬೆಳಗ್ಗೆ ಖಜ್ಜಿಡೋಣಿಯ ಮೆಟ್ರಿಕ್ಪೂರ್ವ ವಸತಿನಿಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದ ಸಚಿವರು, ಮಕ್ಕಳಿಗೆ ತಾವೇ ಖುದ್ದಾಗಿ ಬೆಳಗಿನ ಉಪಾಹಾರ ಬಡಿಸಿದರು. ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಸಚಿವರಿಗೆ ಸಾಥ್ ನೀಡಿದರು.
ಬಳಿಕ, ನೇರವಾಗಿ ಕಲ್ಲೊಳೆಪ್ಪ ಮಾದರ ಅವರ ಮನೆಗೆ ಆಗಮಿಸಿ, ಅಡುಗೆ ಮನೆಯ ಪಕ್ಕದ ಚಿಕ್ಕದಾದ ಕೋಣೆಯಲ್ಲಿ ಕೂತು ಮನೆಯವರೊಂದಿಗೆ ಸಮಾಲೋಚನೆ ನಡೆಸಿದರು. ಅವಲಕ್ಕಿ ಮೊಸರು, ಉಪ್ಪಿಟ್ಟು ಮೊಸರು, ಅರ್ಧ ರೊಟ್ಟಿ, ಹೆಸರುಕಾಳು ಪಲ್ಲೆ, ಕಾರ ಚುರುಮರಿ ಸವಿದರು. ಉಪಾಹಾರ ಸವಿದ ನಂತರ ತಾಟನ್ನು ತಾವೇ ಅವರ ಅಡುಗೆ ಮನೆ ಒಳಗೆ ತೆಗೆದುಕೊಂಡು ಹೋಗಿ ಅಲ್ಲಿಟ್ಟು ಕೈತೊಳೆದುಕೊಂಡರು. ಕಲ್ಲೊಳೆಪ್ಪ ಕುಟುಂಬದವರ ಮಕ್ಕಳ ವಿದ್ಯಾಭ್ಯಾಸಕ್ಕೆ .2 ಲಕ್ಷ ನೀಡುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಮಾದರ ಕುಟುಂಬದವರು ಸಚಿವರನ್ನು ಸನ್ಮಾನಿಸಿ, ಮುತ್ತಿನ ಹಾರ ಹಾಕಿದರು. ತಮಗೆ ಹಾಕಿದ ಹಾರವನ್ನು ಸಚಿವರು ಮನೆಯ ಪುಟ್ಟ ಮಕ್ಕಳ ಕೊರಳಿಗೆ ಹಾಕಿ ಸಂತಸಪಟ್ಟರು.
Grama Vastavya: ಬಿಜೆಪಿಗೆ ಅಧಿಕಾರ ಸೂರ್ಯ ಚಂದ್ರರಷ್ಟೇ ಸತ್ಯ: ಸಚಿವ ಅಶೋಕ್
ಸಚಿವ ಅಶೋಕ ಅವರೊಂದಿಗೆ ಬೀಳಗಿ ಕ್ಷೇತ್ರದ ಶಾಸಕ ಹಾಗೂ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಬಿಜೆಪಿ ಮುಖಂಡ ಕೆ.ಎಲ್.ಬಿಲಕೇರಿ, ಬಾಗಲಕೋಟೆ ಉಪವಿಭಾಗಾಧಿಕಾರಿ ಶ್ವೇತಾ ಬೀಡ್ಕರ್ ಕೂಡ ಉಪಾಹಾರ ಸೇವಿಸಿದರು. ಬಳಿಕ ಗ್ರಾಮದಿಂದ ತೆರಳಿದರು. ಬಳಿಕ, ಮಾಧ್ಯಮದರ ಜೊತೆ ಮಾತನಾಡಿ, ಇಲಾಖೆಯಲ್ಲಿ ಮಾಡಿದ ಸೇವೆಗಳು ನೂರಕ್ಕೆ ನೂರರಷ್ಟುತೃಪ್ತಿ ತಂದಿವೆ. ಇಲಾಖೆಯಲ್ಲಿ ಹಲವಾರು ಬದಲಾವಣೆ ತಂದಿದ್ದೇನೆ ಎಂದರು.
ಗ್ರಾಮ ವಾಸ್ತವ್ಯದ ನೆನಪು ಸದಾ ಅಮರ: ಗ್ರಾಮ ವಾಸ್ತವ್ಯ ಕಾರ್ಯಕ್ರಮ ಒಂದು ಅಪರೂಪದ ಕ್ಷಣ. ಜನರ ಜೊತೆ ಬೆರೆವುದು, ಸರಕಾರದ ಸವಲತ್ತುಗಳನ್ನು ಕೊಡಿಸುವುದು, ಪ್ರೀತಿ, ವಿಶ್ವಾಸ ಕೇವಲ ಉದ್ಘಾಟನೆ ಮಾಡಿ ಹೋದರೆ ಸಿಗುವುದಿಲ್ಲ. ಇಲ್ಲಿಯೇ ಅವರ ಜೊತೆ ಇದ್ದಾಗ ಜನರ ಪ್ರೀತಿ, ವಿಶ್ವಾಸ ನಂಬಿಕೆ ವೃದ್ಧಿಯಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು. ಭಾನುವಾರ ಬೆಳಗಿನ ಉಪಾಹಾರ ಬಳಿಕ ಮಾಧ್ಯಮದರ ಜೊತೆ ಮಾತನಾಡಿದ ಅವರು, ಪ್ರತಿಯೊಬ್ಬ ರಾಜಕಾರಣಿ ಈ ರೀತಿಯ ಕಾರ್ಯಕ್ರಮ ಮಾಡಬೇಕು. ಜನಕ್ಕೆ ಹತ್ತಿರ ಆಗಬೇಕು. ನಮ್ಮನ್ನು ಆಯ್ಕೆ ಮಾಡುವ ಜನಗಳ ಜೊತೆ ಕಷ್ಟಸುಖದಲ್ಲಿ ನಾವೂ ಇದ್ದೀವಿ ಎನ್ನುವ ಭಾವನೆಯನ್ನು ಬೆಳೆಸಬೇಕು.
