ಗೌಡ್ರ ಫ್ಯಾಮಿಲಿ ಟ್ರೋಲ್: ಅಡ್ಮಿನ್ ಬಂಧಿಸಿದ್ದ ಪೊಲೀಸರನ್ನೇ ತನಿಖೆ ಮಾಡಿ ಎಂದ ಕೋರ್ಟ್
ಮಾಜಿ ಪ್ರಧಾನಿ ಎಚ್ಡಿಡಿ ಕುಟುಂಬದ ಬಗ್ಗೆ ಟ್ರೋಲ್ ಹಾಕಿದ್ದ ಪ್ರಕರಣ| ಮೈತ್ರಿ ಸರ್ಕಾರಕ್ಕೆ ಛೀಮಾರಿ ಹಾಕಿದ ಹೈಕೋರ್ಟ್..! ಅಧಿಕಾರ ದುರುಪಯೋಗ ಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಕ್ಕೆ ಗರಂ| ಪ್ರಕರಣದ ಎಫ್ಐಆರ್ ರದ್ದುಗೊಳಿಸಿ ಆದೇಶ
ಬೆಂಗಳೂರು, [ಅ.11]: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಿಖಿಲ್, ಕುಮಾರಸ್ವಾಮಿ, ದೇವೇಗೌಡ ಸೇರಿದಂತೆ ಜೆಡಿಎಸ್ ಮುಖಂಡರನ್ನು ಟ್ರೋಲ್ ಮಾಡಿದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಕುಟುಂಬದ ವಿರುದ್ಧ ‘ಟ್ರೋಲ್ ಮಗ’ ಪೇಜ್ ನಿಂದ ಟ್ರೋಲ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ‘ಟ್ರೋಲ್ ಮಗ’ ಪೇಜ್ ಅಡ್ಮಿನ್ ಆಗಿರುವ ಎಸ್. ಜಯಕಾಂತ್ ಎಂಬುವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿತ್ತು. ಅಷ್ಟೇ ಅಲ್ಲದೇ ಜಯಕಾಂತ್ ಅವರನ್ನು ಬಂಧಿಸಲಾಗಿತ್ತು.
ಸಿಎಂ ವಿರುದ್ಧ ಪೋಸ್ಟ್ - ಟ್ರೋಲ್ ಮಗ ಅಡ್ಮಿನ್ ಅರೆಸ್ಟ್ : ಹೈ ಕೋರ್ಟ್ ಗರಂ
ಇದೀಗ ಜಯಕಾಂತ್ ಮೇಲೆ ದಾಖಲಿಸಿರುವ ಎಫ್ ಐಆರ್ ಅನ್ನು ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ಇಂದು [ಶುಕ್ರವಾರ] ಮಹತ್ವದ ಆದೇಶ ನೀಡಿದೆ. ಪ್ರಕರಣದ ತನಿಖೆಯಲ್ಲಿ ಭಾಗಿಯಾಗಿದ್ದ ಪೊಲೀಸರನ್ನು ತನಿಖೆಗೊಳಪಡಿಸಿ ಆದೇಶಿದೆ. ಹಾಗೆಯೇ ಮ್ಯಾಜಿಸ್ಟ್ರೇಟ್ ಮೇಲೆಯೂ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜೆನರಲ್ಗೆ ಸೂಚನೆ ನೀಡಿದೆ.
ಫೇಸ್ ಬುಕ್ ಪೇಜ್ ಅಡ್ಮಿನ್ನನ್ನು ಅಕ್ರಮವಾಗಿ ಬಂಧನದಲ್ಲಿ ಇಟ್ಟುಕೊಂಡಿದ್ದೀರಾ.!? ಹಾಗಾದ್ರೆ ಕೂಡಲೇ 1 ಲಕ್ಷ ರೂಪಾಯಿ ದಂಡ ಪಾವತಿಸಲು ಆದೇಶ ನೀಡಿದ್ದು, ಪ್ರಕರಣದ ತನಿಖೆಯಲ್ಲಿ ಭಾಗಿಯಾಗಿದ್ದ ಆಫೀಸರ್ಗಳಿಂದ ದಂಡ ವಸೂಲಿ ಮಾಡಬೇಕು ಎಂದು ನ್ಯಾ.ಪಿ.ಎಸ್.ದಿನೇಶ್ ಕುಮಾರ್ ಏಕಸದಸ್ಯ ಪೀಠ ಸೂಚಿಸಿದೆ. ‘ಟ್ರೋಲ್ ಮಗ’ ಪೇಜ್ ಅಡ್ಮಿನ್ ಆಗಿರುವ ಎಸ್. ಜಯಕಾಂತ್ ಪರ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದರು.
ಟ್ರೋಲ್ ಮಗ ಅಡ್ಮಿನ್ಗಾಗಿ ಪೊಲೀಸರ ತೀವ್ರ ಹುಡುಕಾಟ!
ಟ್ರೋಲ್ ಮಾಡಿದ್ದರ ಬಗ್ಗೆ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಒಂದು ಎಫ್ಐಆರ್ಗೆ ಜಾಮೀನು ತಂದು ತೋರಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಮತ್ತೊಂದು ಎಫ್ ಐಆರ್ ದಾಖಲಿಸಿದ್ದರು. ಈ ಇದನ್ನು ಪ್ರಶ್ನಿಸಿ ಟ್ರೋಲ್ ಪೇಜ್ ಅಡ್ಮಿನ್ ಜಯಕಾಂತ್ ಕೋರ್ಟ್ ಮೆಟ್ಟಿಲೇರಿದ್ದರು.