ವಿದ್ಯುತ್ ಬಿಲ್ ಮುಂದೂಡಿ ಎಂದವನಿಗೆ ಬಿತ್ತು 50 ಸಾವಿರ ರೂ. ದಂಡ!
ವಿದ್ಯುತ್ ಬಿಲ್ 3 ತಿಂಗಳು ಮುಂದೂಡಿ ಎಂದ ಅರ್ಜಿದಾರಗೆ .50 ಸಾವಿರ ದಂಡ| ಸಾರ್ವಜನಿಕ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು(ಏ.11): ಲಾಕ್ಡೌನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಗ್ರಾಹಕರು ಶುಲ್ಕ ಪಾವತಿ ಮಾಡುವುದನ್ನು ಮೂರು ತಿಂಗಳ ಕಾಲ ತಾತ್ಕಾಲಿಕವಾಗಿ ಮುಂದೂಡುವಂತೆ ಸರ್ಕಾರ ಮತ್ತು ಕರ್ನಾಟಕ ವಿದ್ಯುತ್ ನಿಯಂತ್ರಣ ಪ್ರಾಧಿಕಾರಕ್ಕೆ ನಿರ್ದೇಶಿಸಲು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾ ಮಾಡಿರುವ ಹೈಕೋರ್ಟ್ ಅರ್ಜಿದಾರರಿಗೆ 50 ಸಾವಿರ ರು. ದಂಡ ವಿಧಿಸಿದೆ.
ಆದರೆ, ಗ್ರಾಹಕರು ಮೂರು ತಿಂಗಳ ಕಾಲ ವಿದ್ಯುತ್ ಶುಲ್ಕ ಪಾವತಿ ಮಾಡುವುದನ್ನು ಮುಂದೂಡಲು ಕೋರಿ ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಪರಿಗಣಿಸಲು ಸರ್ಕಾರ ಮತ್ತು ಕರ್ನಾಟಕ ವಿದ್ಯುತ್ ನಿಯಂತ್ರಣ ಪ್ರಾಧಿಕಾರಕ್ಕೆ ಈ ಆದೇಶ ಯಾವುದೇ ಅಡ್ಡಿ ಉಂಟು ಮಾಡುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ಶುಕ್ರವಾರ ಸದರಿ ಇದೇ ವೇಳೆ ಸ್ಪಷ್ಟಪಡಿಸಿದೆ.
ತಾತನ ಕೈ ಜಾರಿ 2ನೇ ಮಹಡಿಯಿಂದ ಬಿದ್ದು 6 ತಿಂಗಳ ಮಗು ಸಾವು!
‘ವಿದ್ಯುತ್ ಶುಲ್ಕ ಪಾವತಿಸಲು ವಿವಿಧ ಮಾರ್ಗಗಳನ್ನು ಸರ್ಕಾರ ನೀಡಿದೆ. ಶುಲ್ಕ ಪಾವತಿಸದಿದ್ದರೆ ವಿದ್ಯುತ್ ಕಡಿತ ಮಾಡಲಾಗುವುದು ಎಂದು ಕೂಡ ಸರ್ಕಾರ ಹೇಳಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತಾತ್ಕಾಲಿಕವಾಗಿ ಶುಲ್ಕ ವಸೂಲಿ ಮುಂದೂಡಿಕೆ ಕೋರಿ ಸಲ್ಲಿಸಿರುವ ಅರ್ಜಿ ನಿಷ್ೊ್ರಯೋಜನಕಾರಿಯಾಗಿದ್ದು, ಯಾವುದೇ ಸಾರ್ವಜನಿಕ ಹಿತಾಸಕ್ತಿ ಹೊಂದಿಲ್ಲ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟು, ಅರ್ಜಿದಾರರಾದ ಪಿ.ಸಿ.ರಾವ್ ಹಾಗೂ ಕೆ.ಗಣೇಶ್ ನಾಯಕ್ ಅವರಿಗೆ ದಂಡ ವಿಧಿಸಿದೆ.
ಅರ್ಜಿದಾರರು ಈ 50 ಸಾವಿರ ದಂಡ ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪಾವತಿಸಿ, ಆ ಕುರಿತ ದಾಖಲೆಯನ್ನು ಎರಡು ವಾರದೊಳಗೆ ರಿಜಿಸ್ಟ್ರಾರ್ ಅವರಿಗೆ ಇ-ಮೇಲ್ ಮೂಲಕ ಕಳಿಸಿಕೊಡಬೇಕೆಂದು ಹೈಕೋರ್ಟ್ ನಿರ್ದೇಶಿಸಿದೆ.