ಸತತ ನಾಲ್ಕು ದಿನಗಳ ರಜೆಯ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ಬೆಂಗಳೂರಿನಿಂದ ತಮ್ಮ ಊರುಗಳತ್ತ ಹೊರಟಿದ್ದಾರೆ. ಇದರಿಂದಾಗಿ, ನಗರದ ಮೆಜೆಸ್ಟಿಕ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿವೆ

ಬೆಂಗಳೂರು (ಜ.23): ನಾಳೆಯಿಂದ ಸಾಲು ಸಾಲು ರಜೆಗಳ ಹಿನ್ನಲೆ ಸಂಚಾರ ದಟ್ಟಣೆಗೆ ಹೆಚ್ಚಳವಾಗಿದೆ. ನಾಲ್ಕು ದಿನಗಳ ಸುದೀರ್ಘ ರಜೆಯ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ತಮ್ಮ ಊರುಗಳತ್ತ ಮುಖ ಮಾಡಿದ್ದು, ನಗರದ ಹೃದಯಭಾಗವಾದ ಮೆಜೆಸ್ಟಿಕ್ ಜನವೋ ಜನ. ಊರುಗಳತ್ತ ಹೊರಟಿರುವ ಪ್ರಯಾಣಿಕರು.

Add Asianetnews Kannada as a Preferred SourcegooglePreferred

ಊರಿನ ಹಾದಿಯಲ್ಲಿ ವಾಹನಗಳ ಸಾಗರ

ನಾಳೆ ನಾಲ್ಕನೇ ಶನಿವಾರ, ಭಾನುವಾರ ಹಾಗೂ ಸೋಮವಾರ ಗಣರಾಜ್ಯೋತ್ಸವದ ಪ್ರಯುಕ್ತ ಸತತ ಮೂರು ದಿನ ಸರ್ಕಾರಿ ರಜೆ ಇದೆ. ಇದರ ಜೊತೆಗೆ ಮಂಗಳವಾರ ಬ್ಯಾಂಕ್ ಮುಷ್ಕರ ಇರುವುದರಿಂದ ಒಟ್ಟು ನಾಲ್ಕು ದಿನಗಳ ರಜೆ ಸಿಕ್ಕಂತಾಗಿದೆ. ಈ ಸುದೀರ್ಘ ರಜೆಯನ್ನು ಕಳೆಯಲು ಐಟಿ ಉದ್ಯೋಗಿಗಳು ಹಾಗೂ ಕಾರ್ಮಿಕರು ಕುಟುಂಬ ಸಮೇತರಾಗಿ ಊರುಗಳಿಗೆ ಹೊರಟಿದ್ದು, ಬಸ್ ನಿಲ್ದಾಣಗಳತ್ತ ಜನರ ಮಹಾಪೂರವೇ ಹರಿದು ಬರುತ್ತಿದೆ.

ಮೆಜೆಸ್ಟಿಕ್ ಸುತ್ತಮುತ್ತ ಸಂಚಾರ ಅಸ್ತವ್ಯಸ್ತ

ಸಂಜೆಯಿಂದಲೇ ಆರಂಭವಾದ ಟ್ರಾಫಿಕ್ ಜಾಮ್ ಮೆಜೆಸ್ಟಿಕ್ ಸುತ್ತಮುತ್ತಲಿನ ರಸ್ತೆಗಳನ್ನು ಹೈರಾಣಾಗಿಸಿದೆ. ಕೆಜಿ ರೋಡ್, ರೇಸ್ ಕೋರ್ಸ್ ರೋಡ್ ಮತ್ತು ಶಿವಾನಂದ ಸರ್ಕಲ್ ವ್ಯಾಪ್ತಿಯಲ್ಲಿ ವಾಹನಗಳು ಇಂಚು ಇಂಚಾಗಿ ಚಲಿಸುತ್ತಿವೆ. ಸಾವಿರಾರು ಖಾಸಗಿ ಮತ್ತು ಸರ್ಕಾರಿ ವಾಹನಗಳು ರಸ್ತೆಗಿಳಿದಿರುವುದರಿಂದ ಕಿಲೋಮೀಟರ್‌ಗಟ್ಟಲೆ ವಾಹನಗಳ ಸಾಲುಗಟ್ಟಿ ತೆವಳುತ್ತಿವೆ. ವಾಹನ ಸವಾರರು ಕಂಗಾಲಾಗಿದ್ದಾರೆ.

ರಸ್ತೆಗಿಳಿದ ಖಾಕಿ ಮತ್ತು ಸಾರಿಗೆ ಸಿಬ್ಬಂದಿ

ಪರಿಸ್ಥಿತಿಯನ್ನು ಹತೋಟಿಗೆ ತರಲು ಉಪ್ಪಾರಪೇಟೆ, ಚಿಕ್ಕಪೇಟೆ ಮತ್ತು ಹೈಗ್ರೌಂಡ್ ಸಂಚಾರಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಜನದಟ್ಟಣೆಗೆ ಅನುಗುಣವಾಗಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸಿಬ್ಬಂದಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡುತ್ತಿದ್ದು, ನಿಲ್ದಾಣದೊಳಗೆ ವಾಹನಗಳ ಸುಗಮ ಚಲನೆಗೆ ಪೊಲೀಸರೊಂದಿಗೆ ಕೈಜೋಡಿಸಿದ್ದಾರೆ. ಆದರೂ ವಾಹನಗಳ ಸಂಖ್ಯೆ ಮಿತಿ ಮೀರಿರುವುದರಿಂದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರುತ್ತಿಲ್ಲ.

ಸುಗಮ ಸಂಚಾರಕ್ಕೆ ಸಾರಿಗೆ ಸಿದ್ಧತೆ

ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಬಸ್ ನಿಲ್ದಾಣಗಳಲ್ಲಿ ಜನಜಂಗುಳಿ ನಿಯಂತ್ರಿಸಲು ಸಿಬ್ಬಂದಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇತ್ತ ನಗರದಿಂದ ಹೊರಹೋಗುವ ಪ್ರಮುಖ ಎಕ್ಸಿಟ್ ಪಾಯಿಂಟ್‌ಗಳಲ್ಲೂ ಭಾರಿ ಟ್ರಾಫಿಕ್ ಕಾಣಿಸಿಕೊಂಡಿದ್ದು, ಬೆಂಗಳೂರಿಗರು ಊರು ತಲುಪಲು ಈ ಬಾರಿ ಅಗ್ನಿಪರೀಕ್ಷೆ ಎದುರಿಸುವಂತಾಗಿದೆ.