ರಾಜ್ಯದ ಆರ್ಥಿಕತೆಯನ್ನು ಉತ್ತೇಜಿಸಲು ‘ಸಾರ್ವತ್ರಿಕ ಮೂಲ ಆದಾಯ’ದ ಹೊಸ ಪರಿಕಲ್ಪನೆಯನ್ನು ಪರಿಚಯಿಸುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಐದು ಗ್ಯಾರಂಟಿಗಳ ಜತೆಗೆ ಬಡವರ, ಮಧ್ಯಮ ವರ್ಗದವರ ಆದಾಯ ಮೂಲವನ್ನು ಹೆಚ್ಚಿಸುವ ಆಶಯ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

ವಿಧಾನಸಭೆ (ಜು. 21) :  ರಾಜ್ಯದ ಆರ್ಥಿಕತೆಯನ್ನು ಉತ್ತೇಜಿಸಲು ‘ಸಾರ್ವತ್ರಿಕ ಮೂಲ ಆದಾಯ’ದ ಹೊಸ ಪರಿಕಲ್ಪನೆಯನ್ನು ಪರಿಚಯಿಸುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಐದು ಗ್ಯಾರಂಟಿಗಳ ಜತೆಗೆ ಬಡವರ, ಮಧ್ಯಮ ವರ್ಗದವರ ಆದಾಯ ಮೂಲವನ್ನು ಹೆಚ್ಚಿಸುವ ಆಶಯ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

Add Asianetnews Kannada as a Preferred SourcegooglePreferred

ಗುರುವಾರ ಪ್ರತಿಪಕ್ಷಗಳ ಬಹಿಷ್ಕಾರದ ನಡುವೆಯೇ ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಸರ್ವಧರ್ಮೀಯರನ್ನು ಒಟ್ಟಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಬಜೆಟ್‌ ಮಂಡಿಸಲಾಗಿದೆ. ಶ್ರಮಿಕರ ಜೇಬಿನಲ್ಲಿ ಹಣ ಇರಬೇಕು ಎನ್ನುವ ಮಾದರಿಯೊಂದಿಗೆ ಸರ್ಕಾರ ನಡೆಸಬೇಕು ಎಂಬ ಪ್ರಮುಖ ಧ್ಯೇಯವಾಗಿದೆ. ಬಿಜೆಪಿ ಜನರ ಜೇಬಿಗೆ ಕೈಹಾಕಿ ಕಿತ್ತುಕೊಳ್ಳಬೇಕು ಎಂಬ ಉದ್ದೇಶ ಹೊಂದಿತ್ತು. ಆದರೆ, ಕಾಂಗ್ರೆಸ್‌ ದುಡಿಯುವ ಜನರ ಜೇಬಿಗೆ ಹಣ ಹಾಕಬೇಕು ಎಂದು ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ‘ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆ’ಯಡಿ ಮಾದರಿ ರಾಜ್ಯವನ್ನಾಗಿಸಲಾಗುವುದು ಎಂದು ಪ್ರಕಟಿಸಿದರು.

ಕೆಎಂಎಫ್‌ ಜತೆ ಇಂದು ಸಿಎಂ ಮಹತ್ವದ ಸಭೆ: ಹಾಲಿನ ದರ ₹5 ಏರಿಕೆ ಆಗುತ್ತಾ?

