ಮೇಲುಕೋಟೆಯ ಅಂದಾನಿಗೌಡನಕೊಪ್ಪಲು ಗ್ರಾಮದಲ್ಲಿ, ಶಿಕ್ಷಕ ಅಶ್ವಥ್ ಅವರು ಪ್ರಭಾವಿಗಳ ಒತ್ತುವರಿಯಿಂದ ಲಕ್ಷಾಂತರ ರೂ. ಮೌಲ್ಯದ ಶಾಲಾ ಜಮೀನನ್ನು ಉಳಿಸಿದರು.  ಹಲವು ವರ್ಷಗಳ ಹೋರಾಟದ ನಂತರ, ಜಮೀನು ಶಿಕ್ಷಣ ಇಲಾಖೆಗೆ ಸೇರಿದ್ದು, ಗ್ರಾಮಸ್ಥರು ಶಿಕ್ಷಕರನ್ನು ಸನ್ಮಾನಿಸಿ, ಆಸ್ತಿ ರಕ್ಷಣೆಗೆ ನಾಮಫಲಕ ಅಳವಡಿಕೆ.

ಮೇಲುಕೋಟೆ (ನ.13): ಲಕ್ಷಾಂತರ ರು. ಮೌಲ್ಯದ ಮರಗಳಿರುವ ಜಮೀನನ್ನು ಸರ್ಕಾರಿ ಶಾಲೆಗೆ ಹೋರಾಟ ಮಾಡಿ ಕೊಡಿಸಿದ್ದ ಶಿಕ್ಷಕ ಅಶ್ವಥ್ ರನ್ನು ಅಂದಾನಿಗೌಡನಕೊಪ್ಪಲು ಗ್ರಾಮಸ್ಥರು ಅಭಿನಂದಿಸಿ ಜಮೀನಿನ ಮುಂಭಾಗ ನಾಮಫಲಕ ಅನಾವರಣ ಮಾಡಿ ಸೇವೆಯನ್ನು ಶ್ಲಾಘಿಸಿದರು.

Add Asianetnews Kannada as a Preferred SourcegooglePreferred

ಸರ್ಕಾರಿ ಶಾಲೆ ಜಮೀನು ಕಬಳಿಸಲು ಯತ್ನ:

2002ರಲ್ಲಿ ಹೋಬಳಿಯ ಅಂದಾನಿಗೌಡನ ಕೊಪ್ಪಲಿನ ಶಾಲೆಗೆ ಸೇರಿದ್ದ ಬೆಲೆಬಾಳುವ ಮರಗಳನ್ನೊಳಗೊಂಡ 31ಗುಂಟೆ ಜಮೀನನ್ನು ಕನಗೋನಹಳ್ಳಿಯ ಕೆಲಮಂದಿ ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಲಪಟಾಯಿಸಲು ಪ್ರಯತ್ನಿಸಿದ್ದರು.

ಈ ವೇಳೆ ದಾಖಲೆ ಸಂಗ್ರಹಿಸಿ ಜಮೀನಿನ ರಕ್ಷಣೆಗೆ ಇಳಿದ ಶಿಕ್ಷಕ ಅಶ್ವಥ್‌ಗೆ ಹಲವು ಸಂಕಷ್ಟ ಎದರಿಸಿದರು. ಶಿಕ್ಷಕರ ಬೆಂಬಲಕ್ಕೆ ಯಾವ ಶಿಕ್ಷಕರೂ ಬರಲಿಲ್ಲ. ಮೇಲುಕೋಟೆ ಪೊಲೀಸ್ ಠಾಣೆಗೆ ಸುಳ್ಳುದೂರು ನೀಡಿ ಪ್ರಭಾವ ಬಳಸಿ ಎಫ್.ಐ.ಆರ್ ದಾಖಲಿಸುವ ಪ್ರಯತ್ನವೂ ನಡೆಯಿತು ಎಂದರು.

ಸರ್ಕಾರಿ ಶಾಲೆ ಜಮೀನು ಉಳಿಸಲು ಶಿಕ್ಷಕ ಹೋರಾಟ:

ಈ ವೇಳೆ ಮೇಲುಕೋಟೆ ಶಿಕ್ಷಕ ಸಂತಾನರಾಮನ್ ಅಶ್ವಥ್‌ಗೆ ಜಮೀನು ಉಳಿಸುವ ಕಾರ್ಯದಲ್ಲಿ ನೆರವಾದರು. ಅಂದಿನ ಪಾಂಡವಪುರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಸುವರ್ಣಾ ದೇವಿ, ಉಪವಿಭಾಗಾಧಿಕಾರಿಗಳಾಗಿದ್ದ ಚಿಕ್ಕತಿಮ್ಮಯ್ಯ ಸ್ಥಳ ಪರಿಶೀಲನಾವರದಿ ತರಿಸಿಕೊಂಡು ಜಮೀನು ಸರ್ಕಾರಿ ಶಾಲೆಗೆ ಸೇರಬೇಕು ಎಂದು ವರದಿ ನೀಡಿದ ಪರಿಣಾಮ ಕಂದಾಯ ಇಲಾಖೆ ಕಾರ್ಯದರ್ಶಿಯವರು ವಿಶೇಷ ಆದೇಶ ಹೊರಡಿಸಿ ಜಮೀನು ಶಾಲಾ ಆಸ್ತಿ ಎಂದು ಆದೇಶಿಸಿ ಶಿಕ್ಷಣ ಇಲಾಖೆ ಹೆಸರಿಗೆ ಖಾತೆ ಮಾಡಿಸಿದ್ದಾರೆ ಎಂದರು.

ಈ ಪರಿಣಾಮ ಜಮೀನು ಮಕ್ಕಳ ಕೊರತೆಯಿಂದಾಗಿ ಎಜಿಕೊಪ್ಪಲಿನ ಶಾಲೆ ಮುಚ್ಚಿಹೋಗಿದೆ. ಶಿಕ್ಷಕ ಪಗಡೆಕಲ್ಲಹಳ್ಳಿ ಶಾಲೆಗೆ ವರ್ಗಾವಣೆಗೊಂಡು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಂದು ಹೋರಾಟ ಮಾಡಿದ್ದ ಶಿಕ್ಷಕರನ್ನು ನೆನಪಿಸಿಕೊಂಡು ಕನ್ನಡ ರಾಜ್ಯೋತ್ಸವ ತಿಂಗಳ ವೇಳೆ ಅಭಿನಂದನೆ ಸಲ್ಲಿಸಲಾಗಿದೆ ಎಂದರು.

ಶಾಲಾಕಟ್ಟಡ ಮತ್ತು ಬೆಲೆಬಾಳುವ ಮರಗಳಿರುವ ಜಮೀನಿನ ಮೇಲೆ ಮತ್ತೆ ಕಣ್ಣುಬೀಳಬಾರದು ಎಂಬ ಕಾರಣಕ್ಕೆ ಕ್ರಮವಹಿಸಿದ ಗ್ರಾಮಸ್ಥರು ಜಮೀನಿನ ಮುಂಭಾಗ ಶಾಲಾ ಮತ್ತು ಶಿಕ್ಷಣ ಇಲಾಖೆ ಆಸ್ತಿ ಎಂಬ ನಾಮಫಲಕ ಅಳವಡಿಸಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಜಮೀನಿಗೆ ರಕ್ಷಣೆಗೆ ಸೂಕ್ತ ಕ್ರಮವಹಿಸಬೇಕೆಂದು ಮನವಿ ಮಾಡಿದರು.