ಮುರುಘಾ ಮಠದ ಶ್ರೀಗಳ ಬಂಧನ ಬಗ್ಗೆ ಚರ್ಚಿಸಲ್ಲ: ಎಚ್ಡಿಕೆ
ಮುರುಘಾಮಠದ ಶ್ರೀಗಳ ಬಂಧನ ಬಗ್ಗೆ ಚರ್ಚೆ ಮಾಡದಿರುವುದೇ ಸೂಕ್ತವಾಗಿದ್ದು, ಸರ್ಕಾರ ಜವಾಬ್ದಾರಿಯುತವಾಗಿ ಪ್ರಕರಣವನ್ನು ನಿರ್ವಹಿಸಬೇಕು. ಏನೇನು ತೀರ್ಮಾನ ಮಾಡಬೇಕೋ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು (ಸೆ.03): ಮುರುಘಾಮಠದ ಶ್ರೀಗಳ ಬಂಧನ ಬಗ್ಗೆ ಚರ್ಚೆ ಮಾಡದಿರುವುದೇ ಸೂಕ್ತವಾಗಿದ್ದು, ಸರ್ಕಾರ ಜವಾಬ್ದಾರಿಯುತವಾಗಿ ಪ್ರಕರಣವನ್ನು ನಿರ್ವಹಿಸಬೇಕು. ಏನೇನು ತೀರ್ಮಾನ ಮಾಡಬೇಕೋ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ರೀತಿಯ ಘಟನೆ ನಡೆಯಬಾರದಿತ್ತು ಎನ್ನುವುದು ನನ್ನ ಅಭಿಪ್ರಾಯ. ಇದು ತುಂಬಾ ಸೂಕ್ಷ್ಮ ವಿಚಾರ. ಮೊದಲೇ ನಮ್ಮ ರಾಜ್ಯ ಭಾವನಾತ್ಮಕ, ಆಚಾರ-ವಿಚಾರಗಳಲ್ಲಿ ಬೇಯುತ್ತಿದೆ. ಇಂತಹ ವಿಚಾರಗಳಲ್ಲಿ ನಾವು ಚರ್ಚೆ ಮಾಡದಿರುವುದೇ ಸೂಕ್ತ.
ಸರ್ಕಾರದ ಮಟ್ಟದಲ್ಲಿ ಏನು ತನಿಖೆ ಮಾಡಬೇಕೋ ಮಾಡಲಿ. ತನಿಖೆ ವಿಳಂಬದ ವಿಚಾರ ಸರ್ಕಾರಕ್ಕೆ ಸಂಬಂಧಿಸಿದ್ದು, ಈ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡಲ್ಲ ಎಂದು ತಿಳಿಸಿದರು. ಸಚಿವ ಆನಂದ್ ಸಿಂಗ್ ಬೆದರಿಕೆ ಬಗ್ಗೆ ಪ್ರತಿಕ್ರಿಯಿಸಿದ ಎಚ್ಡಿಕೆ, ಬೆದರಿಕೆ ಹಾಕಿ, ಹೆದರಿಸಿ, ಪ್ರಾಣ ಬೆದರಿಕೆ ಒಡ್ಡಿದವರನ್ನು ಸಚಿವರು ಎಂದು ಬಿಡಲಾಗಿದೆ. ಇದರಿಂದ ಸರ್ಕಾರದ ಆಡಳಿತ ದುರುಪಯೋಗವಾಗಿದೆ. ಈ ವಿಚಾರವನ್ನು ತಿಳಿದುಕೊಂಡು ವಿಧಾನಸಭೆ ಕಲಾಪದಲ್ಲಿ ಮಾತನಾಡುತ್ತೇನೆ ಎಂದರು.
ರಾಮನಗರ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಅಗತ್ಯ: ಎಚ್.ಡಿ.ಕುಮಾರಸ್ವಾಮಿ
ಎಚ್ಡಿಕೆ-ಸಿಂಹ ವಾಕ್ಸಮರ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ಅವಾಂತರದ ವಿಚಾರವಾಗಿ ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಡುವೆ ತೀವ್ರ ವಾಕ್ಸಮರ ನಡೆದಿದೆ. ರಾಮನಗರ ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಾಪ್ ಸಿಂಹ ಈಜಾಡಬಹುದು ಎಂದು ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದರೆ, ಪ್ರತಾಪ್ ಸಿಂಹ ಅವರು, ರಾಮನಗರ ಜಿಲ್ಲೆಯ ಎಲ್ಲ ಕೆರೆ, ನಾಲೆಗಳ ಸರ್ವೆ ಮಾಡಿಸಿ ಒತ್ತುವರಿ ತೆರವು ಮಾಡಿಸಿ ಎಂದು ತಿರುಗೇಟು ನೀಡಿದ್ದಾರೆ.
