* ಮೇವಿನ ಬೀಜದ ಕಿಟ್ಗೆ ರೈತರಿಂದ ಬೇಡಿಕೆ* ಅನುದಾನ ಕೊರತೆಯಿಂದ ಸಂಕಷ್ಟ* ಮಳೆಯಿಂದಾಗಿ ಬೆಳೆ ನಾಶ, ಜಾನುವಾರುಗಳಿಗೆ ಮೇವಿನ ಕೊರತೆ ಸಾಧ್ಯತೆ
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು(ಜ.09): ಕಳೆದ ವರ್ಷ ಅತಿಯಾದ ಮಳೆಯಿಂದಾಗಿ(Rain) ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಪೈರು ನಾಶವಾಗಿದ್ದು(Corp Loss), ಈ ಬಾರಿ ಜಾನುವಾರುಗಳಿಗೆ(Livestock) ಮೇವಿನ ಕೊರತೆ ಕಾಡುವ ಸಂಭವವಿದೆ. ಇಂತಹ ಸಂದರ್ಭದಲ್ಲಿ ರೈತರಿಗೆ ಉಚಿತವಾಗಿ ಮೇವಿನ ಬೀಜದ ಮಿನಿ ಕಿಟ್ ವಿತರಿಸುವುದು ಅಗತ್ಯವಾಗಿದೆ. ಕಿಟ್ ವಿತರಿಸಲು ಪಶು ಸಂಗೋಪನಾ ಇಲಾಖೆಯೇನೋ ಸಿದ್ಧವಾಗಿದೆ. ಆದರೆ ಅನುದಾನದ ಕೊರತೆ ಕಾಡುತ್ತಿದೆ. ಮತ್ತೊಂದೆಡೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್ಕೆವಿವೈ)ಯಡಿ ಕೇಂದ್ರ ಸರ್ಕಾರ(Central Government) ಕಳೆದೆರಡು ವರ್ಷದಿಂದ ಅನುದಾನವನ್ನೇ ನೀಡಿಲ್ಲದಿರುವುದೂ ಸಂಕಷ್ಟ ಉಂಟುಮಾಡಿದೆ.
ಇತ್ತೀಚೆಗೆ ರಾಜ್ಯದ(Karnataka) ಹಲವೆಡೆ ಸುರಿದ ಧಾರಾಕಾರ ಮಳೆಯಿಂದಾಗಿ ಕೊಯ್ಲಿಗೆ ಬಂದಿದ್ದ ಲಕ್ಷಾಂತರ ಹೆಕ್ಟೇರ್ ಬೆಳೆ ನಾಶವಾಗಿದ್ದು, ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ(Fodder) ಕೊರತೆ ಉಂಟಾಗಬಹುದು ಎಂಬ ಆತಂಕ ರೈತರನ್ನು(Farmers) ಕಾಡುತ್ತಿದೆ. ಈ ಸನ್ನಿವೇಶವನ್ನು ಎದುರಿಸಲು ಅನ್ನದಾತರಿಗೆ ಸಮರೋಪಾದಿಯಲ್ಲಿ ಉಚಿತ ಮೇವಿನ ಕಿಟ್ ವಿತರಿಸಬೇಕಿತ್ತು. ಆದರೆ ಅನುದಾನ ಕೊರತೆಯಿಂದಾಗಿ ಈ ಕಾರ್ಯಕ್ಕೆ ಹಿನ್ನಡೆಯಾಗಿದೆ.
2019-20ರಲ್ಲಿ ಬರಗಾಲ ಉಂಟಾಗಿ ಮೇವಿಗೆ ತೀವ್ರ ಕೊರತೆ ಉಂಟಾಗಿದ್ದರಿಂದ 4,44,975 ಮೇವಿನ ಬೀಜದ ಮಿನಿ ಕಿಟ್ಗಳನ್ನು ರಾಜ್ಯಾದ್ಯಂತ ರೈತರಿಗೆ ಉಚಿತವಾಗಿ ವಿತರಿಸಲಾಗಿತ್ತು. 2020-21ರಲ್ಲಿ 1,33,971 ಕಿಟ್ ಹಾಗೂ 2021-22ರಲ್ಲಿ 1,09,563 ಕಿಟ್ ಮಾತ್ರ ವಿತರಿಸಲಾಗಿದೆ. ಕಿಟ್ಗೆ ರೈತರಿಂದ ಬೇಡಿಕೆ ಇದ್ದು, ಆದಷ್ಟು ಬೇಗ ಪೂರೈಸುವ ಕೆಲಸ ಆಗಬೇಕಿದೆ ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.
Untimely Rain Effect: ರೈತರಿಗೆ ಮಳೆ ನೀರೇ ವಿಲನ್..!
