ಗ್ರಾಪಂ ಚುನಾವಣೆ ಹಂತ-1| ಭರ್ಜರಿ ಶೇ.80 ಮತದಾನ| 3019 ಗ್ರಾಪಂನÜ 1.17 ಲಕ್ಷ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ| ಕೊರೋನಾ ಹಾವಳಿ, ಚಳಿಯಲ್ಲೂ ಹಕ್ಕು ಚಲಾಯಿಸಿದ ಜನತೆ
ಬೆಂಗಳೂರು(ಡಿ.23): ಕೋವಿಡ್-19 ಆತಂಕದ ನಡುವೆ ಗ್ರಾಮ ಪಂಚಾಯಿತಿಗಳಿಗೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.80ರಷ್ಟುಮತದಾನವಾಗಿದ್ದು, ಅಭ್ಯರ್ಥಿಗಳ ಚಿಹ್ನೆ ಬದಲು, ಅಭ್ಯರ್ಥಿಗಳ ಬೆಂಬಲಿಗರ ನಡುವೆ ಆರೋಪ-ಪ್ರತ್ಯಾರೋಪದಂತಹ ಸಣ್ಣಪುಟ್ಟಘಟನೆಗಳನ್ನು ಹೊರತುಪಡಿಸಿದರೆ ಶಾಂತಿಯುತವಾಗಿ ಮತದಾನ ನಡೆದಿದೆ.
ಕೊರೋನಾ ಹಿನ್ನೆಲೆಯಲ್ಲಿ ಸಾಕಷ್ಟುಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಕೊರೆಯುವ ಚಳಿಯಲ್ಲಿಯೂ ಮತದಾರರು ಉತ್ಸಾಹದಿಂದ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಸಂಸದರು, ಶಾಸಕರು, ಮಾಜಿ ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಜನಪ್ರತಿನಿಧಿಗಳು, ಮಠಾಧೀಶರು ತಮ್ಮ ಮತ ಚಲಾಯಿಸಿದರು.
ರಾಜ್ಯದ 117 ತಾಲೂಕುಗಳ 3,019 ಗ್ರಾಮ ಪಂಚಾಯಿತಿಗಳ 43,238 ಸ್ಥಾನಗಳಿಗೆ ಸ್ಪರ್ಧಿಸಿದ್ದ 1,17,383 ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ಬರೆದಿದ್ದಾರೆ. ಡಿ.30ರಂದು ಮತಗಳ ಎಣಿಕೆ ನಡೆಯಲಿದೆ. ಸದ್ಯಕ್ಕೆ ಶೇ.80ರಷ್ಟುಮತದಾನವಾಗಿರುವ ಮಾಹಿತಿ ಲಭ್ಯವಾಗಿದ್ದು, ಬುಧವಾರ ನಿಖರವಾದ ಮಾಹಿತಿ ಲಭ್ಯವಾಗಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.77, ಮಂಡ್ಯ ಶೇ.85.55, ಕೋಲಾರ ಶೇ.89, ಶಿವಮೊಗ್ಗ ಶೇ.82.94, ಧಾರವಾಡ ಶೇ.80, ಬಳ್ಳಾರಿ ಶೇ.81.2, ಗದಗ ಶೇ.79.12, ಉತ್ತರ ಕನ್ನಡ ಶೇ.74, ಯಾದಗಿರಿ ಶೇ.76, ಕೊಪ್ಪಳ ಶೇ.79, ಉಡುಪಿ ಶೇ.74 ಹಾಗೂ ಹಾಸನ ಜಿಲ್ಲೆಯಲ್ಲಿ ಶೇ.85.9ರಷ್ಟುಮತದಾನವಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ.
+++
ಸಣ್ಣಪುಟ್ಟಗೊಂದಲ:
ಮತದಾರರ ಪಟ್ಟಿಅದಲು-ಬದಲಾಗಿ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಹೆಬ್ಬಾಳು ಗ್ರಾಮದ 1 ಮತ್ತು 2ನೇ ಕ್ಷೇತ್ರದಲ್ಲಿ ಮತದಾನ ಮುಂದೂಡಿಕೆ ಮಾಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಶ್ರೀಚಂದ್ ಗ್ರಾಮ ಪಂಚಾಯಿತಿ ಎರಡನೇ ವಾರ್ಡ್ನಲ್ಲಿ ಅಭ್ಯರ್ಥಿಯ ಚಿಹ್ನೆ ಬದಲಾಗಿದೆ. ಅಭ್ಯರ್ಥಿ ಪ್ರಚಾರ ಮಾಡಿದ ಚಿಹ್ನೆ ಒಂದಾದರೆ, ಮತದಾನದ ವೇಳೆ ಮತಪತ್ರದಲ್ಲಿ ಬೇರೆಯ ಚಿಹ್ನೆ ಮುದ್ರಣವಾಗಿತ್ತು. ಹಲ್ಲುಜ್ಜುವ ಪೇಸ್ಟ್ ಬದಲು ಬ್ರಷ್ ಚಿಹ್ನೆ ಮುದ್ರಣವಾಗಿದ್ದರಿಂದ ಕೆಲಕಾಲ ಮತದಾನ ಸ್ಥಗಿತವಾಗಿತ್ತು. ಚುನಾವಣಾಧಿಕಾರಿ ಮಧ್ಯಪ್ರವೇಶಿಸಿ ಅಭ್ಯರ್ಥಿ ದೂರು ನೀಡಿದರೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿ ಮತದಾನ ಪ್ರಕ್ರಿಯೆ ಮುಂದುವರಿಸಿದರು.
ಪಿಸ್ತೂಲು ಪತ್ತೆ, ಅಭ್ಯರ್ಥಿ ಆತ್ಮಹತ್ಯೆ:
ಬೆಳಗಾವಿ ಜಿಲ್ಲೆಯ ದೇಸೂರು ಗ್ರಾಮದಲ್ಲಿ ಮತಗಟ್ಟೆಗೆ ನಿಯೋಜನೆಯಾಗಿದ್ದ ಅಧಿಕಾರಿಯೊಬ್ಬರ ಬಳಿ ಪಿಸ್ತೂಲು ಪತ್ತೆಯಾಗಿದ್ದು, ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇನ್ನು, ಧಾರವಾಡ ತಾಲೂಕಿನ ಗರಗ ಗ್ರಾಮದ ಎರಡನೇ ವಾರ್ಡ್ನ ಅಭ್ಯರ್ಥಿ ದಾಮೋದರ ಯಲಿಗಾರ ಎಂಬುವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾರಣ ತಿಳಿದುಬಂದಿಲ್ಲವಾದರೂ ಸೋಲಿನ ಭೀತಿ ಇರಬಹುದು ಎಂದು ಶಂಕಿಸಲಾಗಿದೆ.
ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯೋಗ ಸಾಕಷ್ಟುಪೊಲೀಸ್ ಬಂದೋಬಸ್್ತ ವ್ಯವಸ್ಥೆ ಮಾಡಿತ್ತು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 23, 2020, 7:40 AM IST