ಸರ್ಕಾರವು ಬಡವರ ಪರವಾಗಿದ್ದು, ಬೆಲೆ ಏರಿಕೆ ಮತ್ತು ನಿರುದ್ಯೋಗದಿಂದ ತತ್ತರಿಸಿರುವ ಜನರ ಜೇಬಿಗೆ ಹಣ ತುಂಬುವ ಕೆಲಸ ಮಾಡಿದ್ದೇವೆ. ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯಡಿ ಹಲವು ದೇಶಗಳು ಅಭಿವೃದ್ಧಿಯಾಗುತ್ತಿವೆ. ಇದೇ ರೀತಿಯಲ್ಲಿ ರಾಜ್ಯವು ಮಾಡಲು ಕ್ರಮ ಕೈಗೊಂಡಿದೆ. ಇದು ಕರ್ನಾಟಕ ಮಾದರಿಯಾಗಿದ್ದು, ಉದ್ಯೋಗ ಸೃಷ್ಟಿಯಾಗಲು ಆರ್ಥಿಕ ಚಟುವಟಿಕೆಗಳು ಅಗತ್ಯ. ಇಲ್ಲದಿದ್ದಾರೆ ಹೂಡಿಕೆಯಾಗುವುದಿಲ್ಲ. ಜನರು ಬೆಲೆ ಏರಿಕೆ, ಇಂಧನ ಬೆಲೆ ಹೆಚ್ಚಳ, ನಿರುದ್ಯೋಗ ಮುಂತಾದ ಸಮಸ್ಯೆಗಳಿಂದ ತತ್ತಿರಿಸಿದ್ದು, ಅವರ ಬದುಕು ಸುಧಾರಿಸುವ ಉದ್ದೇಶದಿಂದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.

ಗ್ಯಾರಂಟಿ ಕಾರ್ಯಕ್ರಮಗಳ ಮೂಲಕ ದೇಶದಲ್ಲಿಯೇ ದೊಡ್ಡ ಮೊತ್ತ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಪ್ರತಿಪಕ್ಷದವರು ಗ್ಯಾರಂಟಿ ಯೋಜನೆ ಕುರಿತು ಇಲ್ಲದ ಟೀಕೆಗಳನ್ನು ಮಾಡಿದರು. ಅಲ್ಲದೇ, ಯೋಜನೆಗಳ ಜಾರಿ ಸಾಧ್ಯವೇ ಇಲ್ಲ ಎಂದರು. ಇದನ್ನು ಸುಳ್ಳಾಗಿಸಿ ಈಗಾಗಲೇ ಮೂರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಗೃಹಲಕ್ಷಿ ಯೋಜನೆಗೆ ನೋಂದಣಿ ಪ್ರಾರಂಭವಾಗಿದೆ. ಯುವನಿಧಿ ಯೋಜನೆ ಬಹುತೇಕ ಡಿಸೆಂಬರ್‌ ತಿಂಗಳಿನಿಂದ ಪ್ರಾರಂಭಿಸುವ ಉದ್ದೇಶವನ್ನಿಟ್ಟುಕೊಳ್ಳಲಾಗಿದೆ. ಎಲ್ಲ ಯೋಜನೆಗಳಿಗೆ ಬಜೆಟ್‌ನಲ್ಲಿ ಅನುದಾನ ಹಂಚಿಕೆ ಮಾಡಲಾಗಿದೆ. ಅನುದಾನ ಕ್ರೋಢೀಕರಣವನ್ನೂ ಸಹ ವಿವರಿಸಲಾಗಿದೆ. ಯೋಜನೆಗಳಿಗೆ ವಾರ್ಷಿಕ ಒಟ್ಟು 52,068 ಕೋಟಿ ರು.ನಷ್ಟುಅಗತ್ಯ ಇದ್ದು, 1.30 ಕೋಟಿ ಕುಟುಂಬಗಳಿಗೆ ಯೋಜನೆಯ ಸೌಲಭ್ಯ ಲಭ್ಯವಾಗಲಿದೆ. ದೇಶದ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಗಾತ್ರದ ಮೊತ್ತವನ್ನು ಜಾತಿ, ಧರ್ಮವನ್ನು ನೋಡದೆ ನೀಡಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಈ ವರ್ಷ ಐದು ಗ್ಯಾರಂಟಿಗಳಿಗೆ 35,410 ಕೋಟಿ ರು. ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.

