Asianet Suvarna News Asianet Suvarna News

ಲಾಕ್‌ಡೌನ್‌ ಫುಲ್‌ ಟೈಟ್‌, ಸಿಎಂ ಸೂಚನೆ ಬೆನ್ನಲ್ಲೇ ಪೊಲೀಸರು ಚುರುಕು!

* ಸಿಎಂ ಸೂಚನೆ ಬೆನ್ನಲ್ಲೇ ಪೊಲೀಸರು ಚುರುಕು

* ರಾಜ್ಯಾದ್ಯಂತ 4000ಕ್ಕೂ ಅಧಿಕ ವಾಹನ ಜಪ್ತಿ

* ನೂರಾರು ಜನ ಪೊಲೀಸ್‌ ವಶಕ್ಕೆ

* ರಸ್ತೆಗಳಲ್ಲಿ ಬಿಗಿ ತಪಾಸಣೆ

* ಅನಗತ್ಯ ತಿರುಗುವವರಿಗೆ, ಮಾಸ್ಕ್‌ ಧರಿಸದವರಿಗೆ ದಂಡ

Karnataka Police take Strict action for violating lockdown rules more than 4k vehicles seized pod
Author
Bangalore, First Published May 23, 2021, 7:28 AM IST

ಬೆಂಗಳೂರು(ಮೇ.23): ಕೊರೋನಾ ಸೋಂಕು ನಿಯಂತ್ರಣದ ಸಲುವಾಗಿ ಸೆಮಿ ಲಾಕ್‌ಡೌನ್‌ ವಿಸ್ತರಣೆ ಮಾಡಿ ಮುಖ್ಯಮಂತ್ರಿಗಳು ಸೂಚನೆ ಬೆನ್ನಲ್ಲೇ ಲಾಕ್‌ಡೌನ್‌ ನಿಯಮಗಳನ್ನು ತೀವ್ರ ಕಟ್ಟುನಿಟ್ಟು ಜಾರಿಗೊಳಿಸಿರುವ ಪೊಲೀಸರು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಜನಸಂಚಾರ, ವಾಹನ ಸಂಚಾರಕ್ಕೆ ಮತ್ತಷ್ಟುನಿರ್ಬಂಧ ಹೇರಿದ್ದಾರೆ. ನಗರ, ಪಟ್ಟಣಗಳ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ ಹಾಕಿ ಬಿಗು ತಪಾಸಣೆ ನಡೆಸುತ್ತಿರುವುದರೊಂದಿಗೆ ಪಿಳ್ಳೆನೆವ ಹೇಳಿಕೊಂಡು ತಿರುಗಾಡುವವರಿಗೆ ತೀವ್ರ ಬಿಸಿ ಮುಟ್ಟಿಸಿದ್ದಾರೆ. ಶನಿವಾರ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ದಂಡ ವಿಧಿಸಲಾಗಿದ್ದು ಅನಗತ್ಯವಾಗಿ ರಸ್ತೆಗಿಳಿದ ಸುಮಾರು 4 ಸಾವಿರಕ್ಕೂ ಅಧಿಕ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

WHO ಲಿಸ್ಟ್‌ನಲ್ಲಿಲ್ಲ ಕೊವ್ಯಾಕ್ಸೀನ್: ಭಾರತೀಯರ ವಿದೇಶ ಪ್ರಯಾಣಕ್ಕೆ ಕುತ್ತು

ಬೆಂಗಳೂರಿನಲ್ಲಿ ಬೆಸ್ಕಾಂ, ಬಿಬಿಎಂಪಿ, ಶಾಸಕರು ಹಾಗೂ ವೈದ್ಯಕೀಯ ಸೇವಾ ವಲಯ ಹೀಗೆ ತರಹೇವಾರಿ ಪಾಸ್‌ಗಳನ್ನು ನಕಲಿ ಮಾಡಿದ್ದವರಿಗೂ ಖಾಕಿ ಬಿಸಿ ತಟ್ಟಿದ್ದು, ತಪ್ಪಿಸಿಕೊಳ್ಳಲು ಏನೇನೋ ಸಬೂಬು ಹೇಳಿದವರನ್ನು ವಶಕ್ಕೆ ಪಡೆದು ಬಳಿಕ ಎಚ್ಚರಿಕೆ ನೀಡಿ ಪೊಲೀಸರು ಮನೆಗೆ ಕಳುಹಿಸಿದ್ದಾರೆ. ಇಷ್ಟುಮಾತ್ರವಲ್ಲದೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಜೂನ್‌ 7ರವರೆಗೆ ಸೆಕ್ಷನ್‌ 144ರಡಿ ನಿಷೇಧಾಜ್ಞೆ ವಿಸ್ತರಣೆ ಮಾಡಿರುವ ಪೊಲೀಸ್‌ ಇಲಾಖೆ, ಈ ಹಿನ್ನೆಲೆಯಲ್ಲಿ ಜನರು ಗುಂಪುಗೂಡುವಂತಿಲ್ಲ, ಪ್ರತಿಭಟನೆ, ಧರಣಿ ನಡೆಸುವಂತಿಲ್ಲ ಎಂದು ಸೂಚಿಸಿದೆ.