ಅದೇ ಗ್ರಾಮ ವಾಸ್ತವ್ಯ. ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಸವಿನೆನಪು ಸದಾ ನನ್ನ ಜೀವನದಲ್ಲಿ ಅಚ್ಚಳಿಯದೇ ಉಳಿಯುತ್ತದೆ. ಏಕೆಂದರೆ ನಾನು ಯಾರು ಅಂತ ಅವರಿಗೆ ಗೊತ್ತಿಲ್ಲ, ಅವರು ಯಾರು ಅಂತ ನನಗೆ ಗೊತ್ತಿಲ್ಲ, ನಾನು ಬರುತ್ತೇನೆ ಅಂತ ಅವರಿಗೆ ಗೊತ್ತಿಲ್ಲ. ಆದರೆ, ನಾನು ಅವರ ಮನೆಗೆ ಬಂದಿದ್ದೇನಿ ಅವರ ಪ್ರೀತಿಯ ಅಡುಗೆ ಸವಿದಿದ್ದೇನಿ. ಇವೆಲ್ಲಾ ಜೀವನದಲ್ಲಿ ಮರೆಯಲಾರದ ಘಟನೆಗಳು. ಅವರಿಗೂ ಇಬ್ಬರು ಮಂತ್ರಿಗಳು, ಒಬ್ಬ ಎಂಎಲ್ಸಿ ಬರುತ್ತಾರೆ ಈ ತರ ಬಂದು ಉಪಾಹಾರ ಸೇವಿಸುತ್ತಾರೆ ಅನ್ನೋದು ಅವರಿಗೂ ಗೊತ್ತಿರಲಿಲ್ಲ. ಇವೆಲ್ಲ ಕೂಡಾ ಗ್ರಾಮ ವಾಸ್ತವ್ಯ ಫಲದಿಂದ ಸಾಧ್ಯವಾಗಿದೆ. ಜನಪ್ರತಿನಿಧಿಗಳು ಹಾಗೂ ಜನಗಳ ನಡುವೆ ಸೇತುವೆ ನಿಮಾಣ ಮಾಡುವ ಮೂಲಕ ಗ್ರಾಮ ವಾಸ್ತವ್ಯ ಯಶಸ್ವಿಯಾಗಿ ಮಾಡಿದ್ದೇವೆ.
Grama Vastavya: ಶೀಘ್ರದಲ್ಲಿಯೇ ಮಹಿಳೆಯರ ಖಾತೆಗೆ 1000 ರೂ ಜಮೆ: ಸಚಿವ ಅಶೋಕ್
ಇಲಾಖೆಯಲ್ಲಿ ಮಾಡಿದ ಸೇವೆಗಳು ನೂರಕ್ಕೆ ನೂರರಷ್ಟುತೃಪ್ತಿ ತಂದಿದೆ. ಇಲಾಖೆಯಲ್ಲಿ ಹಲವಾರ ಬದಲಾವಣೆ ತಂದಿದ್ದೇನೆ. 79ಎ/ಬಿ ತೆಗೆದು ರೈತರಿಗೆ ಅವಕಾಶ, ವಿದ್ಯಾವಂತರಿಗೆ ಅವಕಾಶ, 72 ತಾಸಿನಲ್ಲಿ ಪಿಂಚಣಿ ಅವರ ಮನೆ ಬಾಗಿಲಿಗೆ, 60 ಲಕ್ಷ ರೈತರ ಕುಟುಂಬಕ್ಕೆ ಕಂದಾಯ ದಾಖಲೆಗಳನ್ನು ಕೊಟ್ಟಿದೇವೆ. ಚಿಕ್ಕಮಂಗಳೂರು, ಹಾಸನ, ಕೊಡಗು ಜಿಲ್ಲೆಯಲ್ಲಿನ ಕಾಫಿ ಬೆಳೆಗಾರರಿಗೆ ಸುಮಾರ 40 ಸಾವಿರ ಎಕರೆ ಜಮೀನನ್ನು ಮತ್ತೊಂದು ವರ್ಷ ಲೀಜ್ ಮೇಲೆ ಕೊಟ್ಟಿದ್ದೇವೆ. ಬಡವರು ಸರ್ಕಾರದ ಜಮೀನಲ್ಲಿ ಮನೆ ಕಟ್ಟಿಕೊಂಡವರಿಗೆ 94ಸಿ ಅಡಿಯಲ್ಲಿ ಅವರಿಗೆಲ್ಲರಿಗೂ ಹಕ್ಕುಪತ್ರ ಕೊಡುವಂಥ ವ್ಯವಸ್ಥೆ ಮಾಡಿದ್ದೇನೆ ಎಂದರು.