ಬೆಂಗ್ಳೂರಲ್ಲಿ ಕೊರೋನಾ ಚಿಕಿತ್ಸೆ ಕ್ಯಾಂಪ್‌?| ಯಲಹಂಕದ ಬಿಎಸ್‌ಎಫ್‌ ಕೇಂದ್ರದಲ್ಲಿ ತುರ್ತು ಪರೀಕ್ಷೆ, ಚಿಕಿತ್ಸೆಗೆ ವ್ಯವಸ್ಥೆ|  ಚೀನಾದಿಂದ ಬಂದ 300 ಮಂದಿಗೆ ಇಲ್ಲಿ ನೆಲೆ: ಕರವೇ ಆಕ್ರೋಶ, ಪ್ರತಿಭಟನೆ ಇದು ನಿಜಾನಾ?

ಬೆಂಗಳೂರು[ಫೆ.13]: ಕೊರೋನಾ ವೈರಸ್‌ ಬಗ್ಗೆ ದೇಶಾದ್ಯಂತ ಕಟ್ಟೆಚ್ಚರ ವಹಿಸಿರುವ ಕೇಂದ್ರ ಸರ್ಕಾರವು ಬೆಂಗಳೂರಿನ ಯಲಹಂಕ ಬಿಎಸ್‌ಎಫ್‌ ಕೇಂದ್ರದಲ್ಲಿ ಶಂಕಿತ ಸೋಂಕಿತರಿಗೆ ತುರ್ತಾಗಿ ಅಗತ್ಯ ಪರೀಕ್ಷೆ ಹಾಗೂ ಚಿಕಿತ್ಸೆ ನೀಡುವ ಸಲುವಾಗಿ ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸಿದೆ ಎಂದು ತಿಳಿದುಬಂದಿದೆ.

Add Asianetnews Kannada as a Preferred SourcegooglePreferred

ದೇಶದಲ್ಲಿ ಅತಿ ಹೆಚ್ಚು ವಿದೇಶಿ ಪ್ರವಾಸಿಗರು ಆಗಮಿಸುವ ಪ್ರಮುಖ ಅಂತರಾಷ್ಟ್ರೀಯ ವಿಮಾನಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಕೇಂದ್ರ ಆರೋಗ್ಯ ಇಲಾಖೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಅತಿ ಹೆಚ್ಚು ವಿದೇಶಿ ಪ್ರವಾಸಿಗರು ಆಗಮಿಸುವ ವಿಮಾನ ನಿಲ್ದಾಣದಲ್ಲಿ ಒಂದಾಗಿರುವ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಶಂಕಿತ ಸೋಂಕು ಪತ್ತೆಯಾದ ವ್ಯಕ್ತಿಗಳನ್ನು ತುರ್ತು ಪರೀಕ್ಷೆ ಹಾಗೂ ಚಿಕಿತ್ಸೆಗೆ ಒಳಪಡಿಸಲು ಯಲಹಂಕ ಬಿಎಸ್‌ಎಫ್‌ ಕೇಂದ್ರದಲ್ಲೂ ವೈದ್ಯಕೀಯ ಶಿಬಿರ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆಗಿದ್ದು ನೆಗಡಿ, ಕೊರೋನಾ ವೈರಸ್ ಎಂದು ಆತ್ಮಹತ್ಯೆಗೆ ಶರಣಾದ!

ದೇಶದಲ್ಲಿ ಈವರೆಗೂ ಕೊರೋನಾ ವೈರಸ್‌ ದೃಢಪಟ್ಟಿಲ್ಲ. ಹೀಗಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಕಡೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಅನಗತ್ಯವಾಗಿ ವದಂತಿಗಳಿಗೆ ಕಿವಿಗೊಡಬಾರದು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.