ಇಷ್ಟೇ ಅಲ್ಲದೆ ಬೆಳಗಾವಿ, ವಿಜಯಪುರ, ಬಾಗಲಕೋಟೆಗಳಲ್ಲಿ ವಾಯು ವಿಹಾರಕ್ಕೆ ಆಗಮಿಸಿದ್ದ ಜನರನ್ನು ಪೊಲೀಸರು ಬುದ್ಧಿ ಮಾತು ಹೇಳಿ ಕಳುಹಿಸಿದರು. ಕಲಬುರಗಿ, ಚಿಕ್ಕಬಳ್ಳಾಪುರ, ಗದಗ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ವಿವಿಧ ನಗರ ಮತ್ತು ಪಟ್ಟಣದಲ್ಲಿ ಪ್ರಮುಖ ರಸ್ತೆಗಳು ಸೇರಿದಂತೆ ನಗರದ ಮಾರುಕಟ್ಟೆಗಳಿಗೆ ಕಲ್ಪಿಸುವ ಮಾರ್ಗ ಮಧ್ಯೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿ, ರಸ್ತೆ ಸಂಚಾರಕ್ಕೆ ಕಡಿವಾಣ ಹಾಕಿದ್ದರು. ಬೆಂಗಳೂರಲ್ಲಂತೂ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರೇ ಖುದ್ದು ತಾವೇ ನಗರ ಸಂಚಾರ ನಡೆಸಿ ಹದ್ದು ಮೀರಿದ ಜನರಿಗೆ ಚುರುಕು ಮುಟ್ಟಿಸಿದರು.

ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 2039 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇನ್ನು ಬಳ್ಳಾರಿ, ವಿಜಯನಗರ ಅವಳಿ ಜಿಲ್ಲೆಯಲ್ಲಿ ಎಂದಿನಂತೆ ಬಿಗು ಕಾರ್ಯಾಚರಣೆ ನಡೆಸಿದ ಪೊಲೀಸರು 488 ವಾಹನಗಳನ್ನು ವಶಪಡಿಸಿ .97600 ದಂಡ ವಸೂಲಿ ಮಾಡಿದ್ದಾರೆ. 16 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ 71 ವಾಹನಗಳನ್ನು ಸೀಜ್‌ ಮಾಡಲಾಗಿದ್ದು, 137 ವಾಹನ ಸವಾರರ ವಿರುದ್ಧ ಪ್ರಕರಣಗಳನ್ನು ದಾಖಲು ಮಾಡಿ, 35300 ರುಪಾಯಿ ವಸೂಲಿ ಮಾಡಲಾಗಿದೆ. ಮಾಸ್ಕ್‌ ಇಲ್ಲದೆ ಸುತ್ತಾಡುತ್ತಿದ್ದ 237 ಜನರಿಗೆ 23700 ರುಪಾಯಿ ದಂಡ ಹಾಕಲಾಗಿದೆ.

ಕೊರೋನಾ ಅಬ್ಬರ ಮಧ್ಯೆ ಲಸಿಕೆ ಪಡೆದವರಿಗೊಂದು ಶುಭ ಸಮಾಚಾರ!