ಅಂಬೇಡ್ಕರ್‌ ತತ್ವದಲ್ಲಿ ನಂಬಿಕೆ:

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಹೇಳಿದಂತೆ ಸಾಮಾಜಿಕ ಪ್ರಭುತ್ವಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂಬ ಮಾತಿನಲ್ಲಿ ನಮಗೆ ನಂಬಿಕೆ ಇದ್ದು, ಇದಕ್ಕೆ ಬದ್ಧವಾಗಿದೇವೆ. ಬಜೆಟ್‌ ಸಿದ್ದಪಡಿಸುವಾಗ ನಮ್ಮ ಕಣ್ಣಿಗೆ ಅಂಬೇಡ್ಕರ್‌, ಮಹಾತ್ಮ ಗಾಂಧಿ, ಗಾಂಧಿ, ಬುದ್ಧ, ಕುವೆಂಪು, ನಾರಾಯಣ ಗುರು ಅವರ ಆಶಯಗಳು ಕಾಣುತ್ತವೆ. ಕಟ್ಟಕಡೆಯ ವ್ಯಕ್ತಿ ಸಂತುಷ್ಟವಾಗಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಭಾಗೀದಾರರಾಗಬೇಕು. ಅದರ ಫಲವನ್ನು ಎಲ್ಲರೂ ಸಮಾನರಾಗಿ ಹಂಚಿಕೊಳ್ಳಬೇಕು. ಇದನ್ನೇ ಕುವೆಂಪು ಅವರು ಸಮಬಾಳು, ಸಮಪಾಲು ಎಂದಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಮನೆ ಮಹಾಲಕ್ಷ್ಮಿಗೆ ‘ಗೃಹಲಕ್ಷ್ಮಿ’ಯ ಅನುಗ್ರಹ: ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಪಾವತಿಸಬೇಕಿಲ್ಲ..!

ವಾರದಲ್ಲಿ ಎರಡು ದಿನ ಮೊಟ್ಟೆ:

ಒಂದನೇ ತರಗತಿಯಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಒಂದು ದಿನ ಮೊಟ್ಟೆನೀಡಲಾಗುತ್ತಿರುವುದನ್ನು ನಮ್ಮ ಸರ್ಕಾರವು ಇನ್ನು ಮುಂದೆ 9, 10ನೇ ತರಗತಿ ವಿದ್ಯಾರ್ಥಿಗಳಿಗೂ ಸೇರಿಸಿ ವಾರದಲ್ಲಿ ಎರಡು ದಿನ ಮೊಟ್ಟೆನೀಡುತ್ತಿದೆ. ರೈತರಿಗೆ ಮೂರು ಲಕ್ಷ ರು.ವರೆಗಿನ ಬಡ್ಡಿ ರಹಿತ ಸಾಲವನ್ನು ಐದು ಲಕ್ಷ ರು.ಗೆ ಹೆಚ್ಚಿಸಲಾಗಿದೆ. 10 ಲಕ್ಷ ರು.ವರೆಗೆ ಶೇ.3ರಷ್ಟುಬಡ್ಡಿ ಇದ್ದಿದ್ದನ್ನು 15 ಲಕ್ಷಕ್ಕೆ ಹೆಚ್ಚಿಸಲಾಗಿದೆ. ನಾವು ಐದು ವರ್ಷದಲ್ಲಿ 14,54,663 ಮನೆಗಳನ್ನು ನಿರ್ಮಿಸಿದ್ದು, ಕಳೆದ ಬಿಜೆಪಿ ಸರ್ಕಾರಕ್ಕಿಂತ ಆರು ಲಕ್ಷ ಮನೆಗಳನ್ನು ಹೆಚ್ಚಾಗಿ ನಿರ್ಮಿಸಿದ್ದೇವೆ. ಹೀಗೆ ಎಲ್ಲಾ ಇಲಾಖೆಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಸಾಮಾಜಿಕ, ಆರ್ಥಿಕ ವಲಯಕ್ಕೆ ಕಡಿಮೆ ಮಾಡಿಲ್ಲ. ಎಲ್ಲರನ್ನೊಳಗೊಂಡ ಅಭಿವೃದ್ಧಿಯ ಧ್ಯೇಯ ನಂಬಿದೆ ಎಂದು ಮುಖ್ಯಮಂತ್ರಿಗಳು ನುಡಿದರು.