ಎಂಇಎಸ್ 'ಕರಾಳ ದಿನ'ಕ್ಕೆ ತಡೆ ಒಡ್ಡಿದ್ದ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ವಿರುದ್ಧ ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ಹಕ್ಕುಚ್ಯುತಿ ದೂರು ದಾಖಲಿಸಿದ್ದಾರೆ. ತಮಗೆ ಬೆಳಗಾವಿ ಪ್ರವೇಶ ನಿರಾಕರಿಸಿ ಸಂಸದರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದು ಅವರು ಲೋಕಸಭೆ ಸ್ಪೀಕರ್‌ಗೆ ದೂರು ನೀಡಿದ್ದಾರೆ.

ಬೆಳಗಾವಿ(ಡಿ.21): ಗಡಿ ವಿಚಾರದಲ್ಲಿ ನಾಡದ್ರೋಹಿ ಎಂಇಎಸ್ (MES) ಸಂಘಟನೆಯ ಹಿತಾಸಕ್ತಿಗೆ ತಡೆ ಒಡ್ಡಿದ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರನ್ನು ಮಹಾರಾಷ್ಟ್ರದ ಸಂಸದ ಧೈರ್ಯಶೀಲ ಮಾನೆ ಟಾರ್ಗೆಟ್ ಮಾಡಿದ್ದಾರೆ. ಕನ್ನಡಿಗರ ಪರ ನಿಂತು ಗಡಿ ರಕ್ಷಣೆಯ ಬದ್ಧತೆ ಪ್ರದರ್ಶಿಸಿದ್ದ ಡಿಸಿ ವಿರುದ್ಧ ಲೋಕಸಭೆ ಸ್ಪೀಕರ್‌ಗೆ ಹಕ್ಕುಚ್ಯುತಿ ದೂರು ಸಲ್ಲಿಸುವ ಮೂಲಕ ಸಂಸದರು ಉದ್ಧಟತನ ಪ್ರದರ್ಶಿಸಿದ್ದಾರೆ.

Add Asianetnews Kannada as a Preferred SourcegooglePreferred

ಡಿಸಿ ಮೊಹಮ್ಮದ್ ರೋಷನ್ ವಿರುದ್ಧ ಓಂ ಬಿರ್ಲಾಗೆ ದೂರು

ಮಹಾರಾಷ್ಟ್ರದ ಏಕನಾಥ್ ಶಿಂಧೆ ಬಣದ ಶಿವಸೇನೆ ಸಂಸದ ಧೈರ್ಯಶೀಲ ಮಾನೆ, ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ವಿರುದ್ಧ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಹಕ್ಕುಚ್ಯುತಿ ಉಲ್ಲಂಘನೆಯ ದೂರು ನೀಡಿದ್ದಾರೆ. ಜಿಲ್ಲಾಧಿಕಾರಿಗಳು ತಮಗೆ ಬೆಳಗಾವಿ ಪ್ರವೇಶ ನಿರಾಕರಿಸುವ ಮೂಲಕ ಒಬ್ಬ ಸಂಸದನ ಹಕ್ಕುಗಳನ್ನು ಕಿತ್ತುಕೊಂಡಿದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಎಂಇಎಸ್ 'ಕರಾಳ ದಿನ'ಕ್ಕೆ ಜಿಲ್ಲಾಡಳಿತದ ಬ್ರೇಕ್

ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ನಾಡದ್ರೋಹಿ ಎಂಇಎಸ್ ಸಂಘಟನೆಯು ಪ್ರತಿ ವರ್ಷ 'ಕರಾಳ ದಿನ' ಆಚರಿಸುತ್ತದೆ. ಈ ಬಾರಿ ಈ ದೇಶದ್ರೋಹಿ ಚಟುವಟಿಕೆಗೆ ಬೆಳಗಾವಿ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿರ್ಬಂಧ ಹೇರಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಳಗಾವಿಗೆ ಆಗಮಿಸುತ್ತಿದ್ದ ಸಂಸದ ಮಾನೆ ಅವರನ್ನು ಕರ್ನಾಟಕ ಗಡಿಯಲ್ಲೇ ಪೊಲೀಸರು ತಡೆದು ವಾಪಸ್ ಕಳುಹಿಸಿದ್ದರು. ಇದು ಸಂಸದರ ಆಕ್ರೋಶಕ್ಕೆ ಕಾರಣವಾಗಿದೆ.

ಗಡಿ ವಿವಾದ ಕೆಣಕಿದ ಮಹಾರಾಷ್ಟ್ರ ಸಂಸದ

ಸಲ್ಲಿಸಿರುವ ದೂರಿನಲ್ಲಿ 1956ರ ಗಡಿ ವಿವಾದವನ್ನು ಮತ್ತೆ ಕೆದಕಿರುವ ಮಾನೆ, ಬೆಳಗಾವಿ ಸೇರಿದಂತೆ 865 ಮರಾಠಿ ಭಾಷಿಕ ಗ್ರಾಮಗಳನ್ನು ಕರ್ನಾಟಕಕ್ಕೆ ಸೇರಿಸಲಾಗಿದೆ. ನಾನು ಮಹಾರಾಷ್ಟ್ರದ ಗಡಿ ವಿವಾದ ಕಾನೂನು ತಜ್ಞರ ಸಮಿತಿಯ ಅಧ್ಯಕ್ಷನಾಗಿದ್ದು, ಕರಾಳ ದಿನದಲ್ಲಿ ಭಾಗವಹಿಸುವುದು ನನ್ನ ಹಕ್ಕಾಗಿದೆ. ನನ್ನ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲದಿದ್ದರೂ ಕರ್ನಾಟಕ ಜಿಲ್ಲಾಡಳಿತ ನನ್ನ ಪ್ರವೇಶಕ್ಕೆ ನಿರ್ಬಂಧ ಹೇರಿದೆ ಎಂದು ವಾದಿಸಿದ್ದಾರೆ.

ನಾಡದ್ರೋಹಿಗಳ ವಿರುದ್ಧ ಜಿಲ್ಲಾಡಳಿತದ ದಿಟ್ಟ ಕ್ರಮ

ಗಡಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಕನ್ನಡ ವಿರೋಧಿ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತೆಗೆದುಕೊಂಡ ನಿರ್ಧಾರವು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ, ಇದನ್ನೇ ನೆಪವಾಗಿಟ್ಟುಕೊಂಡು ಜಿಲ್ಲಾಧಿಕಾರಿಯವರನ್ನು ಟಾರ್ಗೆಟ್ ಮಾಡುತ್ತಿರುವ ಮಹಾರಾಷ್ಟ್ರ ಸಂಸದರ ನಡೆ ಈಗ ಹೊಸ ವಿವಾದಕ್ಕೆ ನಾಂದಿ ಹಾಡಿದೆ.