ದಶಕಗಳ ಹೋರಾಟದ ನಂತರ ರಾಜ್ಯ ಸಾರಿಗೆ ನೌಕರರ ವೇತನ ಹೆಚ್ಚಳದ ಬೇಡಿಕೆ ಈಡೇರುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಚರ್ಚಿಸಲು ಏಪ್ರಿಲ್ 6 ರಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ನೌಕರರ ಸಂಘಟನೆಗಳೊಂದಿಗೆ ಮಹತ್ವದ ಸಭೆ ಕರೆದಿದ್ದು, ಅಂದೇ ವೇತನ ಹೆಚ್ಚಳ ಮತ್ತು ಹಿಂಬಾಕಿನಿರ್ಧಾರ?

ಬೆಂಗಳೂರು (ಏ.2): ದಶಕಗಳ ಕಾಲ ರಾಜ್ಯ ಸಾರಿಗೆ ನೌಕರರು ಮಾಡಿದ ಹೋರಾಟಕ್ಕೆ ಕೊನೆಗೂ ಜಯ ಸಿಗುವ ಲಕ್ಷಣಗಳು ಕಾಣಿಸಿವೆ. ಈ ಬಾರಿ ಕರ್ನಾಟಕ ಬಜೆಟ್‌ನಲ್ಲಿ ಘೋಷಿಸಿದಂತೆ ರಾಜ್ಯ ಸಾರಿಗೆ ನೌಕರರ ವೇತನ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಮಾಡುವಂತಹ ಪ್ರಮುಖ ಬೆಳವಣಿಗೆ ನಡೆದಿದೆ.

Add Asianetnews Kannada as a Preferred SourcegooglePreferred

ಏಪ್ರಿಲ್ 6ಕ್ಕೆ ನೌಕರರ ಸಂಘಟನೆಗಳ ಜತೆ ಮಹತ್ವದ ಸಭೆ

ಸಾರಿಗೆ ನೌಕರರ ವೇತನ ಹೆಚ್ಚಳದ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲು ಕೆಎಸ್‌ಆರ್‌ಟಿಸಿ(KSRTC) ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂಪಾಷ ಅವರ ನೇತೃತ್ವದಲ್ಲಿ ಮಹತ್ವದ ಸಭೆ ಕರೆಯಲಾಗಿದೆ. ಏಪ್ರಿಲ್ 6ರಂದು ನೌಕರರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಎಂಡಿ ಸಮಾಲೋಚನೆ ನಡೆಸಲಿದ್ದು, ಅಂದೇ ಸಾರಿಗೆ ನೌಕರರ ವೇತನ ಹೆಚ್ಚಳದ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

38 ತಿಂಗಳ ಹಿಂಬಾಕಿ ಬಗ್ಗೆಯೂ ನಿರ್ಧಾರ ಸಾಧ್ಯತೆ

ಕಳೆದ ಎರಡು ವರ್ಷಗಳಿಂದ ಸಾರಿಗೆ ನೌಕರರು ವೇತನ ಪರಿಷ್ಕರಣೆಗಾಗಿ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದಾರೆ. 2024ರ ಜನವರಿಯಿಂದ ಅನ್ವಯವಾಗುವಂತೆ ವೇತನ ಹೆಚ್ಚಳ ಮತ್ತು ಸುಮಾರು 38 ತಿಂಗಳ ಹಿಂಬಾಕಿ (Arrears) ಪಾವತಿಸುವಂತೆ ನೌಕರರು ಪಟ್ಟು ಹಿಡಿದಿದ್ದರು. ಆದರೆ ಈ ಸಭೆಯಲ್ಲಿ ಆ ಬಗ್ಗೆ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ.

ಸಾರಿಗೆ ನೌಕರರ ಸಂಬಳ ಎಷ್ಟು ಹೆಚ್ಚಳವಾಗುತ್ತೆ?

ರಾಜ್ಯ ಸಾರಿಗೆ ನೌಕರರು ದಶಕಗಳಿಂದಲೂ ನಿರಂತರ ಮುಷ್ಕರ ಮತ್ತು ಪ್ರತಿಭಟನೆಗಳ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಲೇ ಬಂದಿದ್ದಾರೆ. ಕನಿಷ್ಠ ಶೇ. 25ರಷ್ಟು ವೇತನ ಹೆಚ್ಚಳ ಮಾಡಲೇಬೇಕೆಂದು ಬೇಡಿಕೆಗೆ ಆಗ್ರಹಿಸಿದ್ದರು. ಇದೀಗ ನೌಕರರ ತೀವ್ರ ಒತ್ತಡಕ್ಕೆ ಮಣಿದಿರುವ ಸರ್ಕಾರ, ಈ ಬಾರಿ ಅವರ ಬೇಡಿಕೆಗೆ ಪೂರಕವಾಗಿ ಸ್ಪಂದಿಸುವ ನಿರೀಕ್ಷೆಯಿದೆ.