ರಾಮನಗರ ಜಿಲ್ಲೆ ಬಿಡದಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ವಾಹನ ಓಡಾಡೋಕೆ ರಸ್ತೆ ಮಾಡಿ ಅಂದ್ರೆ, ಸ್ವಿಮ್ಮಿಂಗ್ ಪೂಲ್ ಮಾಡಿ ಹೋಗಿದ್ದಾರೆæ. ಇದೇನಾ ಸಂಸದ ಪ್ರತಾಪ್ ಸಿಂಹ ಅವರ ಚೆಂದದ ರಸ್ತೆ. ಅವರೇ ಹೈವೆಗೆ ಬಂದಿದ್ರೆ ಸ್ವಿಮ್ ಮಾಡಲಿಕ್ಕೆ ಚೆನ್ನಾಗಿ ನೀರು ನಿಂತಿತ್ತು ಎಂದು ಕಟಕಿಯಾಡಿದರು.
ಹೈವೆಯಲ್ಲಿ ಉತ್ತಮವಾದ ಕೆಲಸ ಏನಾಗಿದೆ ಎಂದು ಬಂದು ನೋಡುವುದಕ್ಕೆ ಹೇಳಿ. ಇವರೇ ನಿಂತು ಫೋಟೊ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿಸಿಕೊಂಡಿದ್ರಲ್ಲ. ಏನೊ ಅವರೇ ರಸ್ತೆ ನಿರ್ಮಾಣ ಮಾಡಿರುವ ರೀತಿ ಫೋಟೊ ತೆಗೆಸಿಕೊಂಡಿದ್ದರು. ಅಧಿಕಾರಿಗಳ ಸಭೆಯನ್ನೂ ಮಾಡಿದ್ದರು. ಮಧ್ಯಸ್ಥಿಕೆ ವಹಿಸಿದ್ದರು. ಈಗ ಸಂಗಬಸವನದೊಡ್ಡಿ ಬಳಿ ಬಂದಿದ್ದರೆ ಸ್ವಿಮ್ಮಿಂಗ್ ಮಾಡಬಹುದಿತ್ತು ಎಂದು ಲೇವಡಿ ಮಾಡಿದರು. ಕೆರೆ ಒಡೆದಿರೋದರಿಂದ ಈ ರೀತಿ ಆಗಿಲ್ಲ. ಶಾಶ್ವತವಾದ ಕೆಲಸ ಆಗಬೇಕು. ಸಂಸದರು ಇರುವುದು ಸರ್ಟಿಫಿಕೇಟ್ ಕೊಡುವುದಕ್ಕೆ ಅಲ್ಲ. ತಪ್ಪಾಗಿದ್ದರೆ ಸರಿಪಡಿಸಬೇಕು. ಪ್ರತಾಪ್ ಸಿಂಹ ಪ್ರಚಾರ ತಗೆದುಕೊಳ್ಳುವುದು ನಿಲ್ಲಿಸಿ ಜನಪರ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
Ramanagara: ಮಳೆಹಾನಿ ಪ್ರದೇಶಗಳಿಗೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ
ಇದಕ್ಕೆ ಪ್ರತಿಯಾಗಿ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಪ್ರತಾಪ್ಸಿಂಹ ಅವರು, ಗೌರವಾನ್ವಿತ ಕುಮಾರಣ್ಣ ಮತ್ತು ಡಿ.ಕೆ.ಸುರೇಶಣ್ಣ ಅನ್ಯಥಾ ಭಾವಿಸಬೇಡಿ, ಜಿಲ್ಲಾಡಳಿತ, ಕಂದಾಯ ಮತ್ತು ಸಣ್ಣ ನೀರಾವರಿ ಇಲಾಖೆಯ ಮೂಲಕ ರಾಮನಗರ ಜಿಲ್ಲೆಯ ಎಲ್ಲ ಕೆರೆಗಳ ಹಾಗು ನಾಲೆಗಳ ಸರ್ವೇ ಮಾಡಿಸಿ, ಒತ್ತುವರಿ ತೆರವು ಮಾಡಿಸಿ ಕೊಡಿ. ಹೈವೆಯಿಂದ ಎಲ್ಲೆಲ್ಲಿ ಅಡಚಣೆಯಾಗಿದೆ ಅದನ್ನೂ ತೋರಿಸಿ, ಸರಿಪಡಿಸಿಕೊಡುವ ಜವಾಬ್ದಾರಿಯನ್ನು ನನಗೆ ಬಿಡಿ ಎಂದು ಬರೆದಿದ್ದಾರೆ.