ಹಾವೇರಿ ಜಿಲ್ಲೆಯಲ್ಲಿ ಅನಗತ್ಯವಾಗಿ ರಸ್ತೆಗಿಳಿದ 164 ವಾಹನಗಳನ್ನು ಪೊಲೀಸರು ಸೀಜ್‌ ಮಾಡಿದ್ದಾರೆ. ಅಲ್ಲದೇ 304 ಮಾಸ್ಕ್‌ ಕೇಸ್‌ ದಾಖಲಿಸಿ .30,400 ದಂಡ ವಸೂಲಿ ಮಾಡಿದ್ದಾರೆ. ಗದಗ ಜಿಲ್ಲೆಯಲ್ಲಿ ಸೆಮಿ ಲಾಕ್‌ಡೌನ್‌ ಯಶಸ್ವಿಗೆ ಬಿಗಿ ಕ್ರಮ ಕೈಗೊಂಡಿರುವ ಪೊಲೀಸರು ಶನಿವಾರ ಅನಗತ್ಯವಾಗಿ ಸಂಚರಿಸುತ್ತಿದ್ದ ಸವಾರರನ್ನು ತಡೆದು 75 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿದ ಸಂಬಂಧ 6 ಪ್ರಕರಣ ದಾಖಲಿಸಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ ನಡುವೆಯೂ ಕಾನೂನು ಉಲ್ಲಂಘಿಸಿದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಅನಗತ್ಯವಾಗಿ ರಸ್ತೆಗಿಳಿದ 93 ವಾಹನಗಳನ್ನು ಜಪ್ತಿ ಮಾಡಲಾಗಿದ್ದು, 59 ಪ್ರಕರಣ ದಾಖಲಿಸಲಾಗಿದೆ. ಮಾಸ್ಕ್‌ ಧರಿಸದ 108 ಜನರ ವಿರುದ್ಧ . 27 ಸಾವಿರ ದಂಡ ವಸೂಲು ಮಾಡಲಾಗಿದೆ. ಸಾಮಾಜಿಕ ಅಂತರ ಕಾಪಾಡದ 303 ಜನರ ವಿರುದ್ಧ .60,600 ದಂಡ ವಿಧಿಸಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ರಸ್ತೆಗಿಳಿದ 52 ವಾಹನ ಜಪ್ತಿ ಮಾಡಿರುವ ಪೊಲೀಸರು ಮಾಸ್ಕ್‌ ಧರಿಸದೇ ಓಡಾಡುತ್ತಿದ್ದ 185 ಜನರ ವಿರುದ್ಧ ಪ್ರಕರಣ ದಾಖಲಿಸಿ, ಅವರಿಗೆ ದಂಡವನ್ನೂ ವಿಧಿಸಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ 234 ವಾಹನ ವಶಪಡಿಸಿ, ಮಾಸ್ಕ್‌ ಧರಿಸದೆ ತಿರುಗಾಡುತ್ತಿದ್ದ 347 ಜನರಿಗೆ ದಂಡಿ ವಿಧಿಸಿ 51650 ದಂಡ ವಿಧಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 61 ವಾಹನಗಳನ್ನು ಜಪ್ತಿ ಮಾಡಿದ್ದು ಕೊರೋನಾ ನಿಯಮಗಳನ್ನು ಉಲ್ಲಂಘಿಸಿದ 10 ಅಂಗಡಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಬಿಗಿ ನಿರ್ಬಂಧ

- ಸರ್ಕಾರಿ ಸಂಸ್ಥೆಗಳ ಪಾಸ್‌ ನಕಲು ಮಾಡಿದವರ ಪತ್ತೆ ಕಾರಾರ‍ಯಚರಣೆ

- ವಶಕ್ಕೆ ಪಡೆದು, ವಾಹನ ಜಪ್ತಿ ಮಾಡಿ, ಮನೆಗೆ ಕಳಿಸಿದ ಪೊಲೀಸರು

- ಬೆಂಗಳೂರಿನಲ್ಲಿ ಸ್ವತಃ ಪೊಲೀಸ್‌ ಕಮಿಷನರ್‌ ರಸ್ತೆಗಿಳಿದು ಮೇಲ್ವಿಚಾರಣೆ

- ರಾಜ್ಯಾದ್ಯಂತ ಲಾಕ್‌ಡೌನ್‌ ಉಲ್ಲಂಘಿಸಿದವರಿಗೆ ದಂಡ, ಎಚ್ಚರಿಕೆ

- ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ ಅಂಗಡಿಗಳ ಮೇಲೆ ಕೇಸ್‌

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

 

Follow Us:
Download App:
  • android
  • ios