ಶಿಬಿರಕ್ಕೆ ವಿರೋಧ, ಪ್ರತಿಭಟನೆ:

ಯಲಹಂಕ ಬಿಎಸ್‌ಎಫ್‌ ಕೇಂದ್ರದಲ್ಲಿ ವೈದ್ಯಕೀಯ ಶಿಬಿರಕ್ಕೆ ಸಿದ್ಧತೆ ಮಾಡಿಕೊಂಡಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ವಿರೋಧಿಸಿದ್ದಾರೆ. ಈ ಬಗ್ಗೆ ಬುಧವಾರ ಯಲಹಂಕದ ಕೇಂದ್ರ ಮೀಸಲು ಪೊಲೀಸ್‌ ಪಡೆ (ಬಿಎಸ್‌ಎಫ್‌) ಎದುರು ಪ್ರತಿಭಟನೆ ನಡೆಸಿ, ಯಾವುದೇ ಕಾರಣಕ್ಕೂ ಸೋಂಕು ಶಂಕಿತರನ್ನು ಬೆಂಗಳೂರಿಗೆ ಕರೆ ತರಬಾರದು. ಈ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಇಂತಹ ಪ್ರಯತ್ನ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ನಗರ ಅಧ್ಯಕ್ಷ ಆರ್‌. ಸುರೇಶ್‌ ಮಾತನಾಡಿ, ಚೀನಾದ ಕೊರೋನಾ ಸೋಂಕಿತ ಪ್ರದೇಶದಿಂದ ರಕ್ಷಿಸಲ್ಪಟ್ಟ300ಕ್ಕೂ ಹೆಚ್ಚು ಮಂದಿ ನಮ್ಮ ದೇಶದ ವಿದ್ಯಾರ್ಥಿಗಳನ್ನು ಬೆಂಗಳೂರಿನ ಬಿಎಸ್‌ಎಫ್‌ಗೆ ಕರೆ ತರಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಬಂದಿದೆ. ದೇಶಾದ್ಯಂತ ಹಲವು ಸುರಕ್ಷಿತ ಪ್ರದೇಶಗಳಿದ್ದರೂ 1 ಕೋಟಿಗಿಂತಲೂ ಹೆಚ್ಚು ಜನಸಂಖ್ಯೆಯಿರುವ ಬೆಂಗಳೂರು ನಗರದಲ್ಲಿ ತಂದು ನಿಗಾ ವ್ಯವಸ್ಥೆಯಲ್ಲಿಡುವುದು ತಪ್ಪು ಎಂದು ವಿರೋಧ ವ್ಯಕ್ತಪಡಿಸಿದರು.

ವುಹಾನ್‌ನಲ್ಲಿ ಭಾರೀ ಪ್ರಮಾಣದ ಸಲ್ಫರ್‌: ಕೊರೋನಾಗೆ ಅಸಂಖ್ಯಾತ ಬಲಿ?

ಸುಳ್ಳು ಆರೋಪ

ಚೀನಾದಿಂದ ಕರೆತಂದಿರುವ ವಿದ್ಯಾರ್ಥಿಗಳನ್ನು ಕೇಂದ್ರ ಸರ್ಕಾರವು ಈಗಾಗಲೇ ಪ್ರತ್ಯೇಕ ಸ್ಥಳದಲ್ಲಿಟ್ಟು ಪರೀಕ್ಷೆ ನಡೆಸಿದೆ. ಅವರಲ್ಲಿ ಯಾರಿಗೂ ಕೊರೋನಾ ಇರುವುದು ದೃಢಪಟ್ಟಿಲ್ಲ. ಮೂರು ಬಾರಿ ಪರೀಕ್ಷೆ ನಡೆಸಿದ್ದು, ಎಲ್ಲರಿಗೂ ನೆಗೆಟಿವ್‌ ಬಂದಿದೆ. ಇನ್ನು ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ಕರೆತರುತ್ತಿದ್ದಾರೆ ಎಂಬುದು ಸುಳ್ಳು ವದಂತಿ. ಇಂತಹ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬೇಡಿ.

- ಡಾ| ಪ್ರಕಾಶ್‌ ಕುಮಾರ್‌, ಸಾಂಕ್ರಾಮಿಕ ರೋಗ ವಿಭಾಗದ ಜಂಟಿ ನಿರ್ದೇಶಕ