ಬಜರಂಗದಳ ಹಲ್ಲೆ ಸಮರ್ಥಿಸಿಕೊಂಡ ಸಿಎಂ ಬೊಮ್ಮಾಯಿಗೆ ಲೀಗಲ್ ನೋಟಿಸ್
* ವಕೀಲರ ಸಂಘದಿಂದ ಸಿಎಂಗೇ ಲೀಗಲ್ ನೋಟಿಸ್ ಜಾರಿ
* ವಿದ್ಯಾರ್ಥಿಗಳ ಮೇಲಿನ ಹಲ್ಲೆ ಸಮರ್ಥಿಸಿದ ಸಿಎಂ: ಆರೋಪ
* ಮುಖ್ಯಮಂತ್ರಿಯಾಗಿ ಸ್ವೀಕರಿಸಿದ ಪ್ರಮಾಣ ವಚನ ಮತ್ತು ಸಂವಿಧಾನಕ್ಕೆ ವಿರುದ್ಧವಾದ ನಿಮ್ಮ ಹೇಳಿಕೆ
ಬೆಂಗಳೂರು(ಅ.20): ಮಂಗಳೂರಿನಲ್ಲಿ(Mangaluru) ಬಜರಂಗದಳದ(Bajrang Dal) ಕಾರ್ಯಕರ್ತರು ಸ್ಥಳೀಯ ಮೆಡಿಕಲ್ ವಿದ್ಯಾರ್ಥಿಗಳ ಮೇಲೆ ನಡೆಸಿದ ಹಲ್ಲೆಯನ್ನು ಸಮರ್ಥಿಸುವ ರೀತಿಯಲ್ಲಿ ನೀಡಿರುವ ಹೇಳಿಕೆಯನ್ನು ಕೂಡಲೇ ಹಿಂದಕ್ಕೆ ಪಡೆದು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ನ್ಯಾಯಾಂಗದ ಮೆಟ್ಟಿಲೇರುವುದಾಗಿ ಎಚ್ಚರಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರಿಗೆ ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟೀಸ್ (ಎಐಎಲ್ಎಜೆ) ಸಂಘಟನೆ ಎಚ್ಚರಿಸಿ ಲೀಗಲ್ ನೋಟಿಸ್(Legal Notice) ಜಾರಿ ಮಾಡಿದೆ.
ಈ ಕುರಿತು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಅ.17ರಂದು 10 ಪುಟಗಳ ನೋಟಿಸ್ ಕಳುಹಿಸಿದೆ. ವಿದ್ಯಾರ್ಥಿನಿಯ(Student) ಮೇಲಿನ ಬಜರಂಗದಳದ ಕಾರ್ಯಕರ್ತರು ನಡೆಸಿರುವ ಹಲ್ಲೆಯ ಬಗ್ಗೆ ನೀವು ಸಂವಿಧಾನಿಕ ಚೌಕಟ್ಟು ಮೀರಿ ಹೇಳಿಕೆ ನೀಡಿದ್ದಿರಿ. ರಾಜ್ಯದಲ್ಲಿ(Karnataka) ಕೋಮುವಾದ ಹೆಚ್ಚುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿಯಂತಹ(Chief Minister) ಉನ್ನತ, ಸಾಂವಿಧಾನಿಕ ಹಾಗೂ ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ಧಾರ್ಮಿಕ ಮೂಲಭೂತವಾದಿ ಗುಂಪುಗಳ ಅನೈತಿಕ ಪೊಲೀಸ್ಗಿರಿಗೆ(Police) ಬೆಂಬಲ ನೀಡುವಂತೆ ಮಾತನಾಡಿರುವುದು ಸರಿಯಲ್ಲ ಎಂದು ನೋಟಿಸ್ನಲ್ಲಿ ಆಕ್ಷೇಪಿಸಲಾಗಿದೆ.
ಹಿಂದೂ ಕಾರ್ಯಕರ್ತನ ಮೇಲೆ ಗಂಭೀರ ಹಲ್ಲೆ : ಮೂವರು ಅರೆಸ್ಟ್
ಬಜರಂಗದಳದವರು ಎನ್ನಲಾದ ಕಾರ್ಯಕರ್ತರು ಮಂಗಳೂರಿನ ಮೆಡಿಕಲ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಬೊಮ್ಮಾಯಿ, ಭಾವನಾತ್ಮಕ ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ. ಸಮಾಜದಲ್ಲಿ ನೈತಿಕತೆ ಇಲ್ಲದಿದ್ದಾಗ ಅದಕ್ಕೆ ತಕ್ಕಂತೆ ಪ್ರತಿಕ್ರಿಯೆಗಳು ಬರುತ್ತವೆ. ಸಮಾಜದಲ್ಲಿ ಎಲ್ಲರಿಗೂ ಜವಾಬ್ದಾರಿ ಇರುತ್ತದೆ. ಕಾನೂನು ಸುವ್ಯವಸ್ಥೆ ಮಾತ್ರವಲ್ಲದೆ ಸಮುದಾಯದ ಒಳಗಿನ ಸಾಮರಸ್ಯವನ್ನೂ ಕಾಪಾಡುವುದು ಸರ್ಕಾರದ ಜವಾಬ್ದಾರಿ. ನಮ್ಮ ಯುವಕರು ಕೂಡ ಸಮಾಜದ ಭಾವನೆಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಎಂದು ಹೇಳಿಕೆ ನೀಡಿದ್ದರು.
ಅದನ್ನು ಆಕ್ಷೇಪಿಸಿರುವ ಎಐಎಲ್ಎಜೆ, ಈ ನಿಮ್ಮ ಹೇಳಿಕೆ ಮುಖ್ಯಮಂತ್ರಿಯಾಗಿ ಸ್ವೀಕರಿಸಿದ ಪ್ರಮಾಣ ವಚನ ಮತ್ತು ಸಂವಿಧಾನಕ್ಕೆ(Constitution) ವಿರುದ್ಧವಾಗಿದೆ. ಆದ್ದರಿಂದ ತಾವು ಕೂಡಲೇ ತಮ್ಮ ಹೇಳಿಕೆ ಹಿಂಪಡೆಯಬೇಕು ಹಾಗೂ ಕುರಿತು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ಧರ್ಮದ ಹೆಸರಲ್ಲಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನೈತಿಕ ಪೊಲೀಸ್ ಗಿರಿ ಹಾಗೂ ಮರ್ಯಾದಾ ಹತ್ಯೆ ಹಾಗೂ ಹಿಂಸಾಚಾರಗಳನ್ನು(Violence) ಹತ್ತಿಕ್ಕಬೇಕು. ಆ ಮೂಲಕ ಸಂವಿಧಾನಬದ್ಧವಾಗಿ ನಡೆದುಕೊಳ್ಳಬೇಕು. ಇಲ್ಲವಾದಲ್ಲಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಎಐಎಲ್ಎಜೆ ಎಚ್ಚರಿಕೆ ನೀಡಿದೆ.