ಪ್ರಧಾನಿ ನರೇಂದ್ರ ಮೋದಿ ಅವರು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ಬಾಲಗಂಗಾಧರನಾಥ ಸ್ವಾಮೀಜಿಯವರ ‘ಶ್ರೀ ಗುರು ಭೈರವೈಕ್ಯ’ ಮಂದಿರವನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ, 'ವಿಕಸಿತ ಭಾರತ' ನಿರ್ಮಾಣಕ್ಕಾಗಿ ದೇಶದ ಜನರು ಪಾಲಿಸಬೇಕಾದ ಒಂಬತ್ತು ಪ್ರಮುಖ ಸಂಕಲ್ಪಗಳ ಬಗ್ಗೆ ಅವರು ಕರೆ ನೀಡಿದರು.
ಮಂಡ್ಯ ಮಂಜುನಾಥ
‘ವಿಕಸಿತ ಭಾರತ’ ಸಾಕಾರಕ್ಕಾಗಿ ದೇಶದ ಜನರು ಒಂಬತ್ತು ಸಂಕಲ್ಪಗಳನ್ನು ಕೈಗೊಳ್ಳುವುದು ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಅಲ್ಲದೆ, ಆದಿಚುಂಚನಗಿರಿ ಮಠದ ಪರಂಪರೆಯನ್ನು ಕೊಂಡಾಡಿದ್ದಾರೆ.
ಇದೇ ಮೊದಲ ಬಾರಿಗೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿ ಚುಂಚನಗಿರಿಗೆ ಭೇಟಿ ನೀಡಿದ ಮೋದಿ, ಪ್ರಸಿದ್ಧ ನಾಥ ಪಂಥದ ಶೈವ ಮಠವಾದ ಆದಿಚುಂಚನಗಿರಿಯ 71ನೇ ಪೀಠಾಧಿಪತಿ ಬಾಲಗಂಗಾಧರನಾಥ ಸ್ವಾಮೀಜಿಯವರ ‘ಶ್ರೀ ಗುರು ಭೈರವೈಕ್ಯ’ ಮಂದಿರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕನ್ನಡಲ್ಲಿ ಮಾತು ಆರಂಭಿಸಿದ ಪ್ರಧಾನಿ
‘ಕರ್ನಾಟಕದ ಸಹೋದರ-ಸಹೋದರಿಯರಿಗೆ ನನ್ನ ನಮಸ್ಕಾರಗಳು’ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ, ‘ವಿಕಸಿತ ಭಾರತ’ ಹಾಗೂ ‘ವಿಕಸಿತ ಕರ್ನಾಟಕ’ದ ಸಾಕಾರಕ್ಕೆ 9 ಸಂಕಲ್ಪಗಳನ್ನು ತೊಡುವಂತೆ ಜನರಿಗೆ ಕರೆ ನೀಡಿದರು. ‘ಜಲ ಸಂರಕ್ಷಣೆ, ತಾಯಿಯ ಹೆಸರಿನಲ್ಲಿ ಸಸಿ ನೆಡುವುದು, ಸ್ವಚ್ಛತೆ, ಸ್ವದೇಶಿ ಮತ್ತು ಆತ್ಮನಿರ್ಭರ, ಪ್ರವಾಸೋದ್ಯಮಕ್ಕೆ ಉತ್ತೇಜನ, ರಾಸಾಯನಿಕ ಮುಕ್ತ ಕೃಷಿ, ಆರೋಗ್ಯ, ಯೋಗ-ಕ್ರೀಡೆ, ಫಿಟ್ನೆಸ್ ಹಾಗೂ ಸೇವಾ ಮನೋಭಾವ’ಗಳು ಭಾರತವನ್ನು ಸದೃಢ, ಸುಂದರ ರಾಷ್ಟ್ರವನ್ನಾಗಿ ನಿರ್ಮಿಸಲು ಪ್ರೇರಕ ಶಕ್ತಿಯಾಗಿವೆ. ಇವೆಲ್ಲವನ್ನೂ ಪಾಲಿಸಿದರೆ ‘ವಿಕಸಿತ ಭಾರತ’ ಹಾಗೂ ‘ವಿಕಸಿತ ಕರ್ನಾಟಕ’ ಸಾಧ್ಯವಾಗಲಿದೆ ಎಂದು ಪ್ರತಿಪಾದಿಸಿದರು.