ಪ್ರತ್ಯೇಕ ಅನುದಾನವಿಲ್ಲ:
ಮೇವಿನ ಕಿಟ್(Fodder Kit) ವಿತರಿಸಲು ಪ್ರತ್ಯೇಕ ಅನುದಾನವೇನೂ(Grants) ಸರ್ಕಾರದಲ್ಲಿ ನಿಗದಿಯಾಗಿಲ್ಲ. ಆಯಾ ವರ್ಷಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿ ಸಂದರ್ಭ ನೋಡಿಕೊಂಡು ಕಿಟ್ ವಿತರಿಸಲಾಗುತ್ತದೆ. ಈ ರೀತಿ ಆಗಿರುವುದರಿಂದಲೇ ಸಮಯಕ್ಕೆ ಸರಿಯಾಗಿ ಕಿಟ್ ವಿತರಣೆ ಆಗುತ್ತಿಲ್ಲ. ಅಗತ್ಯ ಕಂಡುಬಂದರೆ ತಕ್ಷಣವೇ ಅನುದಾನ ಬಿಡುಗಡೆ ಆಗುವಂತಹ ವ್ಯವಸ್ಥೆ ನಿರ್ಮಾಣವಾಗಬೇಕು ಎಂಬ ಒತ್ತಾಯ ರೈತರಿಂದ ಕೇಳಿಬಂದಿದೆ.
ಕೇಂದ್ರದ ಅನುದಾನ ಸ್ಥಗಿತ
ಪಶು ಸಂಗೋಪನಾ ಇಲಾಖೆಯಿಂದ(Department of Animal Husbandry) ಮೇವಿನ ಬೀಜದ ಕಿಟ್ ವಿತರಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಇದಲ್ಲದೆ, ಕಿಟ್ ವಿತರಿಸಲು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕೇಂದ್ರ ಸರ್ಕಾರವೂ ಕೋಟ್ಯಂತರ ರುಪಾಯಿ ಅನುದಾನ ನೀಡುತ್ತಿತ್ತು. ಆದರೆ ಕಳೆದ ಎರಡು ವರ್ಷದಿಂದ ಕಿಟ್ ವಿತರಿಸಲು ಕೇಂದ್ರ ಸರ್ಕಾರ ನಯಾಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಕೊರೋನಾ(Coronavirus) ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಉಂಟಾಗಿರುವುದರಿಂದ ಕೇಂದ್ರ ಅನುದಾನ ನೀಡುವುದನ್ನು ನಿಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.
ವರ್ಷ ವಿತರಿಸಿದ ಕಿಟ್
2019-20 4,44,975
2020-21 1,33,971
2021-22 1,09,563
Untimely Rain Effect: ಬೆಳೆ ಹಾನಿ ಹೆಚ್ಚಿನ ಪರಿಹಾರ ಶೀಘ್ರ ಕೊಡುವಂತೆ ರೈತರ ಪಟ್ಟು
42 ಕೋಟಿ ಅನುದಾನಕ್ಕೆ ಪತ್ರ
ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಬೆಳೆ ನಷ್ಟವಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 12 ಲಕ್ಷ ಮೇವಿನ ಬೀಜದ ಕಿಟ್ ವಿತರಿಸಲು 42 ಕೋಟಿ ರು. ನೀಡುವಂತೆ ವಿಪತ್ತು ನಿರ್ವಹಣಾ ವಿಭಾಗಕ್ಕೆ ಪತ್ರ ಬರೆಯಲಾಗಿದೆ. ಶೀಘ್ರ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿದೆ ಅಂತ ಪಶುಸಂಗೋಪನಾ ಇಲಾಖೆ ಆಯುಕ್ತ ಎಚ್.ಬಸವರಾಜೇಂದ್ರ ತಿಳಿಸಿದ್ದಾರೆ.
ಜಾನುವಾರುಗಳ ಮೇವೂ ಕಿತ್ತುಕೊಂಡ ಅಕಾಲಿಕ ಮಳೆ
ವರ್ಷದ ಸಾಲು ಸಾಲು ಅಕಾಲಿಕ ಮಳೆ(Untimely Rain) ಬತ್ತದ ಬೆಳೆ ಸಂಗಡ ಜಾನುವಾರುಗಳ(Livestock) ಮೇವನ್ನೂ ಕಿತ್ತುಕೊಂಡಿದೆ. ಬತ್ತದ ಹುಲ್ಲು ಕೊಳೆತು ಕಪ್ಪು ಬಣ್ಣಕ್ಕೆ ತಿರುಗಿದ್ದು, ಈಗ ಮಳೆಯ ಬಳಿಕ ಒಣಗಿಸಿದರೂ ಬಳಕೆಗೆ ಬರದಂತಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ 50 ಸಾವಿರ ಹೆಕ್ಟೇರ್ಗಿಂತ ಹೆಚ್ಚು ಪ್ರದೇಶದಲ್ಲಿ ಬತ್ತ(Paddy) ಬೆಳೆಯಲಾಗುತ್ತಿದೆ. ಪ್ರಾಥಮಿಕ ಅಂದಾಜಿನಂತೆ ಮಳೆಯಿಂದ ತಾಲೂಕಿನ 6 ಸಾವಿರ ಹೆಕ್ಟೇರ್ಗಿಂತ ಹೆಚ್ಚಿನ ಪ್ರದೇಶದ ಫಸಲು ಹಾಳಾಗಿದೆ. ಬೇಸಾಯದ ಶೇ. 40ರಷ್ಟು ಪ್ರದೇಶದ ಸಸಿಗಳು ಮಳೆಗೆ ಹಾನಿಗೀಡಾಗಿದೆ.
