ರಾಜ್ಯದಲ್ಲಿ 2004ಕ್ಕಿಂತ ಹಿಂದಿನ ಋಣ ಭಾರ ಪ್ರಮಾಣ ಪತ್ರ (ಇ.ಸಿ.) ಹಾಗೂ ಹಿಂದೂ ವಿವಾಹ ನೋಂದಣಿ ಸೇರಿದಂತೆ ಏಳು ಪ್ರಮುಖ ಸೇವೆಗಳನ್ನು ಗ್ರಾಮ ಪಂಚಾಯ್ತಿಗಳ ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ ಒನ್‌ಗಳಲ್ಲಿ ಆನ್‌ಲೈನ್‌ ಮೂಲಕ ಒದಗಿಸುವ ಸಪ್ತ ನಾಗರಿಕಸ್ನೇಹಿ ತಂತ್ರಾಂಶಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಿದ್ದಾರೆ.

ಬೆಂಗಳೂರು (ಫೆ.16): ರಾಜ್ಯದಲ್ಲಿ 2004ಕ್ಕಿಂತ ಹಿಂದಿನ ಋಣ ಭಾರ ಪ್ರಮಾಣ ಪತ್ರ (ಇ.ಸಿ.) ಹಾಗೂ ಹಿಂದೂ ವಿವಾಹ ನೋಂದಣಿ ಸೇರಿದಂತೆ ಏಳು ಪ್ರಮುಖ ಸೇವೆಗಳನ್ನು ಗ್ರಾಮ ಪಂಚಾಯ್ತಿಗಳ ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ ಒನ್‌ಗಳಲ್ಲಿ ಆನ್‌ಲೈನ್‌ ಮೂಲಕ ಒದಗಿಸುವ ಸಪ್ತ ನಾಗರಿಕಸ್ನೇಹಿ ತಂತ್ರಾಂಶಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಿದ್ದಾರೆ.

ಇದರಿಂದ ಇನ್ನು ಮುಂದೆ 2004ಕ್ಕೂ ಪೂರ್ವದ ಋಣಭಾರ ಪ್ರಮಾಣ ಪತ್ರವನ್ನೂ (ಇ.ಸಿ.) ಉಪ ನೋಂದಣಾಧಿಕಾರಿಗಳ ಕಚೇರಿಗೆ ಹೋಗದೆಯೇ ಪಡೆಯಬಹುದು. 2004ಕ್ಕೂ ಪೂರ್ವದ ಋಣಭಾರ ಪ್ರಮಾಣಪತ್ರಕ್ಕೆ ಸಾರ್ವಜನಿಕರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ಶುಲ್ಕಗಳನ್ನು ಆನ್‌ಲೈನ್‌ ಮೂಲಕ ಬ್ಯಾಂಕ್‌ ಖಾತೆಯಿಂದ ನೇರವಾಗಿ ಖಜಾನೆಗೆ ಪಾವತಿಸಿ ಉಪ ನೋಂದಣಿ ಅಧಿಕಾರಿಗಳು ಅಪ್‌ಲೋಡ್‌ ಮಾಡಿರುವ ಇಸಿಯನ್ನು ತಮ್ಮ ಲಾಗಿನ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳುವ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆನ್ಲೈನ್‌ ವಿವಾಹ ದೃಢೀಕರಣ: ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ಉಪ ನೋಂದಣಾಧಿಕಾರಿಗಳು ಅನುಮೋದಿಸಿದ ನಂತರ ನಿಗದಿತ ಶುಲ್ಕ ಪಾವತಿಸಿ ಉಪ ನೋಂದಣಿ ಕಚೇರಿಗಳಿಗೆ ಭೇಟಿ ನೀಡದೆಯೇ ಆನ್‌ಲೈನ್‌ ಮೂಲಕ ವಿವಾಹ ದೃಢೀಕರಣ ಪತ್ರ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ವಿವರಗಳಿಗೆ ಈ ವೆಬ್‌ಸೈಟ್‌ಗಳಿಗೆ ಭೇಟಿ ನೀಡಬಹದು: https://www.staging.kaveri.karnataka.gov.in, https://kaveri.karnataka.gov.in

ಗುತ್ತಿಗೆ ಆಧಾರದಲ್ಲಿ 337 ವೈದ್ಯರ ನೇಮಕಕ್ಕೆ ನಿರ್ಧಾರ: ಸಚಿವ ದಿನೇಶ್ ಗುಂಡೂರಾವ್

ವಿಶೇಷ ವಿವಾಹಗಳ ನೋಂದಣಿ ತಂತ್ರಾಂಶ: ವಿಶೇಷ ವಿವಾಹಗಳ ಕಾಯ್ದೆ 1954ರ ಅಡಿ ವಿವಾಹಗಳ ನೋಂದಣಿಯನ್ನು ಸುಲಭಗೊಳಿಸಲು ಸಾರ್ವಜನಿಕರು ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಲು, ಶುಲ್ಕಗಳನ್ನು ಪಾವತಿಸಲು ಹಾಗೂ ವಿವಾಹ ನೋಂದಣಿಗೆ ಉಪ ನೋಂದಣಿ ಕಚೇರಿಯಲ್ಲಿ ದಿನಾಂಕ ಹಾಗೂ ಸಮಯವನ್ನು ನಿಗದಿಪಡಿಸಲು ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಜಿಐಎಸ್‌ ಮೂಲಕ ಕೃಷಿ ಭೂಮಿ ಋಣಭಾರ ಪ್ರಮಾಣ ಪತ್ರ ಪಡೆಯುವ ಹಾಗೂ ಇ-ಸ್ಟಾಂಪ್‌ ಆನ್‌ಲೈನ್‌ ಕ್ಯಾಲ್ಕ್ಯುಲೇಟರ್‌ ತಂತ್ರಾಂಶಗಳನ್ನು ಅಳವಡಿಕೆ ಮಾಡಲಾಗಿದೆ.