ಕರ್ನಾಟಕಕ್ಕೆ ಬಂದಾಗಲೆಲ್ಲಾ ನನಗೆ ಪ್ರೇರಣೆ
ತಮ್ಮ ಭಾಷಣದಲ್ಲಿ ಆದಿಚುಂಚನಗಿರಿಯ ಸೇವೆಯನ್ನು ಸ್ಮರಿಸಿದ ಮೋದಿ, ಪ್ರತಿ ಬಾರಿ ಕರ್ನಾಟಕಕ್ಕೆ ಬಂದಾಗಲೆಲ್ಲಾ ನನಗೆ ಪ್ರೇರಣೆ ಸಿಗುತ್ತದೆ. ಜಗತ್ತಿನಲ್ಲಿ ಎಲ್ಲೂ ನಮ್ಮ ತರಹದ ದೊಡ್ಡ ಪರಂಪರೆ ಇಲ್ಲ. ಈ ಮಠದಲ್ಲಿ ನಿರಂತರತೆಯ ರೂಪದಲ್ಲಿ ಪರಂಪರೆ ಮುಂದುವರಿದಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾವಿರಾರು ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ದೂರದೃಷ್ಟಿಯ ಹೆಜ್ಜೆಯನ್ನು ಇಟ್ಟಿದ್ದಾರೆ. ಭೈರವೈಕ್ಯ ಸ್ವಾಮೀಜಿಗಳು ಕೇವಲ ಮನುಷ್ಯರನ್ನು ಮಾತ್ರ ಉದ್ದಾರ ಮಾಡುತ್ತಿಲ್ಲ. ಜೀವ ಸಂಕುಲದ ರಕ್ಷಣೆ ಮಾಡುತ್ತಿದ್ದಾರೆ. ಇಲ್ಲಿ ಅನ್ನ, ಅಕ್ಷರ, ಆರೋಗ್ಯ, ಆಧ್ಯಾತ್ಮ, ಅರಣ್ಯ, ಆಶ್ರಯ, ಆಕಳು, ಅನುಗ್ರಹ, ಅನುಕಂಪ ಸೇರಿ 9 ಸಿದ್ದಾಂತದ ಮೇಲೆ ಕೆಲಸ ಮಾಡಲಾಗುತ್ತಿದೆ. ಇದಕ್ಕಾಗಿ ನಾವು 9 ಸಾಮೂಹಿಕ ಸಂಕಲ್ಪ ತೊಡಬೇಕು ಎಂದು ಹೇಳಿದರು.
ಮೋದಿ ಹೇಳಿದ 9 ಸಂಕಲ್ಪ
1. ನೀರು ಸಂರಕ್ಷಿಸಿ, ಉತ್ತಮ ನಿರ್ವಹಣೆ
2. ತಾಯಿಯ ಹೆಸರಿನಲ್ಲಿ ಒಂದು ಸಸಿ ನೆಡಿ
3. ಸಾರ್ವಜನಿಕ, ಧಾರ್ಮಿಕ ಸ್ಥಳದಲ್ಲಿ ಸ್ವಚ್ಛತೆ
4. ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸಿ
5. ದೇಶೀಯ ಪ್ರವಾಸೋದ್ಯಮ ಪ್ರೋತ್ಸಾಹಿಸಿ
6. ರಾಸಾಯನಿಕರಹಿತ ನೈಸರ್ಗಿಕ ಕೃಷಿ ಮಾಡಿ
7. ಸಿರಿಧಾನ್ಯ, ಸ್ವಸ್ಥ ಆಹಾರ, ಕಮ್ಮಿ ಎಣ್ಣೆ ಬಳಸಿ
8. ಯೋಗ ಮತ್ತು ಫಿಟ್ನೆಸ್ ಅಳವಡಿಸಿಕೊಳ್ಳಿ.
9. ಸೇವಾ ಮನೋಭಾವ ಬೆಳೆಸಿಕೊಳ್ಳಿ.

