ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರಿಗೆ ನೆಗಡಿ ಮತ್ತು ಜ್ವರ ಇದೆ. ಅವರ ಅನಾರೋಗ್ಯದ ಕುರಿತು ಭಕ್ತರು ಮತ್ತು ಸಾರ್ವಜನಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಈ ಕುರಿತು ಸ್ವತಃ ಸ್ವಾಮೀಜಿ ಅವರು ಮಠದ ಆಪ್ತರೊಂದಿಗೆ ಭೇಟಿಯಾಗಿ ಮಾತನಾಡಿದ್ದಾರೆ.

ವಿಜಯಪುರ (ಡಿ.10): ವಿಜಯಪುರದ ಜೀವಂತ ದೇವರು ಎಂದು ಪ್ರಸಿದ್ಧವಾಗಿರುವ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರಿಗೆ ನೆಗಡಿ ಮತ್ತು ಜ್ವರ ಇದೆ. ಅವರ ಅನಾರೋಗ್ಯದ ಕುರಿತು ಭಕ್ತರು ಮತ್ತು ಸಾರ್ವಜನಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಆಶ್ರಮದ ಮೂಲಗಳಿಂದ ತಿಳಿದುಬಂದಿದೆ.

Add Asianetnews Kannada as a Preferred SourcegooglePreferred

ಸಿದ್ದೇಶ್ವರ ಸ್ವಾಮೀಜಿ ಅವರು ವಯೋಸಹಜವಾಗಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಬೆಳಗ್ಗೆ ಸಾಮಾನ್ಯವಾಗಿ ಆಶ್ರಮದ ಆವರಣದಲ್ಲಿ ವಾಯು ವಿಹಾರ ಮಾಡಿದ್ದಾರೆ. ಆದರೆ, ಈಗ ಚಳಿಗಾಲ ಬಂದಿದ್ದು, ಸೈಕ್ಲೋನ್‌ ವಾತಾವರಣ ಇರುವುದರಿಂದ ಚಳಿ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನೆಗಡಿ ಮತ್ತು ಜ್ವರ ಬಂದಿದೆ. ಈಗ ಅವರ ಆರೋಗ್ಯವು ಸ್ಥಿರವಾಗಿದ್ದು, ಭಕ್ತರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಯಾವುದೇ ವದಂತಿಗೆ ಕಿವಿಗೊಡಬೇಡಿ ಎಂದು ಜ್ಞಾನ ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಮಾಹಿತಿ ನೀಡಿದ್ದರು.

ಮಾಧ್ಯಮಗಳ ಮುಂದೆ ಹಾಜರು: ನನಗೆ ನೆಗಡಿ ಮತ್ತು ಜ್ವರ ಗಂಭೀರ ಸಮಸ್ಯೆ ಕಾಣಿಸಿಕೊಂಡಿಲ್ಲ. ಯಾರೊಬ್ಬರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಸ್ವಾಮೀಜಿ ಅನಾರೋಗ್ಯ ಬಗ್ಗೆ ಚರ್ಚೆಯ ಬೆನ್ನಲ್ಲೇ ಮಾಧ್ಯಮ ವರದಿಗಾರರು ಆಶ್ರಮದ ಮುಂದೆ ಹಾಜರಾಗಿದ್ದರು. ಈ ಕುರಿತು ಯಾವುದೇ ಕ್ಯಾಮರಾಗಳೊಂದಿಗೆ ಮಾತನಾಡದೇ ವರದಿಗಾರನ್ನು ಆಶ್ರಮದೊಳಗೆ ಕರೆದು ತಮ್ಮ ಆರೋಗ್ಯದ ಬಗ್ಗೆ ಯಾವುದೇ ಸಮಸ್ಯೆಯಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಇನ್ನು ಕೆಲವು ಭಕ್ತರು ಮತ್ತು ಮಠದ ಆಪ್ತರು ಆಗಮಿಸಿದ್ದು, ಅವರನ್ನೂ ಕೂಡ ಭೇಟಿಯಾಗಿದ್ದಾರೆ ಎಂದು ತಿಳಿದುಬಂದಿದೆ. 

ಇಂತಹ ಪ್ರಧಾನಿ ಸಿಕ್ಕಿದ್ದು ಈ ದೇಶಕ್ಕೆ ಸುದೈವ; ಮೋದಿಗೆ ಸಿದ್ದೇಶ್ವರ ಶ್ರೀಗಳ ಹಾರೈಕೆ

ವರ್ಷಾರಂಭದಲ್ಲಿ ಕಾಣಿಸಿಕೊಂಡಿದ್ದ ಅನಾರೋಗ್ಯ: ಈ ವರ್ಷದ ಆರಂಭದಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದಲ್ಲಿ 'ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ'ಯಿಂದ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮಕ್ಕೆಂದು ಬಂದಿದ್ದ ಸಿದ್ದೇಶ್ವರ ಸ್ವಾಮೀಜಿ ಅವರು ಜ.10ರಂದು ತಮಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದ ಭಕ್ತರೊಬ್ಬರ ತೋಟದ ಮನೆಯಲ್ಲಿ ಜಾರಿ ಬಿದ್ದಿದ್ದರು. ಈ ವೇಳೆ ಬಲ ಭುಜ ಹಾಗೂ ತೊಡೆಯ ಮೇಲ್ಭಾಗದ ಮೂಳೆ ಮುರಿತವಾಗಿತ್ತು. ನೆರೆಯ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕನ್ಹೇರಿಯಲ್ಲಿರುವ ಸಿದ್ಧಗಿರಿ ಮಠದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಇದಾದ ನಂತರ ಎರಡು ತಿಂಗಳವರೆಗೂ ದೀರ್ಘಾವಧಿವರೆಗೆ ವಿಶ್ರಾಂತಿ ಪಡೆದಿದ್ದ ಸ್ವಾಮೀಜಿ ಮಾರ್ಚ ತಿಂಗಳ ಆರಂಭದಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ವಿರುಪಾಕ್ಷಲಿಂಗ ಸಮಾಧಿ ಮಠಕ್ಕೆ ಭೇಟಿ ನೀಡಿ ಅಲ್ಲಿಂದ ಪ್ರವಚನವನ್ನು ಪುನಾರಂಭಿಸಿದ್ದರು.