ನಾರಾಯಣಗೌಡ ಯಾರೆಂದು ಕೇಳಿದ್ದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಬೆಳಗಾವಿಯಲ್ಲಿ ಕರವೇ ಕಾರ್ಯಕರ್ತರು ಬಿಸಿ ಮುಟ್ಟಿಸಿದರು.

ಬೆಳಗಾವಿ, (ಜ.18): ನಾರಾಯಣಗೌಡ ಯಾರೆಂದು ಪ್ರಶ್ನಿಸಿದ್ದಕ್ಕೆ ಆರೋಗ್ಯ ಸಚಿವ ಸುಧಾಕರ್​ಗೆ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಘೇರಾವ್ ಹಾಕಿರುವ ಘಟನೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದಿದೆ. 

Add Asianetnews Kannada as a Preferred SourcegooglePreferred

ಸಚಿವ ಡಾ.ಕೆ.ಸುಧಾಕರ್ ಕಾರಿಗೆ ಘೇರಾವ್ ಹಾಕಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಕಾರಿನ ಎದುರು ಕುಳಿತು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಸಚಿವರ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ, ಇಲಾಖೆ ಪ್ರಗತಿ ಪರಿಶೀಲನೆ ಸಭೆ ಮುಗಿಸಿ ಹೊರಬಂದಿದ್ದ ಸಚಿವ ನಾನು ನಿಪ್ಪಾಣಿ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲವೆಂದ ಸಮಜಾಯಿಷಿ ನೀಡಲು ಮುಂದಾದರು.

ಈ ನಡುವೆ, MESನವರು ಕರೆದರೂ ಕಾರ್ಯಕ್ರಮದಲ್ಲಿ ಭಾಗಿಯಾಗ್ತೀರಾ? ಎಂದು ಸಚಿವ ಡಾ.ಕೆ.ಸುಧಾಕರ್‌ಗೆ ಕರವೇ ಕಾರ್ಯಕರ್ತರು ಪ್ರಶ್ನೆ ಹಾಕಿದರು. ಜೊತೆಗೆ, ನಾರಾಯಣಗೌಡ ಯಾರೆಂದು ಕೇಳಿದ್ದೀರಲ್ಲಾ ಎಂದು ಗರಂ ಆದರು.

ಕನ್ನಡಿಗರು ಶಾಂತಿಪ್ರಿಯರು ಹಾಗಂತ ನಮ್ಮ ತಾಳ್ಮೆ ಪರೀಕ್ಷಿಸಬೇಡಿ; ಠಾಕ್ರೆಗೆ ಸಿದ್ದು ಟಕ್ಕರ್

ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಸಚಿವ ಸುಧಾಕರ್​ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ವೇಳೆ ಮರಾಠಿ ಭಾಷೆ ಬಳಕೆಯಾದ ಬಗ್ಗೆ ಎಲ್ಲೆಡೆಯಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. 

ಹಾಗಾಗಿ, ಮರಾಠಿಮಯ ಕಾರ್ಯಕ್ರಮದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಸಚಿವೆ ರಾಜೀನಾಮೆ ನೀಡುವಂತೆ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಆಗ್ರಹಿಸಿದ್ದರು. ಈ ಕುರಿತು ಸಚಿವ ಸುಧಾಕರ್​ಗೆ ಪ್ರಶ್ನಿಸಿದ್ದಕ್ಕೆ ಟಿ.ಎ.ನಾರಾಯಣಗೌಡ ಯಾರೆಂದು ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸುಧಾಕರ್, ನಾರಾಯಣಗೌಡ ಗೊತ್ತಿಲ್ಲಪ್ಪ ಎಂದು ಹೇಳಿದ್ದೆ. ಕರ್ನಾಟಕದಲ್ಲಿ ಎಷ್ಟು ಜನ ನಾರಾಯಣಗೌಡರು ಇದ್ದಾರೆ. ಯಾರು ಹೇಳಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಮಜಾಯಿಶಿ ನೀಡಿದರು. ಇದಕ್ಕೆ ಒಪ್ಪದ ಕಾರ್ಯಕರ್ತರು ತಮ್ಮ ಪ್ರತಿಭಟನೆ ಮುಂದುವರಿಸಿದರು. ಕೊನೆಗೆ, ಪೊಲೀಸರು ಕಾರ್ಯಕರ್ತರನ್ನ ಎಳೆದು ಹಾಕಿ ಕಾರು ಹೋಗಲು ಅವಕಾಶ ನೀಡಿದರು.