ರಾಜ್ಯದ ಏರ್‌ಪೋರ್ಟ್‌ಗಳಿಗೆ ಐತಿಹಾಸಿಕ ಸಾಧಕರ ಹೆಸರು| ಆಯಾ ಪ್ರದೇಶದ ಸಾಧಕರ ವಿವರ ಕೇಳಿದ ಸರ್ಕಾರ| ಎಚ್‌ಡಿಕೆ ಪ್ರಸ್ತಾವನೆ ಬಗ್ಗೆ ನೆನಪಿಸಿ ಡೀಸಿಗಳಿಗೆ ಪತ್ರ|

ಜಗದೀಶ ವಿರಕ್ತಮಠ

Add Asianetnews Kannada as a Preferred SourcegooglePreferred

ಬೆಳಗಾವಿ[ಜ.09]: ರಾಜ್ಯದ ಐದು ಜಿಲ್ಲೆಗಳ ವಿಮಾನ ನಿಲ್ದಾಣಗಳಿಗೆ ಆಯಾ ಪ್ರದೇಶದ ಐತಿಹಾಸಿಕ ಸಾಧಕರ ಹೆಸರು ಮರುನಾಮಕರಣ ಮಾಡುವ ಕಾರ್ಯಕ್ಕೆ ಸರ್ಕಾರ ಮತ್ತೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಆಯಾ ಪ್ರದೇಶ ವ್ಯಾಪ್ತಿಯ ಇತಿಹಾಸ ಪ್ರಸಿದ್ಧ ಹೆಸರುಗಳನ್ನು ಗುರುತಿಸಿ ಮಾಹಿತಿ ಒದಗಿಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಗಳು ಜ.7ರಂದು ಪತ್ರ ಬರೆದಿದ್ದಾರೆ.

ವಿಮಾನ ನಿಲ್ದಾಣಗಳಿಗೆ ಐತಿಹಾಸಿಕ ಸಾಧಕರ ಹೆಸರನ್ನು ಸೂಚಿಸುವಂತೆ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಈ ಮೊದಲೇ ನಿರ್ದೇಶಿತ್ತು ಎಂದು ತಿಳಿದುಬಂದಿದ್ದು, ಅಧಿಕಾರಿಗಳಿಂದ ಸೂಕ್ತ ಪ್ರತಿಕ್ರಿಯೆ ಬಾರದ ಹಿನ್ನೆಲೆ ಇದೀಗ ಮತ್ತೊಮ್ಮೆ ಇದನ್ನು ನೆನಪಿಸಿ ಈಗ ಬಿಜೆಪಿ ಸರ್ಕಾರ ಪತ್ರ ಬರೆದಿದೆ.

ಏರ್ಪೋರ್ಟ್‌ ಬಳಿ 120 ಅಡಿ ಅತ್ತರಕ್ಕೆ ಕೆಂಪೇಗೌಡ ಪ್ರತಿಮೆ ನಿರ್ಮಾಣ

ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಈಗಾಗಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ. ಇನ್ನುಳಿದ ಮಂಗಳೂರು, ಮೈಸೂರು, ಹುಬ್ಬಳ್ಳಿ (ಧಾರವಾಡ), ಬೆಳಗಾವಿ ಹಾಗೂ ಕಲಬುರಗಿ ವಿಮಾನ ನಿಲ್ದಾಣಗಳನ್ನು ಆಯಾ ಜಿಲ್ಲೆಯ ಹೆಸರಿನಲ್ಲೇ ಕರೆಯಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ನಮ್ಮ ಜಿಲ್ಲೆಯಲ್ಲಿರುವ ವಿಮಾನ ನಿಲ್ದಾಣಗಳಿಗೂ ನಮ್ಮ ಭಾಗದ ಐತಿಹಾಸಿಕ ವ್ಯಕ್ತಿಗಳ ಹೆಸರನ್ನು ನಾಮಕರಣ ಮಾಡುವಂತೆ ಅನೇಕ ಜನಪ್ರತಿಧಿಗಳು ಆಗ್ರಹಿಸಿದ್ದರು. ವಿವಿಧ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಒತ್ತಡ ಹೆಚ್ಚಾಗುತ್ತಿದ್ದಂತೆ, ರಾಜ್ಯದಲ್ಲಿರುವ ವಿಮಾನ ನಿಲ್ದಾಣಗಳಿಗೂ ಆಯಾ ಜಿಲ್ಲೆ ಅಥವಾ ಪ್ರದೇಶದ ಐತಿಹಾಸಿಕ ಸಾಧಕರ ಹೆಸರು ನಾಮಕರಣ ಮಾಡಲು ಸರ್ಕಾರ ಇಚ್ಛಾಶಕ್ತಿ ತೋರಿದೆ. ಈ ಐದು ವಿಮಾನ ನಿಲ್ದಾಣಗಳಿಗೆ ಆಯಾ ಭಾಗದ ಐತಿಹಾಸಿಕ ವ್ಯಕ್ತಿಗಳ ಹೆಸರನ್ನು ನಾಮಕರಣ ಮಾಡಲು ಮುಂದಾಗಿದ್ದು, ಈ ಕುರಿತಂತೆ ಐತಿಹಾಸಿಕ ಸಾಧಕರ ಹೆಸರು, ಸಾಧನೆ ಇನ್ನಿತರರ ಸಮಗ್ರ ಮಾಹಿತಿಗಳನ್ನು ಸಲ್ಲಿಸುವಂತೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸರ್ಕಾರದಿಂದ ಪತ್ರ ತಲುಪಿದೆ.

ಚನ್ನಮ್ಮ, ರಾಯಣ್ಣ ಹೆಸರಿಡಲು ಮುಂದಾಗಿದ್ದ ಎಚ್‌ಡಿಕೆ:

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಸರ್ಕಾರದ ಅವಧಿಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ಹೆಸರನ್ನು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರನ್ನು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವ ಬಗ್ಗೆ ನಿರ್ಧರಿಸಿದ್ದರು. ಕಾರಣಾಂತರದಿಂದ ಇದು ಸ್ಥಗಿತಗೊಂಡಿತ್ತು.

ಕೆಂಪೇಗೌಡ ಏರ್‌ಪೋರ್ಟ್ ರಾಡಾರ್‌ನಿಂದ ವಾಯುಪಡೆ ವಿಮಾನಗಳ ಮೇಲೆ ಕಣ್ಗಾವಲು!